ಸಾಲಗಾರರ ಕಿರುಕುಳಕ್ಕೆ ಬೇಸತ್ತು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿಯ ರಕ್ಷಣೆ

KannadaprabhaNewsNetwork |  
Published : Aug 01, 2025, 12:30 AM IST
31ಎಚ್‌ವಿಆರ್6, 6ಎ | Kannada Prabha

ಸಾರಾಂಶ

ರಟ್ಟಿಹಳ್ಳಿ ಪಟ್ಟಣದ ನಿವಾಸಿ ಹಾಗೂ ಕುಮುದ್ವತಿ ಮಹಿಳಾ ಸಂಘದ ಅಧ್ಯಕ್ಷೆ ರೂಪಾ ಶಿವಪ್ಪ ಅಂಬಲಿ (42) ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ.

ಹಾವೇರಿ: ಸಾಲಗಾರರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಗೆ ಹಾರಿ ಬುಧವಾರ ಇಡೀ ರಾತ್ರಿ ನದಿಯಲ್ಲಿನ ಗಿಡಗಂಟಿ ಹಿಡಿದು ಜೀವ ಉಳಿಸಿಕೊಂಡಿದ್ದ ಮಹಿಳೆಯನ್ನು ಗುರುವಾರ ರಕ್ಷಣೆ ಮಾಡಿದ ಘಟನೆ ರಾಣಿಬೆನ್ನೂರು ತಾಲೂಕಿನ ಕೋಟಿಹಾಳ- ನಿಟಪಳ್ಳಿ ಗ್ರಾಮದ ಬಳಿ ನಡೆದಿದೆ.

ರಟ್ಟಿಹಳ್ಳಿ ಪಟ್ಟಣದ ನಿವಾಸಿ ಹಾಗೂ ಕುಮುದ್ವತಿ ಮಹಿಳಾ ಸಂಘದ ಅಧ್ಯಕ್ಷೆ ರೂಪಾ ಶಿವಪ್ಪ ಅಂಬಲಿ (42) ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ.

ಹರಿಹರ ತಾಲೂಕಿನ ನಂದಿಗುಡಿ ಸೇತುವೆಯಿಂದ ಬುಧವಾರ ರಾತ್ರಿ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಳು. ಆದರೆ, ಈಜು ಬರುತ್ತಿದ್ದ ಕಾರಣ ಸುಮಾರು ಕಿಲೋ ಮೀಟರ್‌ವರೆಗೆ ಈಜುತ್ತ ಬಂದು ಕೋಟಿಹಾಳ- ನಿಟಪಳ್ಳಿ ಗ್ರಾಮದ ಬಳಿ ನದಿ ಮಧ್ಯೆ ದೊರೆತ ಗಿಡ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾಳೆ.ನಸುಕಿನ ಜಾವ ಮಹಿಳೆಯ ಕೂಗಾಟ ಕೇಳಿದ ಸ್ಥಳೀಯರು ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ತೆರಳಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಮಹಿಳೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ರೂಪಾ, ಅಗರಬತ್ತಿ ಫ್ಯಾಕ್ಟರಿ ಮಾಡುವ ಸಲುವಾಗಿ ₹22 ಲಕ್ಷ ಸಾಲ ಮಾಡಿಕೊಂಡಿದ್ದೆ. ಅದು ಈಗ ₹2 ಕೋಟಿ ಆಗಿದೆ. ಅಲ್ಲದೆ ಸಾಲಗಾರರ ಕಾಟದಿಂದ ಬೇಸತ್ತು ಹೀಗೆ ಮಾಡಿದ್ದೇನೆ ಎಂದು ಹೇಳಿಕೊಂಡಳು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಾಲದ ಹಣಕ್ಕಾಗಿ ತೊಂದರೆ ನೀಡಿದವರ ವಿರುದ್ಧ ದೂರು ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಪೊಲೀಸರಿಗೆ ಸೂಚಿಸಿದರು.

ಸಾಲಕ್ಕಾಗಿ ಪೀಡಿಸುತ್ತಿದ್ದ ಆರೋಪದಲ್ಲಿ ರಟ್ಟೀಹಳ್ಳಿ ಕುಂಚೂರು ಗ್ರಾಮದ ಚನ್ನಬಸಪ್ಪ ಕಿಟ್ಟದ್, ರಮೇಶ ಹೊಸಮನಿ, ಜಟ್ಟೆಪ್ಪ ಮಾಳಗೊಂಡರ, ರಮೇಶ ತೋಟಗಂಟಿ, ಸರೋಜಾ ಹುರಕಡ್ಲಿ ಎಂಬವರ ಮೇಲೆ ಕೇಸ್‌ ದಾಖಲಿಸಲಾಗಿದೆ.

ಮಹಿಳೆ ರಕ್ಷಣೆ: ಸಾಲ ಹೆಚ್ಚಾದ ಹಿನ್ನೆಲೆ ರೂಪಾ ಕಳೆದ ಮೂರು ತಿಂಗಳ ಹಿಂದೆ ರಟ್ಟೀಹಳ್ಳಿ ಬಿಟ್ಟು ಬೆಂಗಳೂರಿಗೆ ತೆರಳಿದ್ದಳು. ಒಂದು ವಾರದ ಹಿಂದೆ ದಾವಣಗೆರೆಯ ವಡ್ಡಿನಹಳ್ಳಿ ಗ್ರಾಮದ ತನ್ನ ತಂಗಿಯ ಮನೆಗೆ ಬಂದಿದ್ದಳು. ಜು. 30ರಂದು ಮಧ್ಯಾಹ್ನ 12 ಗಂಟೆಗೆ ರಟ್ಟೀಹಳ್ಳಿಗೆ ಹೋಗಿ ಬರುವುದಾಗಿ ಹೇಳಿ ಅಲ್ಲಿಂದ ಬಸ್ ಹತ್ತಿಕೊಂಡು ನಂದಿಗುಡಿ ಆಂಜನೇಯ ದೇವಸ್ಥಾನಲ್ಲಿದ್ದು, ತಡರಾತ್ರಿ ನಂದಿಗುಡಿ ಸೇತುವೆ ಮೇಲಿಂದ ನದಿಗೆ ಹಾರಿದ್ದಾಳೆ. ಬೆಳಗ್ಗೆಯವರೆಗೂ ನದಿಯಲ್ಲಿ ಮರವನ್ನು ಹಿಡಿದುಕೊಂಡು ಕಾಲ ಕಳೆದಿದ್ದು, ಬೆಳಗ್ಗೆ ಗ್ರಾಮದ ಕೆಲವರು ಬಂದು ವಿಚಾರಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಬಂದು ರೂಪಾ ಅವರನ್ನು ರಕ್ಷಿಸಿದ್ದಾರೆ ಎಂದು ಎಸ್ಪಿ ಯಶೋದಾ ವಂಡಗೋಡಿ ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ