ಹಾವೇರಿ: ನಗರದ ಹುಕ್ಕೇರಿ ಮಠದ ಅಂಗಳದಲ್ಲಿ ಚಟ ಹೋಮ ನೆರವೇರಿಸುವ ಮೂಲಕ ಸದಾಶಿವ ಸ್ವಾಮೀಜಿ ಜೋಳಿಗೆಯಲ್ಲಿ ಸಂಗ್ರಹವಾಗಿದ್ದ ಬೀಡಿ, ಸಿಗರೇಟ್, ಗುಟ್ಕಾ ಹಾಗೂ ಸಾರಾಯಿ ಪಾಕೆಟ್ಗಳನ್ನು ದಹಿಸಲಾಯಿತು.
ಚಟ ಹೋಮದ ವಿಧಿ ವಿಧಾನ ನೆರವೇರಿಸಿದ ಹೇರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ನಮ್ಮ ನಾಡಿನಲ್ಲಿ ಯುವಕರು ಚಟ ಬಿಟ್ಟು ಆರೋಗ್ಯವಂತರಾಗಬೇಕು. ದುಶ್ಚಟಗಳಿಗೆ ಅಂಟಿಕೊಂಡು ಅಪರಾಧ ಕೃತ್ಯ ಎಸಗುತ್ತಿದ್ದಾರೆ. ವ್ಯಸನಗಳಿಂದ ವಿಚಲಿತರಾಗಿ ಮನಸ್ಸುಗಳು ಕದಡುತ್ತಿವೆ. ಇಂಥ ಸಂದರ್ಭದಲ್ಲಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಿರುವ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಜೋಳಿಗೆಯಲ್ಲಿ ದುಶ್ಚಟಗಳ ಪಾಕೆಟ್ಗಳಿದ್ದವು. ಅವುಗಳನ್ನು ಸುಡುವ ಮೂಲಕ ಚಟ ಹೋಮ ನೆರವೇರಿಸಲಾಗಿದೆ. ಜನರು ಇನ್ಮುಂದೆ ಚಟ ಬಿಟ್ಟು ಸದ್ಗುಣ ಅಳವಡಿಸಿಕೊಳ್ಳಲಿ ಎಂದರು.ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ವಿಜಯಪುರದ ಅಭಿನವ ಷಣ್ಮುಖರೂಢ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಉದ್ಯಮಿ ಪಿ.ಡಿ. ಶಿರೂರ ಇದ್ದರು. ಆಧ್ಯಾತ್ಮಿಕ ಪ್ರವಚನ ಮಂಗಲೋತ್ಸವ ಇಂದು
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಧ್ಯಾತ್ಮಿಕ ಪ್ರವಚನ ಮಂಗಲೋತ್ಸವ, ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭ ಹಾಗೂ ಮಹಿಳಾ ಗೋಷ್ಠಿ ಡಿ. 25ರಂದು ಸಂಜೆ 6.30ಕ್ಕೆ ಜರುಗಲಿದೆ. ಹುಬ್ಬಳ್ಳಿಯ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ ಹಾಗೂ ಶಿರಸಿ ಬಣ್ಣದ ಮಠದ ಶ್ರೀ ಅಟವಿ ಶಿವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ, ಮುರಗೋಡದ ಮಹಾಂತ ದುರದುಂಡೀಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮೀಜಿ ಅಧ್ಯಕ್ಷತೆ, ಕೂಡಲದ ಶ್ರೀ ಷ.ಬ್ರ. ಗುರುಮಹೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ಗೌರಿಗದ್ದೆ ಅವಧೂತ ಆಶ್ರಮದ ವಿನಯ್ ಗುರೂಜಿ ಉದ್ಘಾಟಿಸುವರು. ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮೀಜಿ ಅವರಿಂದ ಪ್ರವಚನ ಮಂಗಲ ನುಡಿ ಜರುಗುವುದು. ಹರಸೂರು ಬಣ್ಣದ ಮಠದ ಶ್ರೀ ಷ.ಬ್ರ. ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಸಮ್ಮುಖ ವಹಿಸುವರು.ಮುಖ್ಯ ಅತಿಥಿಗಳಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ, ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜ್ಜಿಂಫೀರ್ ಎಸ್. ಖಾದ್ರಿ, ಮಾಜಿ ಸಂಸದರಾದ ಶಿವಕುಮಾರ ಉದಾಸಿ, ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಜಿಪಂ ಸಿಇಒ ರುಚಿ ಬಿಂದಾಲ್, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ತಹಸೀಲ್ದಾರ್ ಶರಣಮ್ಮ, ಡಾ. ಶ್ವೇತಾ ದಾನಮ್ಮನವರ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್ ಅವರನ್ನು ಸನ್ಮಾನಿಸಲಾಗುವುದು. ಬಿಗ್ ಬಾಸ್ ಖ್ಯಾತಿಯ ಹನುಮಂತ ಲಮಾಣಿ ಹಾಗೂ ಸಂಗಡಿಗರಿಂದ ಸಂಗೀತ ಸಂಜೆ ನೆರವೇರಲಿದೆ.