ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ಪೂರ್ಣಗೊಳಿಸಿರುವ ತನಿಖಾಧಿಕಾರಿಗಳು ಈಗ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ, ಐಎಎಸ್ ಅಧಿಕಾರಿ ಡಾ.ಆಕಾಶ್ ಅವರು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ಗೆ ತನಿಖೆಯ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.ತನಿಖಾಧಿಕಾರಿ ಡಾ.ಆಕಾಶ್ ಅವರು ಫೆ.19ರಿಂದ 21ರ ವರೆಗೆ ಮೂರು ದಿನಗಳ ಕಾಲ ಮಂಗಳೂರಿಗೆ ಆಗಮಿಸಿ ತನಿಖೆ ಕೈಗೊಂಡಿದ್ದರು. ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಚೇರಿಯಲ್ಲಿ ಮಕ್ಕಳು, ಪೋಷಕರು ಹಾಗೂ ಇಲಾಖೆ ಅಧಿಕಾರಿಗಳ ವಿಚಾರಣೆ ನಡೆಸಿದ್ದರು. ಅಲ್ಲದೆ ಅವರಿಂದ ಲಿಖಿತ ಹೇಳಿಕೆಯನ್ನು ಪಡೆದಿದ್ದರು. ಈ ಎಲ್ಲ ಹೇಳಿಕೆಗಳನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಜೆರೋಸಾ ಶಾಲಾ ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ಧ ಶ್ರೀರಾಮನ ಅವಹೇಳನ ಆರೋಪ ಮಾಡಲಾಗಿತ್ತು. ಭಾರೀ ವಿವಾದ ಸೃಷ್ಟಿಸಿದ್ದ ಜೆರೋಸಾ ಶಾಲೆಯ ಪ್ರಕರಣದಲ್ಲಿ ಪ್ರತಿಭಟನೆ ಮಾಡಿದ್ದ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಇಬ್ಬರು ಪಾಲಿಕೆ ಸದಸ್ಯರು ಹಾಗೂ ಹಿಂದು ಸಂಘಟನೆ ಮುಖಂಡರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಲ್ಲದೆ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರನ್ನು ಎತ್ತಂಗಡಿ ಮಾಡಲಾಗಿತ್ತು.ಇದು ವಿವಾದವಾಗುತ್ತಿದ್ದಂತೆ ಸರ್ಕಾರ ಐಎಎಸ್ ಅಧಿಕಾರಿಯನ್ನು ತನಿಖೆಗೆ ನೇಮಿಸಿತ್ತು. ಇದೀಗ ಸಮಗ್ರ ತನಿಖೆಯ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಸರ್ಕಾರದ ನಡೆ ವಿರುದ್ಧ ಶಾಸಕ ಟೀಕೆ: ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪದ ವರದಿ ಬಹಿರಂಗ ಮಾಡಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.
ಗುರುವಾರ ಮಂಗಳೂರಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಐಎಎಸ್ ಅಧಿಕಾರಿ ಆಕಾಶ್ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ. ಅಧಿಕಾರಿ ಕೊಟ್ಟ ವರದಿಯನ್ನು ಸರ್ಕಾರ ಮಾಧ್ಯಮದ ಮುಂದೆ ಬಹಿರಂಗ ಮಾಡಬೇಕು. ಈ ವರದಿಯನ್ನು ಮಂತ್ರಿಗಳು, ಅಧಿಕಾರಿಗಳು ಬದಲಿಸಿ ವರದಿ ಕೊಡಬಹುದು. ಕಾಂಗ್ರೆಸ್ ಸರ್ಕಾರ ರಾಮನನ್ನು ಬೇಕಾದ್ರೆ ಬಿಡ್ತಾರೆ, ಟೀಚರನ್ನು ಬದುಕಿಸ್ತಾರೆ. ಅಧಿಕಾರಿ ನೀಡಿದ ವರದಿ ಬಹಿರಂಗ ಆಗಲಿ, ಮಾಧ್ಯಮಗಳ ಎದುರು ಹೇಳಲಿ. ಅಧಿಕಾರಿ ಎದುರು ಶಿಕ್ಷಕರು, ಮಕ್ಕಳು, ಪೋಷಕರು ಹೇಳಿಕೆ ಕೊಟ್ಟಿದ್ದಾರೆ. ಅದೇ ಹಸ್ತಾಕ್ಷರದ ವರದಿ ಸರ್ಕಾರ ಬಹಿರಂಗ ಮಾಡಲಿ. ನ್ಯಾಯಯುತವಾಗಿ ವರದಿ ತನಿಖೆ ಮಾಡಿ ಶಿಕ್ಷೆ ಕೊಡಲಿ ಎಂದು ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದನ್ನು ಕಾಂಗ್ರೆಸ್ನವರು ಇಲ್ಲ ಎಂದರು. ಈಗ ಎಫ್ಎಸ್ಎಲ್ ವರದಿ ಬಳಿಕ ಅವರ ಪೂರ್ವಾಗ್ರಹ ಬಯಲಾಗಿದೆ. ಹಾಗಾಗಿ ಜೆರೋಸಾ ವರದಿಯಲ್ಲಿ ಪಿತೂರಿ ಮಾಡದೇ ಮಕ್ಕಳ ಭಾವನೆಗಳನ್ನು ಗೌರವಿಸಿ. ಇವರ ವರದಿ ಆಧಾರದಲ್ಲಿ ಶಿಕ್ಷಣ ಇಲಾಖೆ ಆದೇಶ ಕೊಡಲಿ. ಆಡಳಿತದ ಹಸ್ತಕ್ಷೇಪ ಮಾಡಿ ಯಾರ ಪರವೂ ಆದೇಶ ಮಾಡಬಹುದು. ಕಾಂಗ್ರೆಸ್ ಕೃಪಾಪೋಷಿತರು ಟೀಚರ್ ಬಳಿ ತೆರಳಿ ಸತ್ಯಶೋಧನೆ ಮಾಡಿದ್ದರು. ಪೊಲೀಸ್ ಇಲಾಖೆಗೂ ಹೆತ್ತವರು ದೂರು ಕೊಟ್ಟಿದ್ದಾರೆ. ಆದರೆ ಪೊಲೀಸರು ಶಿಕ್ಷಣ ಇಲಾಖೆ ಅನುಮತಿ ಕೇಳುತ್ತಿದ್ದಾರೆ. ನ್ಯಾಯ ಸಮ್ಮತವಾದ ವರದಿಯನ್ನು ಸರ್ಕಾರ ಬಹಿರಂಗ ಮಾಡಲಿ ಎಂದು ಶಾಸಕ ವೇದವ್ಯಾಸ್ ಕಾಮತ್ ಸವಾಲು ಹಾಕಿದರು.