ರೋಗಿ ಕೈಲಿ ಮಲಗುಂಡಿ ಕ್ಲೀನ್‌ ಮಾಡಿಸಿದ ಸವಣೂರು ಆಸ್ಪತ್ರೆ!

Published : Aug 31, 2026, 10:16 AM IST
Savanuru

ಸಾರಾಂಶ

ಚಿಕಿತ್ಸೆ ಪಡೆಯುವ ಸಲುವಾಗಿ ಶಿಗ್ಗಾಂವಿಯಿಂದ ಸವಣೂರು ತಾಲೂಕು ಆಸ್ಪತ್ರೆಗೆ ಆಗಮಿಸಿದ್ದ ರೋಗಿಯಿಂದ ಆಸ್ಪತ್ರೆಯ ಮಲಗುಂಡಿ ಸ್ವಚ್ಛಗೊಳಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ವರ್ಷಗಳಿಂದ ತುಂಬಿಕೊಂಡಿದನ್ನು ರೋಗಿಯಿಂದ ಸ್ವಚ್ಛಗೊಳಿಸಲಾಗಿದೆ ಎನ್ನಲಾಗಿದೆ.

ಸವಣೂರು : ಚಿಕಿತ್ಸೆ ಪಡೆಯುವ ಸಲುವಾಗಿ ಶಿಗ್ಗಾಂವಿಯಿಂದ ಸವಣೂರು ತಾಲೂಕು ಆಸ್ಪತ್ರೆಗೆ ಆಗಮಿಸಿದ್ದ ರೋಗಿಯಿಂದ ಆಸ್ಪತ್ರೆಯ ಮಲಗುಂಡಿ ಸ್ವಚ್ಛಗೊಳಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ತಾಲೂಕು ಆಸ್ಪತ್ರೆಯ ಶೌಚಗೃಹದಮಲಗುಂಡಿಯನ್ನು ಹಲವು ವರ್ಷಗಳಿಂದ ತುಂಬಿಕೊಂಡಿತ್ತು. ಇದನ್ನು ರೋಗಿಯಿಂದ ಸ್ವಚ್ಛಗೊಳಿಸಲಾಗಿದೆ ಎನ್ನಲಾಗಿದೆ. ನರ್ಸಿಂಗ್ ಸೂಪರ್‌ವೈಸರ್‌ ಒಬ್ಬರಿಗೆ ಪರಿಚಯವಿದ್ದ ರೋಗಿಯಿಂದ ಈ ಕೆಲಸ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆ.28ರಂದು ಈ ಘಟನೆ ನಡೆದಿದೆ.

ಅಕ್ಕಪಕ್ಕದ ನಿವಾಸಿಗಳು ಸ್ಥಳಕ್ಕೆ ಬಂದಾಗ ಘಟನೆ ಬೆಳಕಿಗೆ

ಮಲಗುಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸುತ್ತಮುತ್ತ ಭಾರಿ ದುರ್ವಾಸನೆ ಹರಡಿದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಸ್ಥಳಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಆಸ್ಪತ್ರೆಯ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳಿಕ ಪುರಸಭೆಯ ಯಂತ್ರವನ್ನು ಬಳಸಿ ಮಲಗುಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ. ಮನುಷ್ಯರಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿಗೆ ಕಾನೂನಿನ ಮೂಲಕ ನಿಷೇಧವಿದ್ದರೂ, ಸರ್ಕಾರಿ ಆಸ್ಪತ್ರೆಯಲ್ಲೇ ಇಂತಹ ಕೃತ್ಯ ನಡೆದಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಆಸ್ಪತ್ರೆಯಲ್ಲಿ ಅಗತ್ಯ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತನಿಖೆ ನಡೆಸಿ ಕ್ರಮ

ಸವಣೂರು ತಾಲೂಕು ಆಸ್ಪತ್ರೆಯಲ್ಲಿ ರೋಗಿಯಿಂದ ಮಲಗುಂಡಿ ಸ್ವಚ್ಛಗೊಳಿಸಿದ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಸ್ಪತ್ರೆಯ ಸೂಪರ್ ವೈಸರ್‌ರನ್ನು ಪ್ರಾಥಮಿಕ ವಿಚಾರಣೆ ನಡೆಸಿ ನೋಟಿಸ್ ನೀಡಲಾಗಿದೆ. ಸೋಮವಾರ ಹೆಚ್ಚಿನ ತನಿಖೆ ನಡೆಸಿ ಸೂಕ್ತಕ್ರಮ ಕೈಗೊಳ್ಳಲಾಗುವುದು.

- ಡಾ. ಶಂಕರ ಹಿರೇಗೌಡ್ರ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ, ಸವಣೂರು

PREV
Stay updated with recent news from Haveri district (ಹಾವೇರಿ ಸುದ್ದಿ) — covering local governance, agriculture and farming developments, heritage & tourism (temples, wildlife sanctuaries), economic and industry news, environment and civic issues, and community events across Haveri on Kannada Prabha News.
Read more Articles on

Recommended Stories

ಬನ್ನೂರಲ್ಲಿ ಕಲ್ಮೇಶ್ವರ–ಬಸವಣ್ಣ ದೇಗುಲ ಲೋಕಾರ್ಪಣೆ
ಸಮಾಜಕ್ಕೆ ಸತ್ಯ, ಶಾಂತಿ ಸಂದೇಶ ಸಾರಿದವರು ಮೊಹಮ್ಮದ ಪೈಗಂಬರ್‌