ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, 90ರ ದಶಕದ ಕೋಮು ಗಲಭೆಯಿಂದಾಗಿ ದಾವಣಗೆರೆ ವ್ಯಾಪಾರ ವಹಿವಾಟುಗಳೆಲ್ಲಾ ಚಿತ್ರದುರ್ಗ, ರಾಣೆಬೆನ್ನೂರು ಪಾಲಾಗಿದ್ದು, ಇಂದಿಗೂ ಅದು ಮರಳಿ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಹಬ್ಬದ ನೆಪದಲ್ಲಿ ಸಾಮರಸ್ಯ ಕದಡುವ ಕೆಲಸಕ್ಕೆ ಬಿಜೆಪಿಯವರು ಮುಂದಾಗಿದ್ದಾರೆ ಎಂದರು.
ಬಾಯಿ ಹರುಕ, ಬಾಯಿ ಬಡುಕರಂತೆ ಹರಿಹರ ಶಾಸಕ ಬಿ.ಪಿ.ಹರೀಶ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಇಬ್ಬರೂ ಜಿಲ್ಲಾ ಕೇಂದ್ರದಲ್ಲಿ ಗಲಭೆ ಎಬ್ಬಿಸಲು ಪ್ರಯತ್ನ ನಡೆಸಿದ್ದಾರೆ. ಸಾಮರಸ್ಯ ಇರುವುದನ್ನು ಸಹಿಸಲು ಇಂತಹವರಿಗೆ ಸಾಧ್ಯವಾಗುತ್ತಿಲ್ಲ. ಪ್ರತಿ ಹಬ್ಬಗಳ ವೇಳೆ ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಪ್ರಯತ್ನದಿಂದಾಗಿ ಜನತೆ ಬಿಜೆಪಿಯವರಿಗೆ ಸೊಪ್ಪು ಹಾಕುತ್ತಿಲ್ಲ ಎಂದು ತಿಳಿಸಿದರು.ಸಚಿವ, ಶಾಸಕ, ಸಂಸದರ ಬಗ್ಗೆ ಹತಾಶೆಯಿಂದ ವಿನಾಕಾರಣ ವೈಯಕ್ತಿಕವಾಗಿ ಆರೋಪ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ ನೀಡುತ್ತಿರುವ ಯಶವಂತರಾವ್ ಈಗ ಅಲ್ಪಸಂಖ್ಯಾತರ ಬಗ್ಗೆ ಪ್ರೀತಿ ತೋರುತ್ತಿರುವುದನ್ನು ನೋಡಿದರೆ ಇನ್ನೂ ಶಾಸಕನಾಗುವ ಕನಸ್ಸನ್ನು ಜೀವಂತ ಇಟ್ಟುಕೊಂಡಿದ್ದಾರೆ ಎಂದರು.
ಕೋಟ್...ಶಾಂತಿ, ಸಾಮರಸ್ಯಕ್ಕೆ ಭಂಗ ತಂದರೆ, ಕಾನೂನು ಉಲ್ಲಂಘಿಸಿದರೆ ಯಾರೇ ಆಗಿರಲಿ, ಯಾವುದೇ ಧರ್ಮದವರಾಗಿದ್ದರೂ ಒದ್ದು ಒಳಗೆ ಹಾಕಿಸುವುದಾಗಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಹೇಳಿದ್ದಾರೆ. ಹಿಂದೂಗಳನ್ನಾಗಲೀ, ಮುಸ್ಲಿಮರನ್ನಾಗಲೀ ಗುರಿಯಾಗಿಟ್ಟು ಹೇಳಿದ ಮಾತಲ್ಲ. ಅಲ್ಲದೇ, ದಾವಣಗೆರೆ ಆಡುಭಾಷೆಯಲ್ಲೇ ಮಾತನ್ನಾಡಿದ್ದಾರೆ. ಕೆಲಸ ಇಲ್ಲದ, ಬೇರೆ ಕೆಲಸ ಇಲ್ಲದ ಶಾಸಕ ಬಿ.ಪಿ.ಹರೀಶ ಅಪಪ್ರಚಾರ ಮಾಡುತ್ತಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿ ಬಿಟ್ಟು ಹರೀಶ ಬೇರೆಲ್ಲಾ ಮಾಡುತ್ತಿದ್ದಾರೆ. ಡಿಸಿ, ಎಸ್ಪಿ ಹೀಗೆ ಅಧಿಕಾರಿಗಳು ಸಚಿವರು, ಶಾಸಕರು, ಸಂಸದರ ವಿಚಾರದಲ್ಲಿ ಶಿಷ್ಟಾಚಾರ ಪಾಲಿಸುತ್ತಿದ್ದಾರೆ.