ಕೊಪ್ಪಳ:
ಭಾವಗೀತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬರಹ ರೂಪದಲ್ಲಿ ಪ್ರಕಟಿಸಿದ ಶ್ರೇಯಸ್ಸು ಖ್ಯಾತ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಅಭಿಪ್ರಾಯಪಟ್ಟರು.ಇಲ್ಲಿಯ ಕುಷ್ಟಗಿ ರಸ್ತೆಯಲ್ಲಿರುವ ಪದಕಿ ಟೌನ್ಶಿಪ್ ಪ್ರದೇಶದ ಶಾಂತಿ ನಿವಾಸದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಭಾನುವಾರ ಹಮ್ಮಿಕೊಂಡಿದ್ದ ಖ್ಯಾತ ಕವಿ ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ ಅವರಿಗೆ ನುಡಿನಮನ ಹಾಗೂ ಜಿಲ್ಲಾ ಮಟ್ಟದ ಮುಂಗಾರು ಕಾವ್ಯೋತ್ಸವ (ಚುಟುಕು, ಕವಿತೆ, ಶಾಯರಿ ಹಾಗೂ ಗಜಲ್ ವಾಚನಗಳ ಝಲಕ್) ಕಾರ್ಯಕ್ರಮದಲ್ಲಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಬದುಕು ಬರಹ ಕುರಿತು ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಯಾವುದೇ ಗುಂಪು, ಪಂಗಡಕ್ಕೆ ಸೀಮಿತಗೊಳ್ಳದೆ ನಿರಂತರ ಅಧ್ಯಯನ, ಸಾಹಿತ್ಯ ಕೃಷಿ ಮಾಡುತ್ತಾ ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅಂತಹ ಸಾಹಿತ್ಯ ದಿಗ್ಗಜರ ಪರಂಪರೆಯನ್ನು ಯುವ ಪೀಳಿಗೆ ಸ್ಮರಿಸಿ ಗುಣಗಾನ ಮಾಡುತ್ತಿರುವುದು ಎಚ್.ಎಸ್. ವೆಂಕಟೇಶಮೂರ್ತಿ ಅವರ ಸಾರ್ಥಕ ಬದುಕಿಗೆ ನಿದರ್ಶನ ಎಂದು ಹೇಳಿದರು.ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ ಮಾತನಾಡಿ, ಎಚ್.ಎಸ್.ವೆಂಕಟೇಶಮೂರ್ತಿ ಅವರೊಂದಿಗಿನ ಒಡನಾಟ ಸ್ಮರಿಸುತ್ತ, ನನ್ನ ಕೃತಿಗೆ ವೆಂಕಟೇಶಮೂರ್ತಿ ಅವರಿಂದ ಬೆನ್ನುಡಿ ಬರೆಸಬೇಕು ಎಂಬ ಆಶಯವಿತ್ತು, ಆದರೆ ಅದು ಈಡೇರಲಿಲ್ಲ ಎಂದು ಭಾವುಕರಾದರು.
ಬರುವ ದಿನಗಳಲ್ಲಿ ಚುಟುಕ ಸಾಹಿತ್ಯ ಪರಿಷತ್ ಹಾಗೂ ಚಲನಚಿತ್ರ ಆಕಾಡೆಮಿ ಸಹಯೋಗದಲ್ಲಿ ಎಚ್.ಎಸ್. ವೆಂಕಟೇಶಮೂರ್ತಿ ಸ್ಮರಣಾರ್ಥ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.ಕನ್ನಡ ಪಂಡಿತ ಶಿಕ್ಷಕ ತೀರ್ಥಯ್ಯ ಮಠದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶಿ.ಕಾ. ಬಡಿಗೇರ, ದೊಡ್ಡಯ್ಯ ಮಳಿಮಠ, ಕನ್ನಡ ಪರ ಚಿಂತಕ ಅಮೀನಸಾಬ್ ಮುಲ್ಲಾ, ಸ್ಪರ್ಧಾಸ್ಪೂರ್ತಿ ಸಂಪಾದಕ ಎಚ್.ಆರ್. ವಸ್ತ್ರದ ಉಪಸ್ಥಿತರಿದ್ದರು. ಆನಂತರ ನಡೆದ ಮುಂಗಾರು ಕಾವ್ಯೋತ್ಸವದಲ್ಲಿ ಕವಿಗಳಾದ ಎ.ಪಿ. ಅಂಗಡಿ, ಪುಷ್ಪಲತಾ ಯೋಳಭಾವಿ, ಶಿವಮ್ಮ ಗುರುಸ್ಥಳಮಠ, ಶಾರದಾ ಶ್ರಾವಣಸಿಂಗ್ ರಜಪೂತ, ಡಾ. ಪ್ರಕಾಶ ಹಳ್ಳಿಗುಡಿ, ಸುಮಂಗಲಾ ಹಂಚಿನಾಳ, ಪ್ರದೀಪ ಹದ್ದಣ್ಣವರ್, ಪೂಜಾ ವಣಗೇರಿ. ವೀರೇಶ ಇಂದರಗಿ, ಶಿವಪ್ರಸಾದ ಹಾದಿಮನಿ, ನಿಂಗಪ್ಪ ಕೆ., ಅಕ್ಕಮಹಾದೇವಿ ಅಂಗಡಿ, ಶರಭಯ್ಯಸ್ವಾಮಿ ಹಿರೇಮಠ ಕವಿತೆ ವಾಚಿಸಿದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಆರ್. ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ ಹಾದಿಮನಿ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ ಹದ್ದಣ್ಣವರ ವಂದಿಸಿದರು.