ಕನ್ನಡಪ್ರಭ ವಾರ್ತೆ ಕುಮಟಾ
ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಆದಿಚುಂಚನಗಿರಿ ಮಿರ್ಜಾನ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಭಾರತೀಯ ಭೂಸೇನೆಗೆ ಆಯ್ಕೆಯಾದ ೧೯ ಅಭ್ಯರ್ಥಿಗಳಿಗೆ ಆಶೀರ್ವದಿಸಿ, ಪರಿಪೂರ್ಣ ಕರಿಯರ್ ಅಕಾಡೆಮಿ ಶಿಸ್ತುಬದ್ದ ೧೯ ಸೈನಿಕರನ್ನು ಭಾರತಾಂಬೆಗೆ ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಕೆ. ಶೆಟ್ಟಿ, ಅಗ್ನಿವೀರ ಯೋಜನೆಯ ಉದ್ದೇಶ ಮತ್ತು ಮಹತ್ವ ವಿವರಿಸಿ, ಆಯ್ಕೆಯಾದ ಎಲ್ಲ ೧೯ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.ಜಿಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ, ನಿತ್ಯ ವ್ಯಾಯಾಮ ಮತ್ತು ಶಿಸ್ತುಬದ್ಧ ಜೀವನಕ್ಕೆ ಅತ್ಯಂತ ಮಹತ್ವವಿದೆ. ದೇಶಸೇವೆಯಲ್ಲಿ ಶ್ರದ್ಧೆ ಮತ್ತು ಸಮರ್ಪಣೆಯೊಂದಿಗೆ ಕಾರ್ಯನಿರ್ವಹಿಸಿ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸುವಂತೆ ಕರೆ ನೀಡಿದರು.
ಜೆಡಿಎಸ್ನ ಸೂರಜ ನಾಯ್ಕ, ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಅಕಾಡೆಮಿಯು ಅಗ್ನಿವೀರ ಮಾತ್ರವಲ್ಲದೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿ ಬೆಳೆದು ಜಿಲ್ಲೆಯ ಯುವಕರ ಬಾಳ ಬೆಳಕಾಗಲಿ ಎಂದರು.
ನವ್ಯ ನಾಯ್ಕ ಅವರಿಂದ ಗಣೇಶ ಸ್ತುತಿ ಹಾಗೂ ಭರತನಾಟ್ಯ ಪ್ರದರ್ಶನದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅಕಾಡೆಮಿಯ ಮಾರ್ಗದರ್ಶಕ ನವೀನ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಸಂಗೀತಾ ಪಟಗಾರ ನಿರೂಪಿಸಿದರು. ನಿವೃತ್ತ ಸೈನಿಕ ಗಣೇಶ ನಾಯ್ಕ ವಂದಿಸಿದರು.