ಕನಿಷ್ಠ ವೇತನ ಹೆಚ್ಚಳದಿಂದ ಹೊಟೇಲ್ತಿಂಡಿ- ತಿನಿಸು ದರ ಹೆಚ್ಚಳ ಸಾಧ್ಯತೆ

KannadaprabhaNewsNetwork |  
Published : May 26, 2026, 02:00 AM IST
ಹೋಟೆಲ್‌ | Kannada Prabha

ಸಾರಾಂಶ

ರಾಜ್ಯ ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಶೇ.60ರಷ್ಟು ಹೆಚ್ಚಿಸಿರುವುದರಿಂದ ಹೊಟೇಲ್‌ಗಳಲ್ಲಿನ ತಿನಿಸುಗಳ ದರ ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂದು ಹೊಟೇಲ್ ಮಾಲೀಕರ ಸಂಘ ಹೇಳಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಶೇ.60ರಷ್ಟು ಹೆಚ್ಚಿಸಿರುವುದರಿಂದ ಹೊಟೇಲ್‌ಗಳಲ್ಲಿನ ತಿನಿಸುಗಳ ದರ ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂದು ಹೊಟೇಲ್ ಮಾಲೀಕರ ಸಂಘ ಹೇಳಿದೆ.

30 ರು.ಯಿಂದ 40 ರು.ಗೆ ಸಿಗುತ್ತಿರುವ ಎರಡು ಇಡ್ಲಿ ದರ 60 ರು.ಯಿಂದ 90 ರು. ಹಾಗೂ ಮಸಾಲೆ ದೋಸೆ 150 ರು.ವರೆಗೆ ಏರಿಕೆಯಾಗಬಹುದು. ಅದೇ ರೀತಿ ಊಟ ಸೇರಿ ಎಲ್ಲ ತಿಂಡಿ, ತಿನಿಸುಗಳ ದರಗಳು ಮುಂಬರುವ ದಿನಗಳಲ್ಲಿ ಶೇ.60ರಷ್ಟು ಹೆಚ್ಚಳವಾಗುತ್ತವೆ. ಇದರಿಂದ ಗ್ರಾಹಕರಿಗೆ ನೇರವಾಗಿ ಹೊರೆ ಬೀಳುತ್ತದೆ. ಬೆಲೆ ಹೆಚ್ಚಳ ಮಾಡದಿದ್ದರೆ ಹೊಟೇಲ್ ನಡೆಸುವುದು ಕಷ್ಟವಾಗುತ್ತದೆ ಎಂದು ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ ತಿಳಿಸಿದ್ದಾರೆ.

35 ಸಾವಿರ ವೆಚ್ಚ ತಗಲುತ್ತದೆ:

ಕನಿಷ್ಠ ವೇತನ 23,000 ರು. ಜೊತೆಗೆ ಪಿಎಫ್‌, ಇಎಸ್‌ಐ, ಉಳಿದುಕೊಳ್ಳಲು ಪಿ.ಜಿ ಅಥವಾ ರೂಮ್ ವ್ಯವಸ್ಥೆ, ಊಟ, ಸಮವಸ್ತ್ರ ಸೇರಿ ಅಗತ್ಯ ಸೌಲಭ್ಯಗಳನ್ನು ಕಾರ್ಮಿಕರಿಗೆ ಒದಗಿಸಬೇಕಾಗುತ್ತದೆ. ಆಗ ಒಬ್ಬ ಕಾರ್ಮಿಕನ ಮೇಲೆ ಮಾಡುವ ವೆಚ್ಚ 35 ಸಾವಿರ ರು. ವರೆಗೆ ತಲುಪುತ್ತದೆ. ಕಾರ್ಮಿಕ ಕಾನೂನುಗಳನ್ನು ಪಾಲಿಸಿ ವೇತನ ನೀಡುವ ಯಾವುದೇ ಹೊಟೇಲ್‌ ಮಾಲೀಕನೂ ಬೆಲೆ ಹೆಚ್ಚಳ ಮಾಡದೇ ಸುಮ್ಮನಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಈಗಾಗಲೇ ವಾಣಿಜ್ಯ ಗ್ಯಾಸ್ ದರ ದುಪ್ಪಟ್ಟಾಗಿದೆ. ಪೆಟ್ರೋಲ್, ಡೀಸಲ್ ದರ ಹೆಚ್ಚಳ, ಅಕ್ಕಿ ದರ ಹೆಚ್ಚಳದಿಂದ ಹೊಟೇಲ್ ಉದ್ಯಮ ಸವಾಲುಗಳನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ವೇತನ ಹೆಚ್ಚಳವೂ ಆಘಾತ ಉಂಟು ಮಾಡಿದೆ. ಪ್ರತಿ ವರ್ಷ ತುಟ್ಟಿ ಭತ್ಯೆ ಹೆಚ್ಚಳ ಮಾಡಿ, 5 ವರ್ಷಗಳ ನಂತರ ವೇತನ ಹೆಚ್ಚಳ ಮಾಡುವಂತೆ ಸಂಘದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ನಮ್ಮ ಮನವಿಯನ್ನು ಸರ್ಕಾರ ಪರಿಗಣಿಸದೆ ಕನಿಷ್ಠ ವೇತನ ಹೆಚ್ಚಳ ಮಾಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿ ಕನಿಷ್ಠ ವೇತನ ಜಾರಿಗೆ ಮರುಪರಿಶೀಲನೆ ನಡೆಸಿ, ಸಣ್ಣ ಹೋಟೆಲ್ ನಿರ್ವಾಹಕರಿಗೆ ಹಾಗೂ ಗ್ರಾಹಕರಿಗೆ ಉಂಟಾಗಬಹುದಾದ ಸಂಕಷ್ಟ ತಪ್ಪಿಸಬೇಕು. ಇಲ್ಲವಾದರೆ ಇದು ನಿರುದ್ಯೋಗ ಸೃಷ್ಟಿಗೆ ಕಾರಣವಾಗಿ, ಜನ ಅಸಂಘಟಿತ ಕ್ಷೇತ್ರಗಳಾದ ಸಣ್ಣ ಮತ್ತು ಪಾದಚಾರಿ ಮಾರ್ಗದ ಹೋಟೆಲ್‌ಗಳ ಕಡೆಗೆ ಸಾಗುವ ಪರಿಸ್ಥಿತಿ ಉಂಟಾಗುತ್ತದೆ. ಇದು ಸಮಾಜದ ಆರೋಗ್ಯಕ್ಕೆ ಹಾನಿ ಕೂಡಾ ಎಂದು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ಯಾರೇ ಬಂದ್ ಮಾಡಲು ಮುಂದಾದರೂ ಸಹಿಸಬಾರದು-ಬಸವರಾಜ ಹೊರಟ್ಟಿ
ಸಿರಿಗೇರಿ ಕ್ರಾಸ್‌ನಲ್ಲಿ ಜೈವಿಕ ಸಂಪನ್ಮೂಲ ಕೇಂದ್ರ ಉದ್ಘಾಟನೆ