ಚನ್ನಪಟ್ಟಣ: ಈ ಕ್ಷೇತ್ರದ ಶಾಸಕರಾದ ಕುಮಾರಸ್ವಾಮಿ ಅವರನ್ನು ನೀವೆಲ್ಲ ಸೇರಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಿ ಹಚ್ಚಿನ ಮತ ನೀಡಿ ಗೆಲ್ಲಿಸಿದಿರಿ. ಆದರೆ, ನಿಮ್ಮ ಶ್ರಮವನ್ನು ಮರೆತ ಅವರು ಇದೀಗ ಮಂಡ್ಯಕ್ಕೆ ಪಲಾಗೈದಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.
ನಗರದ ಮೆಹಂದಿನಗರ, ಟಿಪ್ಪುನಗರ, ಮದೀನಾ ಚೌಕ್ ಹಾಗೂ ಶೇರ್ವಾ ಸರ್ಕಲ್ನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಎರಡು ದಶಕಗಳ ಹಿಂದೆ ಚನ್ನಪಟ್ಟಣ ಹೇಗಿತ್ತೋ ಇಂದು ಹಾಗೆಯೇ ಇದೆ. ಏನೇನು ಅಭಿವೃದ್ಧಿ ಕಂಡಿಲ್ಲ. ಇದನ್ನು ಚನ್ನಪಟ್ಟಣದ ದುರಾದೃಷ್ಟವೆನ್ನದೇ ವಿಧಿ ಇಲ್ಲ. ಎರಡು ಬಾರಿ ಕ್ಷೇತ್ರದ ಶಾಸಕರಾದ ಕುಮಾರಸ್ವಾಮಿ, ಈ ಹಿಂದೆ ಶಾಸಕರಾಗಿದ್ದ ಯೋಗೇಶ್ವರ್ ಕ್ಷೇತ್ರವನ್ನು ಕಡೆಗಣಿಸಿದ್ದರಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಆರೋಪಿಸಿದರು.ಈ ಹಿಂದೆಯೇ ನಾನು ಕುಮಾರಸ್ವಾಮಿ ಪಂಚೆಯ ಒಳಗೆ ಖಾಕಿ ಚಡ್ಡಿ ಧರಿಸಿದ್ದಾರೆ ಎಂದು ಹೇಳಿದ್ದೆ, ಇದೀಗ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅದು ನಿರೂಪಿತವಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಂಬಿ ನೀವು ಮತ ನೀಡಿದ್ದೀರಿ, ಮತ್ತೆ ನೀವು ಅವರನ್ನು ನಂಬಿ ಒಂದು ಮತ ನೀಡಿದರೆ, ಬಿಜೆಪಿಗೆ ಎರಡು ಮತ ನೀಡಿದಂತಾಗುತ್ತದೆ ಎಂಬುದನ್ನು ಮರೆಯಬೇಡಿ ಎಂದು ತಿಳಿಸಿದರು.ಚನ್ನಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಸೂರು ಕಲ್ಪಿಸಿಲ್ಲ. ಈ ಕುರಿತು ನಾನೇ ಸಾಕಷ್ಟು ಬಾರಿ ಕುಮಾರಸ್ವಾಮಿ ಅವರ ಗಮನ ಸೆಳೆದು ನಿವೇಶನ ಕಲ್ಪಿಸುವಂತೆ ಮನವಿ ಮಾಡಿದೆ. ಆದರೆ, ಅವರು ಸ್ಪಂದಿಸಲಿಲ್ಲ. ಅವರಿಗೆ ಕ್ಷೇತ್ರದ ಜನರ ಕುರಿತು ಕಾಳಜಿಯೇ ಇಲ್ಲ ಎಂದು ಟೀಕಿಸಿದರು.ನುಡಿದಂತೆ ನಡೆದಿರುವ ಕಾಂಗ್ರೆಸ್:
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ನುಡಿದಂತೆ ನಡೆದಿದೆ. ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಎಲ್ಲ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದಿದ್ದು, ನುಡಿದಂತೆ ನಡೆದಿದೆ. ಬಡವರು, ಮಧ್ಯಮವರ್ಗದ ಪರ ಕಾಳಜಿ ಇದ್ದರೆ ಅದು ಕಾಂಗ್ರೆಸ್ಗೆ ಮಾತ್ರ. ಸುರೇಶ್ರಂತ ಕ್ರಿಯಾಶೀಲ ಸಂಸದರು ಸಿಗುವುದು ಕಷ್ಟ. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಿ ಎಂದರು.ಸೂರಿಲ್ಲದವರಿಗೆ ನಿವೇಶನ ಕಲ್ಪಿಸಬೇಕು ಎಂಬ ಉದ್ದೇಶದಿಂದ ವಸತಿ ಖಾತೆ ಪಡೆದೆ. ಈ ಹಿಂದೆ 2013ರಲ್ಲಿ ಸಿದ್ದರಾಮಯ್ಯ ಸಿಎಂ ಅಗಿದ್ದಾಗ ಅನುಷ್ಠಾನಕ್ಕೆ ತಂದಿದ್ದ ವಸತಿ ಯೋಜನೆಯನ್ನು ಬಿಜೆಪಿಯವರು ಜಾರಿಗೆ ತರಲಿಲ್ಲ. ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾರೂ ಬಡವರಿಗೆ ಸೂರು ಕಲ್ಪಿಸುವ ಕುರಿತು ಆಲೋಚನೆಯನ್ನೇ ಮಾಡಲಿಲ್ಲ. ಮತ್ತೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದ ನಂತರ ಬಡವರಿಗ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 1.80 ವಸತಿರಹಿತರಿಗೆ ಸೂರು ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸುಮಾರು 37 ಸಾವಿರ ಮಂದಿಗೆ ಮನೆ ನಿರ್ಮಿಸಿಕೊಡಲಾಗಿದೆ. ಮುಂದಿನ ವರ್ಷದೊಳಗೆ ಸರ್ವೇ ನಡೆಸಿ ಎಲ್ಲ ಬಡವರಿಗೂ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್.ಪ್ರಮೋದ್, ಸುನೀಲ್ ಇತರರಿದ್ದರು.ಬಾಕ್ಸ್..........ಆರ್ಎಸ್ಎಸ್ ವರದಿಯಲ್ಲಿ ಬಿಜೆಪಿಗೆ 218 ಸೀಟ್ಆರ್ಎಸ್ಎಸ್ ವರದಿ ಪ್ರಕಾರ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 218 ಸೀಟ್ ಲಭಿಸಿದರೆ ಹೆಚ್ಚು ಎಂದಿದೆ. ಅದಕ್ಕೆ ಬಿಜೆಪಿಯವರಿಗೆ ಅತಂಕವಾಗಿದೆ. ಚುನಾವಣೆಗಳಲ್ಲಿ ನಮ್ಮ ಸಮುದಾಯದವರು ಮತಗಟ್ಟೆಗೆ ಬಾರದ ಪರಿಣಾಮ ಅವರಿಗೆ ಅನುಕೂಲವಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಆಗಾಗದಂತೆ ಎಚ್ಚರಿಕೆ ವಹಿಸಿ, ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಡಿ.ಕೆ.ಸುರೇಶ್ ಪರ ಮತ ಚಲಾಯಿಸಿ ಎಂದು ಸಚಿವ ಜಮೀರ್ ಅಹ್ಮದ್ ಮನವಿ ಮಾಡಿದರು.ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಯಾವ ರೀತಿಯ ಬದಲಾವಣೆಗಳು ಆಗಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಮಾಡಲಿರುವ ಅಭಿವೃದ್ಧಿ ಕಾರ್ಯಗಳನ್ನು ಹೇಳಿ ಮತಯಾಚಿಸುತ್ತಿದ್ದರೆ, ಅವರು ಧರ್ಮದ ಆಧಾರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ನಮಗೆ ದೇಶದಲ್ಲಿ ಶಾಂತಿ ಸೌಹಾರ್ದತೆ ಮುಖ್ಯ. ಅದನ್ನು ಕಾಪಾಡುವ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಕಾಂಗ್ರೆಸ್ಗೆ ಮತಚಲಾಯಿಸಿ ಎಂದು ಕರೆ ನೀಡಿದರು.ಪೊಟೋ೧೪ಸಿಪಿಟಿ೧:ಚನ್ನಪಟ್ಟಣದ ಶೇರ್ವಾ ಹೋಟೆಲ್ ಬಳಿ ಸಚಿವ ಜಮೀರ್ ಅಹ್ಮದ್ ಡಿ.ಕೆ.ಸುರೇಶ್ ಪರ ಚುನಾವಣಾ ಪ್ರಚಾರ ನಡೆಸಿದರು.