ಕನ್ನಡಪ್ರಭ ವಾರ್ತೆ ಲೋಕಾಪುರ
ರಾಷ್ಟ್ರೀಕೃತ ಬ್ಯಾಂಕಗಳ ಸ್ಪರ್ಧೆಯ ನಡುವೆಯೂ ಸಾಲ ನೀಡಿ ಜನರಿಗೆ ಸ್ವಾವಲಂಬಿ ಜೀವನ ನಡೆಸಲು ಪೂರಕವಾಗಿರುವ ಕೃಷ್ಣಾ ಕೋ ಅಪರೇಟಿವ್ ಕ್ರೆಡಿಟ್ ಸೊಸಾಯಟಿ ರೈತರ ಮತ್ತು ಸ್ವ ಉದ್ಯೋಗ ನಡೆಸುವವರ ಪಾಲಿಗೆ ಆಶಾಕಿರಣವಾಗಿದೆ ಎಂದು ವಾಯುಪುತ್ರ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ಲೋಕಣ್ಣ ಕತ್ತಿ ಹೇಳಿದರು.ಪಟ್ಟಣದಲ್ಲಿ ಬೀಳಗಿಯ ಕೃಷ್ಣಾ ಕೋ ಆಪರೇಟಿವ್ ಕ್ರೆಡಿಟ್ ಸೊಸಾಯಟಿ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭಾಗದ ಜನರ ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಪ್ರಾಮಾಣಿಕತೆಗೆ ನಮ್ಮ ಪಟ್ಟಣ ಸಾಕ್ಷಿಯಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಆಡಳಿತ ಮಂಡಳಿ ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು,ಸಿಬ್ಬಂದಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಗ್ರಾಹಕರ ಮತ್ತು ಠೇವುದಾರರ ಸಹಕಾರದಿಂದ ಸಂಘ ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.
ಬಿಜೆಪಿ ಮುಖಂಡ ಅರುಣ ಕಾರಜೋಳ ಮಾತನಾಡಿ ಕೃಷ್ಣಾ ಕೋ ಆಪರೇಟಿವ್ ಕ್ರೆಡಿಟ್ ಸೊಸಾಯಟಿಯಿಂದ ರೈತರು, ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತಿದೆ. ಈ ದಿಸೆಯಲ್ಲಿ ಸಂಘಗಳ ಸದಸ್ಯರು ಸಹಕಾರ ಮನೋಭಾವದಿಂದ ಭಾಗವಹಿಸಿದಲ್ಲಿ ಮಾತ್ರ ಇಂತಹ ಸಂಘಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಸಂಸ್ಥೆಯ ಅಧ್ಯಕ್ಷ ಅಶೋಕ ಚೂರಿ ಮಾತನಾಡಿ, ಸಂಘದಿಂದ ಕಡಿಮೆ ಬಡ್ಡಿದರದಲ್ಲಿ ವಾಹನ ಸಾಲ, ಜಾಮೀನು ಖರೀದಿ ಸಾಲ, ಗೃಹ ಸಾಲ ಇತ್ಯಾದಿ ಸಾಲ ನೀಡುತ್ತಿದ್ದೇವೆ. ಬೀಳಗಿ ಮತ್ತು ಕೋಲ್ಹಾರ ಎರಡು ಶಾಖೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿವೆ. ಲೋಕಾಪುರದಲ್ಲಿ ಈ ಶಾಖೆ ಪ್ರಾರಂಭಿಸಿದ್ದು, ಸಹಕಾರಿಗಳು ಹಾಗೂ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಮಲ್ಲಯ್ಯನ ಗುಡ್ಡದ ಮಹಾರುದ್ರಯ್ಯ ಸ್ವಾಮೀಜಿ, ಕಾಶಲಿಂಗೇಶ್ವರ ದೇವಸ್ಥಾನದ ಅರ್ಚಕ ಸಿದ್ದಪ್ಪ ಗಡ್ಡದವರ ಸಾನ್ನಿಧ್ಯ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಗೋವಿಂದಪ್ಪ ಸಿಂಗರಡ್ಡಿ, ಅಶೋಕ ಜಕರಡ್ಡಿ, ವೆಂಕಣ್ಣ ದೇಸಾಯಿ ಲೋಕಾಪುರ ಶಾಖೆಯ ಸಲಹಾ ಸಮಿತಿ ಸದಸ್ಯರಾದ ನಾಮದೇವ ತುಳಸಿಗೇರಿ, ಚಂಬಣ್ಣ ಕಟಗೇರಿ, ಹಣಮಂತ ಅರಳಿಕಟ್ಟಿ, ಶಿವಪ್ಪ ನೀಲಗುಂದ, ಸಿದ್ದನಗೌಡ ಪಾಟೀಲ, ಸಿದ್ರಾಮಪ್ಪ ದೇಸಾಯಿ, ಮಾರುತಿ ರಂಗಣ್ಣವರ, ಜಾಕಿರಸಾಬ ಅತ್ತಾರ ಸುರೇಶ ಹುಗ್ಗಿ ಕಾರ್ಯನಿರ್ವಾಹಕ ಸುರೇಶ ಬಟಕುರ್ಕಿ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.