ಹರಪನಹಳ್ಳಿ: ಅತ್ಯಂತ ವೈಭವದ ಗಣೇಶೋತ್ಸವಕ್ಕೆ ಹರಪನಹಳ್ಳಿ ತಾಲೂಕು ಸಜ್ಜುಗೊಂಡಿದೆ. ವಿವಿಧ ಸಂಘಟನೆಗಳು ಅದರಲ್ಲೂ ವಿಎಚ್ಪಿ, ಬಜರಂಗದಳ ಕಾರ್ಯಕರ್ತರು ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಲು ಸಕಲ ಸಿದ್ಧತೆ ಕೈಗೊಂಡಿದ್ದಾರೆ.
ವಿಎಚ್ಪಿ, ಬಜರಂಗದಳ ಕಾರ್ಯಕರ್ತರು ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನ ಬಳಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಿದ್ದು, 9 ಅಡಿ ಎತ್ತರದ ರಾಮನ ರೂಪದಲ್ಲಿರುವ ಸುಂದರ ಗಣೇಶ ಮೂರ್ತಿ ಸ್ಥಾಪಿಸಿದ್ದಾರೆ.ಪೂರ್ಣವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಇದಾಗಿದೆ. 11 ದಿನಗಳ ಕಾಲ ಪೂಜಿಸಲ್ಪಡುತ್ತಾನೆ. ಕೋಟೆ ಆಂಜನೇಯ ದೇವಸ್ಥಾನದಿಂದ ಐಬಿ ಸರ್ಕಲ್ ವರೆಗೂ ಅಂದಾಜು 2 ಕಿ.ಮೀ. ಉದ್ದ ರಸ್ತೆ ಮಧ್ಯೆ ದೀಪದ ಅಲಂಕಾರ ಹಾಗೂ ಹಿರೇಕೆರೆ ವೃತ್ತ ಹಾಗೂ ಪ್ರವಾಸಿ ಮಂದಿರ ವೃತ್ತದಲ್ಲಿ ಮಹಾದ್ವಾರ ನಿರ್ಮಿಸಲಾಗುವುದು ಎಂದು ವಿಎಚ್ಪಿ ಪದಾಧಿಕಾರಿಗಳು ತಿಳಿಸಿದ್ದಾರೆ.
6 ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದರಲ್ಲಿ ಸೆ.13ರಂದು ಸ್ಥಳೀಯ ಹಾಲಸ್ವಾಮಿ ಮಠದ ಸಣ್ಣಹಾಲಸ್ವಾಮಿ ನೇತೃತ್ವದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಇದೆ. 17ರಂದು ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ.485 ಸಾರ್ವಜನಿಕ ಗಣಪತಿಗಳು:
ಪಟ್ಟಣದಲ್ಲಿ 24 ಸೇರಿದಂತೆ ತಾಲೂಕಿನಲ್ಲಿ ಒಟ್ಟು 485 ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಸ್ಛಾಪನೆ ಮಾಡುವ ಕಾರ್ಯ ಭರದಿಂದ ಸಾಗಿದೆ. ಅದರಲ್ಲಿ 2 ಗಣೇಶ ಮೂರ್ತಿಗಳು ಒಂದು ದಿನದಲ್ಲಿ, 389 ಗಣಪತಿಗಳು ಮೂರು ದಿನದಲ್ಲಿ, 77 ಗಣಪತಿಗಳು ಐದು ದಿನದಲ್ಲಿ 6 ಗಣಪತಿಗಳು ಏಳು ದಿನದಲ್ಲಿ 10 ಗಣಪತಿ ಮೂರ್ತಿಗಳು ಒಂಬತ್ತು ದಿನದಲ್ಲಿ 1 ಗಣಪ ಎಂಟು ದಿನದಲ್ಲಿ ಹಾಗೂ ಹಿಂದೂ ಮಹಾ ಗಣಪ ಮಾತ್ರ 11ನೇ ದಿನದಲ್ಲಿ ವಿಸರ್ಜನೆಗೊಳ್ಳುತ್ತಿವೆ.11ನೇ ದಿನ ವಿಸರ್ಜನೆಗೊಳ್ಳುವ ಹಿಂದೂ ಮಹಾಗಣಪತಿ ವಿಸರ್ಜನೆಗೆ ಸಾಕಷ್ಟು ಬಂದೋಬಸ್ತ್ ಕಲ್ಪಿಸಿದ್ದಾರೆ.
ಗಣೇಶ ವಿಸರ್ಜನೆಗೆ ಪುರಸಭೆಯವರು ಕಾಯಕದಹಳ್ಳಿ ರಸ್ತೆಯಲ್ಲಿರುವ ನಾಯಕನಕೆರೆ ಯಲ್ಲಿ ಹೊಂಡ, ಹರಿಹರ ರಸ್ತೆಯ ಆಶ್ರಯ ಬಡಾವಣೆ ಬಳಿ ಹೀಗೆ ಎರಡು ಕಡೆ ಹೊಂಡಗಳನ್ನು ತೋಡಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ತಿಳಿಸಿದ್ದಾರೆ.ಹರಪನಹಳ್ಳಿಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಪುರಸಭೆಯವರು ಹೊರವಲಯದ ನಾಯಕನಕೆರೆಯಲ್ಲಿ ಹೊಂಡ ನಿರ್ಮಿಸಿ ನೀರು ಹರಿಸಿ ಸಿದ್ಧತೆ ಕೈಗೊಂಡಿರುವುದು.