ಕನ್ನಡಪ್ರಭ ವಾರ್ತೆ ಮಂಗಳೂರು
ಗೋವನಿತಾಶ್ರಯ ಟ್ರಸ್ಟ್ ಮಂಗಳೂರು ವತಿಯಿಂದ ಪಜೀರಿನ ಗೋಶಾಲೆಗೆ ಹೊರೆಕಾಣಿಕೆ ಮೆರವಣಿಗೆ ಭಾನುವಾರ ನಡೆಯಿತು.ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಆವರಣದಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್, ಗೋವು ಹಾಗೂ ಗೋವಿನ ಉತ್ಪನ್ನಗಳನ್ನು ನಿರ್ಲಕ್ಷ್ಯ ಮಾಡಿದ ಕಾರಣ ಮಾನವನಿಗೆ ಕ್ಯಾನ್ಸರ್, ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳು ಹೆಚ್ಚುತ್ತಿವೆ. ಗೋವಿನ ಹಾಲು, ಉತ್ಪನ್ನಗಳು ಅಮೃತ ಸಮಾನವಾಗಿದ್ದು, ಅದನ್ನು ನೀಡುವ ಗೋವುಗಳನ್ನು ಉತ್ತಮವಾಗಿ ಪೋಷಣೆ ಮಾಡಬೇಕಿದೆ ಎಂದರು.
ನೂರಾರು ಗೋವುಗಳನ್ನು ಪಜೀರು ಗೋಶಾಲೆಯಲ್ಲಿ ಸಾಕುತ್ತಿರುವುದು ಶ್ಲಾಘನೀಯ. ಇಲ್ಲಿನ ಗೋವುಗಳನ್ನು ಸಾಕಲು ಸಮಾಜ ಇನ್ನಷ್ಟು ನೆರವು ನೀಡಬೇಕು ಎಂದು ಹೇಳಿದರು.ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಮಾತನಾಡಿ, ಗೋವುಗಳ ಅಕ್ರಮ ಸಾಗಾಟದ ಸಂದರ್ಭ ರಕ್ಷಣೆ ಮಾಡಿದ ಗೋವುಗಳನ್ನು ಪಜೀರಿನ ಗೋಶಾಲೆಯಲ್ಲಿ ಪೋಷಣೆ ಮಾಡಲಾಗುತ್ತಿದೆ. ಅನಾಥ ಗೋವುಗಳನ್ನೂ ಸಾಕಲಾಗುತ್ತಿದೆ. ಗೋವು ಪ್ರೇಮಿಗಳು, ಸಾರ್ವಜನಿಕರು ಈ ಗೋಶಾಲೆಗೆ ಸಹಕಾರ ನೀಡಬೇಕು. ಗೋವುಗಳನ್ನು ದತ್ತು ಪಡೆದು ಅವುಗಳ ಆಹಾರಕ್ಕೆ ನೆರವಾಗಬೇಕು ಎಂದರು.
ಕದ್ರಿ ದೇವಳದ ತಂತ್ರಿ ದೇರೆಬೈಲ್ ವಿಠ್ಠಲದಾಸ ತಂತ್ರಿ, ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಬಿಲ್ಡರ್ ಕರುಣಾಕರ, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಚಂದ್ರಕಲಾ ರಾವ್, ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಪ್ರಮುಖರಾದ ಡಾ.ಪಿ. ಅನಂತಕೃಷ್ಣ ಭಟ್, ಶರಣ್ ಪಂಪ್ವೆಲ್, ಜಗದೀಶ ಶೇಣವ, ರಾಮಕೃಷ್ಣ ರಾವ್, ಶುಭಾ ಜಯರಾಮ ಭಟ್, ಕುಸುಮಾ ದೇವಾಡಿಗ, ಕಾರ್ಪೊರೇಟರ್ಗಳಾದ ವನಿತಾ ಪ್ರಸಾದ್, ಕಿರಣ್ ಕೋಡಿಕಲ್, ಶೈಲೇಶ್ ಶೆಟ್ಟಿ, ಮನೋಹರ ಕದ್ರಿ, ಗುಜರಾತಿ ಸಮಾಜದ ಪ್ರಹ್ಲಾದ್, ಶಿವಾನಂದ ಮೆಂಡನ್ ಇದ್ದರು.