ಬೆಂಗಳೂರು ಉತ್ತರ ವಿವಿಯ ಅಭಿವೃದ್ಧಿಗೆ ನೆರವು

KannadaprabhaNewsNetwork |  
Published : Aug 25, 2024, 01:51 AM IST
೨೪ಕೆಎಲ್‌ಆರ್-೬ಕೋಲಾರ ತಾಲೂಕಿನ ಮಂಗಸಂದ್ರ ಬಳಿಯ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಪರಿಶಿಷ್ಟ ಜಾತಿ/ಪಂಗಡದ ೨೦೭ ವಿದ್ಯಾರ್ಥಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಲ್ಯಾಪ್‌ಟಾಪ್ ವಿತರಿಸಿದರು. | Kannada Prabha

ಸಾರಾಂಶ

ಬೆಂಗಳೂರು ಉತ್ತರ ವಿವಿಯಲ್ಲಿ ಸುಮಾರು ೧೩ ಕೋರ್ಸುಗಳು ಇದ್ದು ಬಹುತೇಕ ಅತಿಥಿ ಪ್ರಾಧ್ಯಾಪಕರು ಹೆಚ್ಚಾಗಿದ್ದು, ಕಾಯಂ ಪ್ರಾಧ್ಯಾಪಕರ ನೇಮಕಕ್ಕೆ ಕ್ರಮ ವಹಿಸುತ್ತೇವೆ,ವಿವಿಯಲ್ಲಿ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಬೇಕು, ಹೊಸ ಹೊಸ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಸಂಶೋಧನೆ ನಡೆಸಲು ಸಾಧ್ಯವಾಗುತ್ತದೆ,

ಕನ್ನಡಪ್ರಭ ವಾರ್ತೆ ಕೋಲಾರಬೆಂಗಳೂರು ಉತ್ತರ ವಿವಿ ಹೊಸದಾಗಿ ರಚನೆಯಾಗಿದ್ದು ಇದರ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಬೆಂಬಲಿಸಲು ಸದಾ ಸಿದ್ಧವಿದ್ದು, ಅಧಿಕಾರಿಗಳು ತಮ್ಮನ್ನು ಬಳಸಿಕೊಳ್ಳಬಹುದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ತಾಲೂಕಿನ ಮಂಗಸಂದ್ರ ಬಳಿಯ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ೨೦೭ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ

ಬೆಂಗಳೂರು ಉತ್ತರ ವಿವಿ ವ್ಯಾಪ್ತಿಯಲ್ಲಿ ಬೇಕಾಗಿರುವ ಮೂಲಭೂತ ಸೌಕರ್ಯಗಳ ಪಟ್ಟಿ ಕೊಡಿ ಅನುದಾನ ಕೊಡಿಸುವ ಕೆಲಸವನ್ನು ಪಕ್ಷಾತೀತವಾಗಿ ನಾವು ಎಲ್ಲರೂ ಮಾಡತ್ತೇವೆ, ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಸಹ ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿದ್ದಾರೆ. ಅವರನ್ನು ಕೇಳಿದ ತಕ್ಷಣ ಅನುದಾನ ಕೊಡಲಿಕ್ಕೆ ಸಿದ್ದರಿದ್ದಾರೆ ಎಂದರು.ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ಥಾಪನೆಗೆ ಸಾಕಷ್ಟು ಹೋರಾಟ ಮತ್ತು ಪರಿಶ್ರಮವಾಗಿದೆ, ದೇಶದಲ್ಲಿ ಮಾದರಿಯ ವಿವಿಯಾಗಿ ಮಾಡಬೇಕು, ಇದಕ್ಕೆ ಅಧಿಕಾರಿಗಳಿಂದ ಹಿಡಿದು ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಬೆಂಬಲಿಸಬೇಕ ಶಿಕ್ಷಣದಿಂದ ಮಾತ್ರವೇ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಇದನ್ನು ವಿಧ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು, ಸರ್ಕಾರ ಮತ್ತು ವಿವಿಗಳಿಂದ ಸಿಗುವ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಕಾಯಂ ಪ್ರಾಧ್ಯಾಪಕರ ನೇಮಕ

ವಿಧಾನಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಬೆಂಗಳೂರು ಉತ್ತರ ವಿವಿಯಲ್ಲಿ ಸುಮಾರು ೧೩ ಕೋರ್ಸುಗಳು ಇದ್ದು ಬಹುತೇಕ ಅತಿಥಿ ಪ್ರಾಧ್ಯಾಪಕರು ಹೆಚ್ಚಾಗಿದ್ದು, ಕಾಯಂ ಪ್ರಾಧ್ಯಾಪಕರ ನೇಮಕಕ್ಕೆ ಕ್ರಮ ವಹಿಸುತ್ತೇವೆ,ವಿವಿಯಲ್ಲಿ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಬೇಕು, ಹೊಸ ಹೊಸ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಸಂಶೋಧನೆ ನಡೆಸಲು ಸಾಧ್ಯವಾಗುತ್ತದೆ, ಸ್ನಾತಕೋತ್ತರ ಕೇಂದ್ರದಲ್ಲಿನ ಎಲ್ಲಾ ವಿಧ್ಯಾರ್ಥಿಗಳ ಶುಲ್ಕದಿಂದ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿದ್ದು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ದಾರಿ ತಪ್ಪದೇ ಸರಿಯಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.ವಿದಾನಪರಿಷತ್‌ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯದ ಒತ್ತಡವನ್ನು ಕಡಿಮೆ ಮಾಡಲು ಮೂರು ವಿವಿಗಳಾಗಿ ವಿಂಗಡಿಸಲಾಗಿದೆ, ಅಗತ್ಯಕ್ಕೆ ತಕ್ಕಂತೆ ಅನುದಾನದ ಜೊತೆಗೆ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ನಮ್ಮ ಮೇಲೆ ಇದ್ದು ಪ್ರಾಮಾಣಿಕವಾಗಿ ಆ ಕೆಲಸವನ್ನು ಒಟ್ಟಾಗಿ ಮಾಡುತ್ತೇವೆ, ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಬೆಂಗಳೂರು ಉತ್ತರ ವಿವಿಯಲ್ಲಿ ಕೌಶಲ ತರಬೇತಿಗೆ ಅವಶ್ಯಕತೆ ಇರುವ ಕೋರ್ಸುಗಳಿಗೆ ಹೆಚ್ಚಿನ ಅಧ್ಯತೆ ನೀಡಬೇಕು ಎಂದರು.ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ ನಿರಂಜನ್ ವಾನಳ್ಳಿ ಮಾತನಾಡಿ, ಈ ಬಾರಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಸರಕಾರದಿಂದ ಅನುದಾನ ಬಿಡುಗಡೆ ಮಾಡಿಲ್ಲ, ಆದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುಮಾರು ೧.೧೨ ಕೋಟಿ ವೆಚ್ಚದಲ್ಲಿ ವಿವಿಯ ಹಣದಲ್ಲಿಯೇ ೨೦೭ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಎಚ್ ಕ್ರಾಸ್ ಬಳಿಯ ಅಮರಾವತಿಯಲ್ಲಿ ಹೊಸ ಕ್ಯಾಂಪಸ್ ಸಿದ್ದವಾಗುತ್ತಿದ್ದು ಇಲ್ಲಿರುವ ಜಾಗವನ್ನು ಕ್ರೀಡಾಂಗಣ, ಹಾಸ್ಟೆಲ್, ಸಭಾಂಗಣ ಸೇರಿದಂತೆ ಇತರೆ ಕಾಮಗಾರಿಗಳಿಗೆ ಬಳಸಿಕೊಳ್ಳಲು ಶಾಸಕರು, ಎಂಎಲ್ಸಿಗಳು ವಿಶೇಷ ಗಮನ ಹರಿಸಬೇಕು ಎಂದರು.ಬೆಂಗಳೂರು ಉತ್ತರ ವಿವಿಯ ಹಣಕಾಸು ಅಧಿಕಾರಿ ಬಿ.ವಿ ವಸಂತಕುಮಾರ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಹಾಗೂ ಪ್ರಭಾರಿ ಕುಲಸಚಿವರಾದ ಡಿ.ಕುಮುದಾ, ಡಾ.ರಾಜಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ