ಹಾನಗಲ್ಲ: ಅಕ್ಕಿಆಲೂರಿನಲ್ಲಿ ನಡೆದಿದೆ ಎನ್ನಲಾದ ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಕ್ರೀದ್ ಹಬ್ಬದಂದು ನಡೆದ ಘಟನೆಯಲ್ಲಿ ಎರಡು ಸಮುದಾಯಗಳ ದೂರುಗಳು ದಾಖಲಾಗಿದ್ದರೂ, ಹಿಂದುಗಳನ್ನು ಮಾತ್ರ ಬಂಧಿಸಿದ್ದನ್ನು ಖಂಡಿಸಿ ಇಲ್ಲಿನ ಪೊಲೀಸ್ ಠಾಣೆ ಎದುರು ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು, ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಹಲಗೆ ಬಾರಿಸಿ ಪ್ರತಿಭಟನೆ ನಡೆಸಿದರು.ಶನಿವಾರ ಸಂಜೆ ಪೊಲೀಸ್ ಠಾಣೆ ಆವರಣದಲ್ಲಿ ಸೇರಿದ ಹಿಂದೂ ಜಾಗರಣಾ ವೇದಿಕೆ ಹಾಗೂ ಇತರ ಹಿಂದೂ ಸಂಘಟನೆಗಳ ಮುಖಂಡರು ಹಿಂದುಗಳ ಮೇಲಿನ ಹಲ್ಲೆ ಹಾಗೂ ಹಿಂದುಗಳ ಮೇಲೇಯೇ ಪೊಲೀಸ್ ಕ್ರಮಕ್ಕೆ ಮುಂದಾಗುತ್ತಿರುವುದನ್ನು ಸಹಿಸುವುದಿಲ್ಲ. ಗೋ ರಕ್ಷಣೆ ನಮ್ಮ ಹೊಣೆ. ಹಿಂದುಗಳ ಮೇಲಿನ ದೂರನ್ನಾಧರಿಸಿ ಆರೋಪಿತನನ್ನು ಹುಡುಕಿ ತರುವ ಪೊಲೀಸ್, ಇನ್ನೊಂದು ಸಮುದಾಯದವರನ್ನು ಊರಿನಲ್ಲಿಯೇ ಇದ್ದರೂ ಏಕೆ ಹಿಡಿಯುವುದಿಲ್ಲ. ಇದು ಹಿಂದುಗಳ ಮೇಲೆ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ನಾಗರಾಜ ಹೆಬ್ಬಾರ ಸುದ್ದಿಗಾರರಿಗೆ ಹೇಳಿದರು.ಈ ಸಂದರ್ಭದಲ್ಲಿ ಶಿಗ್ಗಾಂವಿ ಡಿವಾಯ್ಎಸ್ಪಿ ಕೆ.ವಿ. ಗುರುಶಾಂತಪ್ಪ ಅವರೊಂದಿಗೆ ಸಿದ್ದಲಿಂಗಪ್ಪ ಕಮಡೊಳ್ಳಿ ಹಾಗೂ ಜಿಪಂ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ ದೂರವಾಣಿ ಮೂಲಕ ಮಾತನಾಡಿ, ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.ಶಿಗ್ಗಾಂವ ಸಿಪಿಐ ಅನಿಲ ರಾಠೋಡ ಹಾಗೂ ಬಂಕಾಪುರ ಪಿಎಸ್ಐ ಶ್ರೀಶೈಲ್ ಕೆಂಚಣ್ಣನವರ ಪ್ರತಿಭಟನಾಕಾರರಿಗೆ ಮನವಿ ಮಾಡಿ, ಎರಡೂ ದೂರುಗಳನ್ನಾಧರಿಸಿ ಪೊಲೀಸ್ ಎರಡು ತಂಡಗಳಲ್ಲಿ ಆರೋಪಿತರನ್ನು ಬಂಧಿಸುವ ಕಾರ್ಯ ಚಾಲನೆಯಲ್ಲಿದೆ. ಸಮಯಾವಕಾಶ ಕೊಡಿ. ಇಲ್ಲಿ ಯಾವುದೇ ಭೇದಕ್ಕೆ ಅವಕಾಶವಿಲ್ಲ. ಸದ್ಯಕ್ಕೆ ಪ್ರತಿಭಟನೆ ಕೈಬಿಡುವಂತೆ ಮಾಡಿದ ಮನವಿ ಫಲಕಾರಿಯಾಗದೇ, ಪ್ರತಿಭಟನೆ ಮುಂದುವರೆದಿದೆ.ಪ್ರತಿಭಟನೆಯಲ್ಲಿ ಶಿವಯೋಗಿ ಪಾಟೀಲ, ಮನೋಜ ಕಲಾಲ, ಪವನ ಜಾಬಿನ, ರವಿಚಂದ್ರ ಪುರೋಹಿತ, ಆನಂದ ಗಾಜಿಪುರ, ಸಿದ್ದಲಿಂಗಪ್ಪ ಕಮಡೊಳ್ಳಿ, ಮಾಲತೇಶ ಸೊಪ್ಪಿನ, ಗಿರೀಶ ಕರಿದ್ಯಾವಣ್ಣನವರ, ಬಸವರಾಜ ಮಟ್ಟಿಮನಿ, ಸಚಿನ ರಾಮಣ್ಣನವರ, ನಾಗರಾಜ ಹೆಬ್ಬಾರ, ರಾಮು ಯಳ್ಳೂರ, ಸಿದ್ದಲಿಂಗಪ್ಪ ತುಪ್ಪದ ಮುಂತಾದವರು ಇದ್ದರು.