ಹಿಂದೂ ದಂಪತಿ 3 ಮಕ್ಕಳನ್ನು ಪಡೆದರೆ ಪ್ರಬಲ, 2 ಮಕ್ಕಳನ್ನು ಪಡೆದರೆ ದುರ್ಬಲ

KannadaprabhaNewsNetwork | Updated : Jun 21 2025, 12:48 PM IST

ಹಿಂದೂ ದಂಪತಿ 3 ಮಕ್ಕಳನ್ನು ಪಡೆದರೆ ಪ್ರಬಲ, 2 ಮಕ್ಕಳನ್ನು ಪಡೆದರೆ ದುರ್ಬಲ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ‌ ‌ಪ್ರವೀಣ್ ಭಾಯಿ ತೊಗಾಡಿಯಾ ತಿಳಿಸಿದರು.

 ಮೈಸೂರು :  ಹಿಂದೂ ದಂಪತಿ 3 ಮಕ್ಕಳನ್ನು ಪಡೆದರೆ ಪ್ರಬಲ, 2 ಮಕ್ಕಳನ್ನು ಪಡೆದರೆ ದುರ್ಬಲ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ‌ ‌ಪ್ರವೀಣ್ ಭಾಯಿ ತೊಗಾಡಿಯಾ ತಿಳಿಸಿದರು.

ನಗರದ ಆಲಮ್ಮ ಛತ್ರದಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್, ರಾಷ್ಟ್ರೀಯ ಬಜರಂಗದಳ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ ಹಿಂದೂ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಹಿಂದೂಗಳ‌ ಜನಸಂಖ್ಯೆ ಶೇ.86 ಇತ್ತು. ಮುಸ್ಲಿಂರ ಸಂಖ್ಯೆ ಶೇ.6 ಇತ್ತು. ಇದೀಗ ಹಿಂದೂಗಳ ಜನಸಂಖ್ಯೆ ಶೇ.79ಕ್ಕೆ ಕುಸಿತವಾಗಿದೆ. ಮುಸ್ಲಿಮರ ಸಂಖ್ಯೆ ಶೇ.15ಕ್ಕೆ ಏರಿಕೆಯಾಗಿದೆ. ಇದೇ ರೀತಿ ಮುಂದುವರೆದರೆ ಹಿಂದೂಗಳ ಸಂಖ್ಯೆ ಕಡಿಮೆಯಾಗಲಿದೆ ಎಂದರು.

ಹಿಂದೂಗಳು ಬಹುಸಂಖ್ಯಾರಾಗಿ ಇರುವವರೆಗೂ ಸುರಕ್ಷಿತವಾಗಿರುತ್ತಾರೆ. ಹಿಂದೂಗಳು ಅಲ್ಪಸಂಖ್ಯಾತರಾದರೆ ಅಪಾಯ ಎದುರಾಗಲಿದೆ. ಹೀಗಾಗಿ, ಹಿಂದೂ ದಂಪತಿಗಳು 3 ಮಕ್ಕಳನ್ನು ಪಡೆಯಬೇಕು. 3 ಮಕ್ಕಳನ್ನು ಪಡೆದರೆ ಹಿಂದೂಗಳು ಪ್ರಬಲವಾಗುತ್ತಾರೆ. 2 ಮಕ್ಕಳನ್ನು ಪಡೆದರೆ ದುರ್ಬಲರಾಗುತ್ತಾರೆ ಎಂದು ಅವರು ಹೇಳಿದರು.

ಹಿಂದೂಗಳ ರಕ್ಷಣೆಗಾಗಿ ದೇಶದಾದ್ಯಂತ ಹನಮಾನ್ ಚಾಲಿಸಾ ಕೇಂದ್ರಗಳ ಸ್ಥಾಪನೆಯ ಅಗತ್ಯವಿದೆ. ಮಸೀದಿಗಗಳಲ್ಲಿ ಮುಸ್ಲಿಮರ ‌ಸಮಸ್ಯೆ ಬಗೆಹರಿಸುತ್ತಾರೆ. ಅದೇ ರೀತಿ ಚರ್ಚ್ ಗಳಲ್ಲಿ ಕ್ರಿಶ್ಚಿಯನ್ನರ ಸಮಸ್ಯೆ ನಿವಾರಿಸುತ್ತಾರೆ. ಹೀಗಾಗಿ ಹಿಂದುಗಳ ರಕ್ಷಣೆಗಾಗಿ ಹನುಮಾನ್ ಚಾಲಿಸಾ ಕೇಂದ್ರಗಳ ಸ್ಥಾಪನೆ ಹೆಚ್ಚಾಗಿ ಆಗಬೇಕು. ಈಗಾಗಲೇ ದೇಶದ ವಿವಿಧೆಡೆ 30 ಸಾವಿರಕ್ಕೂ ಹೆಚ್ಚು ಹನುಮಾನ್ ಚಾಲಿಸಾ ಕೇಂದ್ರಗಳಿವೆ. ಮುಂದಿನ ಒಂದು ವರ್ಷದಲ್ಲಿ ಇವುಗಳ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಲಿದೆ ಎಂದರು.

ಹನುಮಾನ್ ಚಾಲಿಸಾ ಕೇಂದ್ರಗಳಲ್ಲಿ ಪ್ರತಿ ಶನಿವಾರ ಹನುಮಾನ್ ಚಾಲಿಸಾ ಪಠಣ ಮಾಡಲಾಗುತ್ತದೆ. ಬಡ ಹಿಂದುಗಳಿಗೆ ಉಚಿತ ಧಾನ್ಯ ವಿತರಣೆ ಮಾಡಲಾಗುತ್ತದೆ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲಾಗುತ್ತದೆ. ದಿನದ 24 ಗಂಟೆಯೂ ಸ್ಪಂದಿಸುವ 24 ಹೆಲ್ಪ್ ಲೈನ್ ಗೆ ಹಿಂದುಗಳನ್ನು ಜೋಡಿಸಲಾಗವುದು. ಹಿಂದೂಗಳಿಗೆ ಸೂಕ್ತ ಉದ್ಯೋಗ ಸಿಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಹಿಂದೂ ದೇಗುಲಗಳು ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಬೇಕು. ಮಸೀದಿ, ಚರ್ಚ್ ಗಳು ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಮಸೀದಿ, ಚರ್ಚ್ ಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, 1 ಲಕ್ಷಕ್ಕೂ ಹೆಚ್ಚಿನ ಪ್ರಮುಖ ಹಿಂದೂ ದೇಗುಲಗಳು ಸರ್ಕಾರದ ನಿಯಂತ್ರಣದಲ್ಲಿವೆ. ಹೀಗಾಗಿ ಹಿಂದೂ ದೇಗುಲಗಳು ಸರ್ಕಾರದ ‌ನಿಯಂತ್ರಣದಿಂದ ಮುಕ್ತವಾಗಬೇಕು. ದೇಗುಲಗಳು ‌ಧಾರ್ಮಿಕ‌ ಕೇಂದ್ರಗಳಾಗಿಯೇ ಮುಂದುವರಿಯಬೇಕು. ದೇಗುಲಗಳು ಕೂಡ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದರು.

ಹಿಂದೂಗಳು ಜನಸಂಖ್ಯೆ ನಿಯಂತ್ರಣವನ್ನು ಪಾಲಿಸುತ್ತಿದ್ದಾರೆ. ಪರಿಣಾಮ ಹಿಂದುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಮುಸ್ಲಿಮರು ಜನಸಂಖ್ಯೆ ನಿಯಂತ್ರಣ ನಿಯಮಗಳನ್ನು ಪಾಲಿಸದ ಕಾರಣ ಅವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ದೇಶದ ಎಲ್ಲಾ ಸಮುದಾಯಗಳಿಗೂ ಅನ್ವಯವಾಗುವಂತಹ ಏಕರೂಪ ನಾಗರೀಕ ಸಂಹಿತೆ ಜಾರಿಯಾಗಬೇಕು

- ಪ್ರವೀಣ್ ಭಾಯಿ ತೊಗಾಡಿಯಾ, ವಿಶ್ವ ಹಿಂದೂ ಪರಿಷತ್ ಮುಖಂಡ

Read more Articles on