ಕನ್ನಡಪ್ರಭ ವಾರ್ತೆ ಸಕಲೇಶಪುರ
ಸಾವಿರಾರು ವಾಹನಗಳಿಗೆ ಸೇವೆ ಒದಗಿಸುವ ಎಚ್ಪಿಸಿಎಲ್ ಪೆಟ್ರೋಲ್ ಬಂಕ್ ನವೀಕರಣಕ್ಕಾಗಿ ಕಳೆದ ಮೂರು ತಿಂಗಳ ಹಿಂದೆ ಕಂಪನಿ, ಗ್ರಾಹಕರ ಸೇವೆಯನ್ನು ಸ್ಥಗಿತಗೊಳಿಸಿದ್ದು ಕಳೆದೊಂದು ವಾರದ ಹಿಂದೆ ಅಲ್ಪ ನವೀಕರಣದ ನಂತರ ಬಂಕ್ ಸೇವೆಯನ್ನು ಗ್ರಾಹಕರಿಗ ಮುಕ್ತಗೊಳಿಸಿದೆ. ಆದರೆ, ಮಳೆಯಿಂದಾಗಿ ಕೆಸರುಮಯಗೊಂಡಿರುವ ಬಂಕ್ಗೆ ಹೋಗುವುದೇ ದುಸ್ಥರವಾಗಿದ್ದು ದ್ವಿಚಕ್ರವಾಹನ ಸಾವರರು ಕೆಸರಿಗೆ ಸಿಲುಕಿ ಬೀಳುತ್ತಿದ್ದರೆ, ಲಘು ವಾಹನಗಳು ಕೆಸರಿನಲ್ಲಿ ಸಿಲುಕಿ ಪರದಾಡುವಂತಾಗಿದೆ.
ಕೆಸರಿನಲ್ಲೆ ಕೆಲಸ ಮಾಡ ಬೇಕಾಗಿರುವುದರಿಂದ ಬಂಕ್ ನೌಕರರ ಸ್ಥಿತಿ ಭತ್ತದ ಗದ್ದೆಯಲ್ಲಿ ನಾಟಿ ಮಾಡಿದಂತಾಗುತ್ತಿದೆ. ಕೇವಲ ನಲ್ವತ್ತೈದು ದಿನಗಳಲ್ಲಿ ಕಾಮಗಾರಿ ಮುಕ್ತಾಯಗೊಳಿಸುವ ಕರಾರಿನೊಂದಿಗೆ ಕಾಮಗಾರಿ ಆರಂಭಿಸಿದ್ದ ಹರಿಯಾಣ ಮೂಲದ ಗುತ್ತಿಗೆದಾರ ಮೂರು ತಿಂಗಳು ಮುಗಿದರೂ ಕಾಮಗಾರಿ ಮುಕ್ತಾಯಗೊಳಿಸದ ಪರಿಣಾಮ ಮಳೆಯಿಂದಾಗಿ ಪೆಟ್ರೋಲ್ ಬಂಕ್ ಕೆಸರು ಮಯವಾಗಿದೆ ಎಂಬುದು ಬಂಕ್ ಮಾಲೀಕರ ಸ್ಪಷ್ಟನೆ.