ಕುಷ್ಟಗಿ: ತಾಲೂಕಿನ ಬಿಜಕಲ್ಲ ಗ್ರಾಪಂ ವ್ಯಾಪ್ತಿಯ ಕೆ. ಬೋದೂರ ತಾಂಡಾದಲ್ಲಿ ನರೇಗಾ ಯೋಜನೆಯಡಿ ನಡೆದ ಕಾಮಗಾರಿ ಸ್ಥಳದಲ್ಲಿ ದುಡಿಯೋಣ ಬಾ ಅಭಿಯಾನ, ಸ್ತ್ರೀಚೇತನ ಅಭಿಯಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯಾವುದೆ ಕಾರಣಕ್ಕೂ ಕೂಲಿಕಾರರು ವಲಸೆ ಹೋಗಬಾರದು ಎಂಬ ಕಾರಣಕ್ಕೆ ನರೇಗಾ ಯೋಜನೆ ಜಾರಿಗೆ ಬಂದಿದ್ದು, ಈ ಯೋಜನೆಯ ಮೂಲಕ ಕೆಲಸ ಪಡೆದುಕೊಂಡು ಅಭಿವೃದ್ಧಿ ಕಾಣಬೇಕು ಎಂದರು.ನರೇಗಾ ಯೋಜನೆಯಡಿ ಒಳಗೊಳ್ಳದ ಕುಟುಂಬಗಳನ್ನು ಗುರುತಿಸಿ ಅಕುಶಲ ಕೆಲಸಕ್ಕಾಗಿ ನೋಂದಾಯಿಸುವುದು, ನೋಂದಾಯಿತ ಕೂಲಿಕಾರರಿಗೆ ನಿರಂತರ ಕೆಲಸ ಒದಗಿಸಿ, ಗ್ರಾಮೀಣ ಭಾಗದ ಜನರು ವಲಸೆ ಹೋಗುವುದನ್ನು ತಪ್ಪಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ದುರ್ಬಲ ವರ್ಗದ ಕುಟುಂಬಗಳ ವಿಶೇಷಚೇತನರು, ಮಹಿಳಾ ಪ್ರಧಾನ ಕುಟುಂಬಗಳು, ಲಿಂಗತ್ವ ಅಲ್ಪಸಂಖ್ಯಾತರ ಭಾಗವಹಿಸುವಿಕೆ ಹೆಚ್ಚಳದ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಸಕಾಲದಲ್ಲಿ ಕೆಲಸ ಒದಗಿಸುವುದು, ವಿಶೇಷವಾಗಿ ಮಹಿಳೆಯರಿಗೆ ಕೆಲಸ ಒದಗಿಸಲು ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಮಹಿಳಾ ಭಾಗವಹಿಸುವಿಕೆ ಪ್ರಸ್ತುತ ಶೇ. 51 ಇದ್ದು ಶೇ. 60ಕ್ಕೆ ಹೆಚ್ಚಳ ಮಾಡಲು ಗಮನ ಹರಿಸುವಂತೆ ತಿಳಿಸಿದರು.ಪಿಡಿಒ ಆನಂದರಾವ್ ಕುಲಕರ್ಣಿ ಮಾತನಾಡಿ, ನರೇಗಾದಲ್ಲಿ ಕೆಲಸ ಮಾಡುವ ಕೂಲಿಕಾರರು ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ನರೇಗಾ ಕಾಮಗಾರಿ ಸ್ಥಳದಲ್ಲಿಯೆ ಆರೋಗ್ಯ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಗ್ರಾಪಂ ಸದಸ್ಯ ಯಮನೂರ ರಾಠೋಡ, ತಾಪಂ ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಅಧಿಕಾರಿ ನಾಗರಾಜ ದೊಡ್ಡಮನಿ, ಸೌಮ್ಯಾ, ನೀಲಕಂಠಪ್ಪ, ಸ್ವಾತಿ ಹಿರೇಮಠ, ಯಂಕಪ್ಪ, ಆಶಾ ಕಾರ್ಯಕರ್ತೆ ಲಕ್ಷ್ಮಿ, ಕಾಯಕ ಬಂಧುಗಳಾದ ಅಮರೇಶ ರಾಠೋಡ, ಪೂರ್ಣಿಮಾ ಚವ್ಹಾಣ, ಮುತ್ತು ಚವ್ಹಾಣ, ಕೂಲಿ ಕಾರ್ಮಿಕರು ಇದ್ದರು.