ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸ್ಫೋಟದಲ್ಲಿ ಹನಮಂತ ಅವರು ಪ್ರಾಣಾಪಾಯದಿಂದ ಪಾರಾದ ಬಳಿಕ, ಅವರನ್ನು ಹಾಗೂ ಅವರ ಸಹೋದರ ಬಸವರಾಜ್ ಅವರಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿ ಹಣ ಮತ್ತು ಭೂಮಿ ವಿಚಾರದ ಬೇಡಿಕೆಗಳನ್ನು ಕೈಬಿಡುವಂತೆ ಒತ್ತಡ ಹೇರಲು ಆರೋಪಿಗಳು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಶಿವಾನಂದನ ಸಂಬಂಧಿ ಗಜಾನನ ಸಂಗಾಪುರ ಸ್ಫೋಟಕ ವಸ್ತುಗಳನ್ನು ವ್ಯವಸ್ಥೆ ಮಾಡಲು ಸಹಕರಿಸಿದ್ದಾನೆ ಎನ್ನಲಾಗಿದ್ದು, ಆತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಭೂಮಿ-ಹಣಕಾಸು ವಿವಾದ:ಪೊಲೀಸರು ತನಿಖೆ ನಡೆಸಿದ ಪ್ರಕಾರ, ಶಿವಾನಂದ ಮತ್ತು ಹನಮಂತ ಅಥಣಿ ನಡುವೆ ಭೂಮಿ ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿವಾದವಿತ್ತು. ಶಿವಾನಂದನ ಪಿತೃಸಹೋದರ ಹನಮಂತ ಅವರಿಂದ ಸಾಲ ಪಡೆದಿದ್ದು, ಅದರ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ಎಕರೆ ಜಮೀನು ಹನಮಂತ ಅವರಿಗೆ ಮಾರಾಟವಾಗಿತ್ತು. ಬಳಿಕ ಜಮೀನನ್ನು ಮರಳಿ ಪಡೆಯುವುದಾಗಿ ಶಿವಾನಂದ ಭರವಸೆ ನೀಡಿದ್ದರೂ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಹಣ ಮರುಪಾವತಿಸುವಂತೆ ಹನಮಂತ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ಜಮೀನು ಹಾಗೂ ಮನೆ ಕಳೆದುಕೊಳ್ಳುವ ಭೀತಿಯಿಂದ ಶಿವಾನಂದ ಕೊಲೆ ಸಂಚು ರೂಪಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಘಟನೆ ನಡೆದ ರಾತ್ರಿ ಶಿವಾನಂದ ಮತ್ತು ರೇವಣಪ್ಪ ಹಿಪ್ಪರಗಿಗೆ ತೆರಳಿ ಹನಮಂತ ಅವರ ಚಲನವಲನ ಗಮನಿಸಿದ್ದರು. ಜನರ ಓಡಾಟ ಕಡಿಮೆಯಾದ ಬಳಿಕ ಅವರ ವಾಹನದ ಸಮೀಪ ಸ್ಫೋಟಕ ಸಾಧನ ಇಟ್ಟಿದ್ದರು ಎನ್ನಲಾಗಿದೆ. ರಾತ್ರಿ ಸುಮಾರು 10.45ಕ್ಕೆ ಸ್ಫೋಟ ಸಂಭವಿಸಿದ್ದು, ಕಾರಿಗೆ ಭಾರಿ ಹಾನಿಯಾಗಿದೆ. ಆದರೆ ಸ್ಫೋಟದ ವೇಳೆ ಹನಮಂತ ಕಾರಿನೊಳಗೆ ಇರದ ಕಾರಣ ಅದೃಷ್ಟವಶಾತ್ ಅವರು ಬದುಕುಳಿದಿದ್ದಾರೆ.
ಅಥಣಿ ಮತ್ತು ವಿಜಯಪುರದಲ್ಲಿರುವ ಸ್ಫೋಟಕ ವಸ್ತುಗಳ ಖರೀದಿಗೆ ಸಂಬಂಧಿಸಿದ ತಲಾ ಒಂದು ಅಂಗಡಿಯ ಮಾಲೀಕರು ಮತ್ತು ವ್ಯವಸ್ಥಾಪಕರನ್ನೂ ವಿಚಾರಣೆಗಾಗಿ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ. ಎಸ್ಪಿ ಸಿದ್ಧಾರ್ಥ್ ಗೋಯಲ್ ಅವರ ನೇತೃತ್ವದಲ್ಲಿ ಎಎಸ್ಪಿ ಜಗದೀಶ್ ಹಾಗೂ ಜಮಖಂಡಿ ಡಿವೈಎಸ್ಪಿ ಜಮೀರ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದಿದೆ. ಸಿಪಿಐ ಎಂ.ಡಿ.ಮಡ್ಡಿ ಸೇರಿದಂತೆ ಪಿಎಸ್ಐಗಳು ಹಾಗೂ ತಾಂತ್ರಿಕ ಮತ್ತು ತನಿಖಾ ತಂಡದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.