ಕನ್ನಡಪ್ರಭ ವಾರ್ತೆ ಕಾರ್ಕಳ
ಹೆಬ್ರಿ ತಾಲೂಕಿನ ಶಿವಪುರ ಬಿಲ್ಲುಬೈಲು ಹಾಗೂ ಕನ್ಯಾನ ಪ್ರದೇಶಗಳಲ್ಲಿ ನಡೆಯುತ್ತಿರುವ ಉಡುಪಿ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಹೆದ್ದಾರಿ ನಿರ್ಮಾಣಕ್ಕಾಗಿ ಮಣ್ಣು ಅಗೆದ ಪರಿಣಾಮ ಬಿಲ್ಲುಬೈಲು ಪ್ರದೇಶದ ಐದು ನಲಿಕೆ ಸಮುದಾಯದ ಮನೆಗಳಿಗೆ ಸಂಪರ್ಕ ಹೊಂದಿದ್ದ ರಸ್ತೆ ಮಳೆಯಿಂದಾಗಿ ಸಂಪೂರ್ಣವಾಗಿ ಕುಸಿದಿದ್ದು, ಸಂಚಾರಕ್ಕೆ ಸಂಪೂರ್ಣ ಅಡಚಣೆ ಉಂಟಾಗಿದೆ.
ಹೆದ್ದಾರಿ ಅಂಚು ಕುಸಿಯುತ್ತಿರುವುದು ಕನ್ಯಾನದ ಗಂಭೀರ ಸಮಸ್ಯೆ. ಹೆದ್ದಾರಿ ಅಂಚಿನ ಮನೆಗಳಿಗೆ ಭೂ ಕುಸಿತದ ಭೀತಿ ಎದುರಾಗಿವೆ. ಈ ಹಿನ್ನೆಲೆ ಸಮಾಜಸೇವಕ ಬೈಕಾಡಿ ಮಂಜುನಾಥ ರಾವ್, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತಡೆಗೋಡೆ ನಿರ್ಮಾಣದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.ಡಿಸಿಯ ತ್ವರಿತ ಕ್ರಮ:
ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ತಕ್ಷಣ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕುಸಿಯುವ ಭೀತಿಯಲ್ಲಿರುವ ಎಲ್ಲ ಸ್ಥಳಗಳನ್ನು ಸಮಗ್ರವಾಗಿ ಸರ್ವೆ ನಡೆಸಿ ಶೀಘ್ರ ವರದಿ ನೀಡುವಂತೆ ಆದೇಶಿಸಿದ್ದಾರೆ. ವರದಿ ಅನುಮೋದನೆಯ ನಂತರ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಜರುಗಿಸಲು ಸೂಚನೆ ನೀಡಿದ್ದಾರೆ.ಪೆರ್ಡೂರು- ಹೆಬ್ರಿ ವರೆಗೆ ಹಲವೆಡೆ ರಸ್ತೆ ಅಂಚುಗಳು ಕುಸಿಯುತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ಭದ್ರತೆಯ ಸಮಸ್ಯೆ ಎದುರಾಗಿದೆ. ಮಳೆ ಕಾರಣದಿಂದ ತುರ್ತು ಪರಿಹಾರ ಕಾರ್ಯದಲ್ಲಿ ಅಡಚಣೆ ಉಂಟಾಗಿದೆ. ಕೆಲವರ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯ ತಡೆ ಆದೇಶ ನೀಡಿರುವುದರಿಂದ ಕೆಲ ಹಂತಗಳಲ್ಲಿ ಕಾಮಗಾರಿ ವಿಳಂಬವಾಗಿದೆ ಎಂದು ಡಾ. ವಿದ್ಯಾಕುಮಾರಿ ತಿಳಿಸಿದ್ದಾರೆ.ಪರಿಶೀಲನೆ ವೇಳೆ ಹೆಬ್ರಿ ತಹಸೀಲ್ದಾರ್ ಎಸ್.ಎ. ಪ್ರಸಾದ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮಂಜುನಾಥ ನಾಯಕ್ ಹಾಗೂ ಕಂದಾಯ ಮತ್ತು ಹೆದ್ದಾರಿ ಇಲಾಖೆಯ ಇತರ ಅಧಿಕಾರಿಗಳು ಸಹ ಭಾಗವಹಿಸಿದ್ದರು.