ನೆರೆಮನೆಯವನಿಂದಲೇ ಮನೆಗಳವು: ಆರೋಪಿ ಬಂಧನ

KannadaprabhaNewsNetwork | Published : Nov 2, 2023 1:00 AM

ಸಾರಾಂಶ

ನೆರೆಮನೆಯವನಿಂದಲೇ ಮನೆಗಳವು: ಆರೋಪಿ ಬಂಧನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ಊರಿಗೆ ತೆರಳಿದ್ದ ಶಿಕ್ಷಕನ ಮನೆಯ ಹೆಂಚು ತೆಗೆದು ನೆರೆಮನೆಯಾತನೇ ಚಿನ್ನ, ನಗದು ಕಳವು ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ಕೊಪ್ಪ ಪೋಲಿಸರು ಬಂಧಿಸಿ ಆತನಿಂದ ಮೊಬೈಲ್‌, ಚಿನ್ನ, ನಗದು ವಶಪಡಸಿ ಕೊಂಡಿದ್ದಾರೆ. ಪಟ್ಟಣದ ಹಳೇ ಮಂಡಗದ್ದೆ ರಸ್ತೆಯ ಹಿಳುವಳ್ಳಿಯಲ್ಲಿ ವಾಸವಾಗಿದ್ದ ಶಿಕ್ಷಕ ಅರುಣ್‌ ಕುಮಾರ್ ಎಂಬುವರ ಮನೆಯಲ್ಲಿ ಕಳವು ಮಾಡಿದ್ದ ಆರೋಪಿ ಮಧು ಭಂಡಾರಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 3 ಸಾವಿರ ನಗದು, ಕಳ್ಳತನ ಹಣದಿಂದ ತೆಗೆದುಕೊಂಡಿದ್ದ 8.500 ರು. ಬೆಲೆಯ ಮೊಬೈಲ್‌, 11 ಸಾವಿರ ರು. ಬೆಲೆ ಬಾಳುವ 2 ಗ್ರಾಂ ಚಿನ್ನದ ತಾಳಿ ಸರದ ಕೊಂಡಿ ವಶಪಡಿಸಿಕೊಂಡಿದ್ದಾರೆ. ಶಿಕ್ಷಕ ಅರುಣ ಕುಮಾರ್ ದಸರಾ ರಜೆ ಹಿನ್ನೆಲೆಯಲ್ಲಿ ಅ. 9 ರಂದುಹಿಂದಿರುಗಿದಾಗ ಮನೆಯಲ್ಲಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಮನೆಯ ಮೇಲಿನ ಹೆಂಚು ತೆಗೆದಿರುವುದು ಕಂಡು ಬಂದಿದ್ದು ಅಂದೇ ಸಂಜೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಮನೆಯ ಬೀರುವಿನಲ್ಲಿದ್ದ 30 ಸಾವಿರ ರು. ನಗದು, 2 ಗ್ರಾಂ ಚಿನ್ನದ ಸರದ ಕೊಂಡಿ ಕಳ್ಳತನ ವಾಗಿದ್ದು ಜೊತೆಗೆ ಸೂಟ್‌ಕೇಸ್‌ ಒಂದನ್ನು ಒಡೆದು ಹಾಕಿದ್ದಾರೆ ಎಂದು ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಅ.31 ರಂದು ಪಕ್ಕದ ಮನೆಯ ಆರೋಪಿಯಾಗಿದ್ದ ಮೆಕ್ಯಾನಿಕ್ ಮಧು ಭಂಡಾರಿ ಎಂಬಾತನನ್ನು ಬಂಧಿಸಿ ತನಿಖೆ ನಡೆಸಿದಾಗ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ. ಕೊಪ್ಪ ಡಿವೈಎಸ್ಪಿ ಅನಿಲ್ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ. ಶ್ರೀ ಗುರು ಸಜ್ಜನ್, ಕ್ರೈಂ ಪಿಎಸ್‌ಈ ಜ್ಯೋತಿ, ಸಿಬ್ಬಂದಿ ಶಂಕರ್, ಗಿರೀಶ್‌ಕುಮಾರ್,ಈಶ್ವರಪ್ಪ, ಆಸಿಫ್,ಕಾಂತೇಶ್, ದೇವರಾಜ್ ಪಾಲ್ಗೊಂಡಿದ್ದರು.

Share this article