ತಂತ್ರಜ್ಞಾನದಿಂದ ಆರೋಗ್ಯದ ಮೇಲೂ ದುಷ್ಪರಿಣಾಮ

KannadaprabhaNewsNetwork | Published : Jun 16, 2024 1:48 AM

ಸಾರಾಂಶ

ತಂತ್ರಜ್ಞಾನದಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದ್ದು, ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದ್ದು, ಗ್ರಾಮೀಣರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ತಂತ್ರಜ್ಞಾನದಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದ್ದು, ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದ್ದು, ಗ್ರಾಮೀಣರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು. ತಾಲೂಕಿನ ಮಡೆನೂರು ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಮಹಾವೀರ್ ಜೈನ್ ಆಸ್ಪತ್ರೆ, ನೇತ್ರದೀಪ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವನ್ನು ಹಣ ನೀಡಿ ಪಡೆಯಲಾಗುವುದಿಲ್ಲ. ಅದು ಪ್ರತಿಯೊಬ್ಬರ ಬದುಕಿನ ಭಾಗ್ಯ. ನಮ್ಮ ಹಿರಿಯರ ಜೀವನಾನುಭವದ ಪವಿತ್ರ ಪರಂಪರೆ ಮತ್ತು ಪದ್ದತಿಗಳ ಮಹತ್ವನ್ನು ಅರಿಯಬೇಕಿದೆ. ರೋಗ ಬಂದು ನರಳುವುದಕ್ಕಿಂತ ರೋಗ ಬರದ ಹಾಗೆ ಎಚ್ಚರವನ್ನು ವಹಿಸಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ನಡೆಯುವ ಅನ್ನದಾನ, ವಿದ್ಯಾದಾನ, ಔಷಧ ದಾನ, ಅಭಯ ದಾನಗಳ ಬಗ್ಗೆ ತಿಳಿಸಿದರು. ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್ ಮಾತನಾಡಿ, ಮಹಿಳೆಯರ ಸಬಲೀಕಣಕ್ಕಾಗಿ ಧರ್ಮಸ್ಥಳದ ಯೋಜನೆಯು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದರ ಪ್ರಯೋಜನ ಪಡೆದುಕೊಂಡು ಸದೃಢರಾಗಬೇಕು. ಆರೋಗ್ಯ ರಕ್ಷಾ, ಸುರಕ್ಷಾ ಯಶಸ್ವೀನಿ, ಆಯುಷ್ಮಾನ್ ಕಾರ್ಡ್ ಮೂಲಕ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.ಆರು ಜನ ಫಲಾನುಭವಿಗಳಿಗೆ ಜನಮಂಗಳ ಕಾರ್ಯಕ್ರಮದಲ್ಲಿ ಮಂಜೂರಾಗಿದ್ದ ವಾಟರ್ ಬೆಡ್, ವೀಲ್‌ಚೇರ್, ಕಾರ್ಮೋಡ್ ವೀಲ್‌ಚೇರ್‌ನ್ನು ವಿತರಿಸಲಾಯಿತು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸದಸ್ಯರಿಗೆ ರಕ್ತ ಪರೀಕ್ಷೆ, ಬಿಪಿ, ಶುಗರ್, ತೂಕ, ಕಣ್ಣು, ಕಿವಿ ತಪಾಸಣೆ ನಡೆಸಲಾಯಿತು.

ಯೋಜನಾಧಿಕಾರಿ ಉದಯ್, ಆರ್ಥಿಕ ಸಾಕ್ಷರತ ಕೇಂದ್ರದ ಸಮಾಲೋಚಕಿ ರೇಖಾ, ಮಹಾವೀರ್ ಜೈನ್ ಆಸ್ಪತ್ರೆಯ ಮಂಜುನಾಥ್, ನೇತ್ರದೀಪ ಆಸ್ಪತ್ರೆಯ ರಾಜ್‌ಕುಮಾರ್, ಹಿಯರಿಂಗ್ ಸೆಲ್ಯೂಷನ್‌ನ ಅನ್ವಿ, ಶ್ರೀನಿವಾಸ್, ಶಂಕರಮೂರ್ತಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ, ಸೇವಾಪ್ರತಿನಿದಿ ನಾಗಮಣಿ, ವಿಎಲ್‌ಇ ರೇಖಾ ಇದ್ದರು.

Share this article