ಲೋಕ ಕಲ್ಯಾಣಕ್ಕಾಗಿ ಪರಂಪರಾ ಪಾದಯಾತ್ರೆ

KannadaprabhaNewsNetwork | Published : Aug 3, 2024 12:34 AM

ಸಾರಾಂಶ

ಪರಂಪರಾ ಪಾದಯಾತ್ರೆಗೆ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಿದ್ಧಿಪುರುಷ ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿಂದ, ಯಾದಗಿರಿ ಸಮೀಪದ ಅಬ್ಬೆತುಮಕೂರವರೆಗೆ ಪ್ರತಿವರ್ಷದ ಪದ್ಧತಿಯಂತೆ ಪರಂಪರಾ ಪಾದಯಾತ್ರೆಯನ್ನು ಲೋಕ ಕಲ್ಯಾಣಕ್ಕಾಗಿ ಕೈಗೊಳ್ಳಲಾಗುತ್ತಿದೆ ಎಂದು ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.

ಶುಕ್ರವಾರ ಬೆಳಗ್ಗೆ ಗಂವ್ಹಾರದ ಪೀಠಾಧೀಶ ಕಾಶೀ ಪೀಠದ 65ನೇ ಜಗದ್ಗುರು ಬನ್ನಿಬಸವೇಶ್ವರರ ಕರ್ತೃ ಗದ್ದುಗೆಗೆ ಪೂಜೆ ನೆರವೇರಿಸಿ ಪಾದಯಾತ್ರಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ವಿಶ್ವಾರಾಧ್ಯರು ಜನಿಸಿದ ಗಂವ್ಹಾರ ಅತ್ಯಂತ ಪವಿತ್ರವಾದ ನೆಲವಾಗಿದೆ. ಅವರು ಕಿರಿಯ ವಯಸ್ಸಿನಲ್ಲಿ ಇದ್ದಾಗಲೇ ಹಿರಿದಾದ ಭಾವವನ್ನು ತೋರಿ ಎಲ್ಲರನ್ನು ಒಂದೇ ಎಂದು ಕಾಣುವ ಗುಣ ಹೊಂದಿದ್ದರು.

ಕಾಶಿ ಘನ ಪಂಡಿತರಾಗಿ ತಾವು ಸಂಪಾದಿಸಿದ ಜ್ಞಾನವನ್ನು ಲೋಕದ ಜನರಿಗೆ ಉಣಬಡಿಸುತ್ತ ಲೋಕ ಸಂಚಾರವನ್ನು ಕೈಗೊಂಡು ಆನೇಕ ಜನರನ್ನು ಉದ್ದರಿಸುತ್ತಾರೆ. ನಂತರ ಮಾಲಿ ಸಕ್ರೆಪ್ಪಗೌಡನ ಭಕ್ತಿಗೆ ಒಲಿದು ಅಬ್ಬೆತುಮಕೂರಿಗೆ ಬಂದು ನೆಲೆ ನಿಲ್ಲುತ್ತಾರೆ. ಅವರು ನೆಲೆಸಿದ ಅಬ್ಬೆತಮಕೂರು ಇಂದು ಅವಿಮುಕ್ತ ಕ್ಷೇತ್ರವಾಗಿ ಲಕ್ಷಾಂತರ ಭಕ್ತರ ಭಕ್ತಿಯ ತಾಣವಾಗಿದೆ ಎಂದರು.

ಜನರ ಲೋಕ ಕಲ್ಯಾಣಕ್ಕಾಗಿ ಮೂರು ದಿನಗಳ ಕಾಲ ಕೈಗೊಳ್ಳುವ ಪರಂಪರಾ ಪಾದಯಾತ್ರೆಯಲ್ಲಿ ಬಾ

ಲಕರಿಂದ ವಯೋವೃದ್ಧರವರೆಗೆ ಎಲ್ಲರೂ ಭಕ್ತಿಯಿಂದ ಪಾಲ್ಗೊಂಡು ವಿಶ್ವಾರಾಧ್ಯರ ಕೃಪೆಗೆ

ಪಾತ್ರರಾಗುತ್ತಾರೆ ಎಂದು ತಿಳಿಸಿದರು.

ಮಧ್ಯಾಹ್ನ 1 ಗಂಟೆಗೆ ಪಾದಯಾತ್ರೆ ಸಕಲ ಮಂಗಲವಾದ್ಯಗಳೊಂದಿಗೆ ಅಮೃತೇಶ್ವರ ಮಂದಿರದಿಂದ ಪೂಜ್ಯರ ದರ್ಶನ, ಪ್ರಸಾದ ಪಡೆದುಕೊಂಡು ವಿಶ್ವಾರಾಧ್ಯರ ಜನ್ಮಭೂಮಿ ಪಂಚಗೃಹ ತೋಪಕಟ್ಟಿ ಹಿರೇಮಠದಿಂದ ಹೊರಟಿತು.

ಗ್ರಾಮದ ಸೀಮಾಂತರದಲ್ಲಿ ಊರಿನ ಚೆನ್ನಪ್ಪ ಸಾಹು ಬಿರೆದಾರ ಇವರ ಹೊಲದಲ್ಲಿ ನಿರ್ಮಿಸಿದ ಗುರುಮಂಟಪದಲ್ಲಿ ಶ್ರೀಗಳಿಗೆ ಪಾದಪೂಜೆ ನಡೆದು, ಅಲ್ಲಿಂದ ಅಣಬಿ, ಶಿರವಾಳ, ಹುರಸಗುಂಡಗಿ, ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನವನ್ನು ತಲುಪಿ. ಅಲ್ಲಿ ಶ್ರೀಗಳು ದೇವಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಎಲ್ಲರೂ ಪ್ರಸಾದ ಸ್ವೀಕರಿಸಿ ವಾಸ್ತವ್ಯ ಮಾಡಿದರು.

Share this article