ಆಧ್ಯಾತ್ಮಿಕ ಸಶಕ್ತಿಕರಣದಿಂದ ಸ್ವಚ್ಛ, ಸ್ವಾಸ್ಥ್ಯ ಸಮಾಜ ಉದ್ಘಾಟನೆ ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಾಧನೆಯ ಹಾದಿ ಸುಗಮವಲ್ಲ, ಛಲವಿದ್ದವರು ಮಾತ್ರ ಹಾದಿಯಲ್ಲಿ ಸಾಗಲು ಸಾಧ್ಯ. ಆ ರೀತಿ ವಿದ್ಯಾರ್ಥಿ ಗಳು ಅಪೇಕ್ಷೆ ಪಟ್ಟಂತ ಯಶಸ್ಸನ್ನು ಪಡೆಯಲು ಸಾಧನೆ ಹಾದಿಯಲ್ಲಿ ಸಾಗಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ನಗರದ ಬ್ರಹ್ಮಕುಮಾರೀಸ್ ಸಂಸ್ಥೆಯಲ್ಲಿ ನಡೆದ ಆಧ್ಯಾತ್ಮಿಕ ಸಶಕ್ತಿಕರಣದಿಂದ ಸ್ವಚ್ಛ, ಸ್ವಾಸ್ಥ್ಯ ಸಮಾಜ ಉದ್ಘಾಟನೆ ಹಾಗೂ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.ಪ್ರತಿಭೆ ಎಲ್ಲರಲ್ಲಿದೆ, ಆಧುನಿಕತೆ ಬೆಳೆದಂತೆ ಸ್ಫರ್ಧೆಗಳು ಹೆಚ್ಚಿದೆ. ಹೀಗಾಗಿ ಇವರೆಡರ ನಡುವೆ ಸಾಮಾಜಿಕ ಜವಾಬ್ದಾರಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋದರೆ ಮಾತ್ರ ಯಶಸ್ಸು ನಿಶ್ಚಿತ ಎಂದ ಅವರು, ಮಕ್ಕಳು ವಿದ್ಯಾಕ್ಷೇತ್ರದಲ್ಲಿ ಸಾಧನೆಗೈಯಲು ಹೆಚ್ಚು ಶ್ರಮವಹಿಸಬೇಕು ಎಂದರು.
ವೃತ್ತಿಯಲ್ಲಿ ಶ್ರದ್ಧೆ, ನಿಷ್ಟೆ ಹಾಗೂ ನೈತಿಕ ಮೌಲ್ಯ ಹೊಂದಿರಬೇಕು. ಮರಳಿಯತ್ನಿಸು ಎಂಬ ನಾಣ್ಣು ಡಿ ಯಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು. ಅದರ ಜೊತೆಗೆ ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಾಧನೆ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ಸಮಾಜ ದಲ್ಲಿ ಒಂದು ಹಂತದಲ್ಲಿ ವಿದ್ಯಾರ್ಥಿಗಳು ಬೆಳೆಯಲು ಶಿಕ್ಷಣ ಬಹುಮುಖ್ಯ. ಬದುಕಿನಲ್ಲಿ ಹಲವಾರು ಅಡೆತಡೆಗಳು ಎದುರಾಗಲಿದೆ. ಎಲ್ಲವನ್ನೂ ಮೀರಿ ನಿಂತು ಶ್ರಮವಹಿಸಿ ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಗಳಿಸಿದರೆ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಪೋಷಕರು, ವೈದ್ಯ ಅಥವಾ ಇಂಜಿನಿಯರ್ಗಳಾಗಬೇಕೆಂಬ ಆಸೆಗಳ ಮೂಟೆ ಮಕ್ಕಳಿಗೆ ಹೊರಿಸಬಾರದು. ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಪ್ರೋತ್ಸಾಹಿಸಿದರೆ ನಾಗರೀಕ ಸಮಾಜದಲ್ಲಿ ಉತ್ತಮರಾಗಬಹುದು. ಇತ್ತೀಚೆಗೆ ಸರ್ಕಾರ ನೌಕರರಿಗಿಂತ ಹೆಚ್ಚು ದುಡಿಮೆಯನ್ನು ಸ್ವಂತ ವ್ಯಾಪಾರದಲ್ಲಿ ಕಾಣುತ್ತಿರುವುದು ನಮ್ಮ ಮುಂದಿದೆ ಎಂದು ಹೇಳಿದರು.ಮನಸ್ಸು, ಬುದ್ದಿ ಹಾಗೂ ಮೆದುಳನ್ನು ಆಧ್ಯಾತ್ಮಿಕ ಸಶಕ್ತಿಕರಣದಿಂದ ಸ್ವಚ್ಛವಾಗಿಡಬಹುದು. ಬಾಲ್ಯ ದಿಂದಲೇ ಮಕ್ಕಳು ಆಧ್ಮಾತ್ಮಿಕ ಅಭಿರುಚಿ ಬೆಳೆಸಿಕೊಂಡಲ್ಲಿ ಮುಂದಿನ ಉನ್ನತ ವ್ಯಾಸಂಗಕ್ಕೆ ಬಹಳಷ್ಟು ಸಹಕಾರಿ. ಮನಸ್ಸು ಹತೋಟಿ ಹಾಗೂ ಗೊಂದಲಗಳನ್ನು ನಿವಾರಿಸಲು ಆಧ್ಯಾತ್ಮಿಕ ಚಿಂತನೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕಿ ಭಾಗ್ಯ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಕೇವಲ ಅಂಕಗಳಿಗೆ ಮಾತ್ರ ಸೀಮಿತರಾಗದೇ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ಸಂಕಲ್ಪ ಶಕ್ತಿ ಗ್ರಹಿಸಿದರೆ ಸಾಧನೆ ಮಾಡಬಹುದು. ಕೇವಲ ಪುಸ್ತಕದ ಹುಳುವಾಗದೇ ಸಾಮಾಜಿಕ ಹಾಗೂ ಆಧ್ಮಾತ್ಮಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಪ್ರಸ್ತುತ ದಿನಗಳಲ್ಲಿ ಹಲವಾರು ಯುವಕರು ವಿದ್ಯಾವಂತರಾಗಿ ಕೆಲಸವಿಲ್ಲದೇ ಮನೆಯಲ್ಲೇ ಕೂರುವಂತಾ ಗಿದೆ. ಹಾಗಾಗಿ ಶಿಕ್ಷಣದ ಜೊತೆಗೆ ಬದುಕಿನ ಮೌಲ್ಯ ಅಳವಡಿಸಿಕೊಂಡು ಮುನ್ನಡೆದರೆ ಯಶಸ್ಸು ತಾನಾಗಿಯೇ ಲಭಿಸಲಿದೆ. ವೃತ್ತಿಯಲ್ಲಿ ಕಷ್ಟ ಸುಖ ಸಮಾನವಾಗಿ ತೆಗೆದುಕೊಂಡಲ್ಲಿ ಆದರ್ಶಪ್ರಾಯವಾಗಿ ಬೆಳವಣಿಗೆ ಹೊಂದಲು ಸಹಕಾರಿ ಎಂದರು.
ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ತಾಲೂಕಿನ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಗಳಿಸಿದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೇ.100 ಫಲಿತಾಂಶ ಪಡೆದ ಶಾಲೆಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಜನರಲ್ ಬಿ.ಎಚ್.ರಾಜು, ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್. ಮೇಟಿ, ಎಸ್ ಬಿಐ ಹಿರಿಯ ವ್ಯವಸ್ಥಾಪಕ ಕೃಷ್ಣ ಕಿಶೋರ್, ಜ್ಞಾನರಶ್ಮಿ ಶಾಲೆ ಸಂಸ್ಥಾಪಕ ನಂದಕುಮಾರ್ ಉಪಸ್ಥಿತರಿದ್ದರು.
ಪೋಟೋ ಫೈಲ್ ನೇಮ್ 9 ಕೆಸಿಕೆಎಂ 1ಚಿಕ್ಕಮಗಳೂರಿನ ಬ್ರಹ್ಮಕುಮಾರೀಸ್ ಸಂಸ್ಥೆಯಲ್ಲಿ ಭಾನುವಾರ ಎಸ್ಎಸ್ಎಲ್ಸಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಸಕ ಎಚ್.ಡಿ. ತಮ್ಮಯ್ಯ, ಡಾ. ಗೋಪಾಲ ಕೃಷ್ಣ, ಭಾಗ್ಯ ಹಾಗೂ ವಿದ್ಯಾರ್ಥಿಗಳು ಇದ್ದರು.