ಹುಬ್ಬಳ್ಳಿಯ ಕ್ರೀಡಾಕೇಂದ್ರ ಕಾಮಗಾರಿ ಶೀಘ್ರ ಪೂರ್ಣ

KannadaprabhaNewsNetwork |  
Published : Jul 14, 2024, 01:41 AM IST
ಕಾರ್ಯಕ್ರಮದಲ್ಲಿ ಧಾರವಾಡ ವಲಯದಲ್ಲಿ ನಡೆದ ವಿವಿಧ ಟೂರ್ನಿಗಳಲ್ಲಿ ವಿಜೇತರಾದ ತಂಡಗಳಿಗೆ ಶನಿವಾರ ಟ್ರೋಫಿ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಹುಬ್ಬಳ್ಳಿಯಲ್ಲಿಯೂ ಆಯೋಜಿಸುವಂತೆ ಹಲವು ಮನವಿಗಳು ಬಂದಿವೆ. ಆದರೆ, ಹಲವು ಸೌಲಭ್ಯಗಳ ಕೊರತೆ ಕಾರಣ ಸದ್ಯಕ್ಕೆ ಬೆಂಗಳೂರು ಬಿಟ್ಟು ಬೇರೆಡೆ ಆಯೋಜಿಸಲು ಆಗುತ್ತಿಲ್ಲ.

ಹುಬ್ಬಳ್ಳಿ:

ಹುಬ್ಬಳ್ಳಿಯಲ್ಲಿ ಉತ್ತಮ ಕ್ರೀಡಾಂಗಣವಿದೆ. ಇಲ್ಲಿ ಕ್ರೀಡಾ ಕೇಂದ್ರ ನಿರ್ಮಾಣಕ್ಕೆ ಈಗಾಗಲೇ ಸಾಕಷ್ಟು ಹಣ ವ್ಯಯಿಸಲಾಗಿದೆ. ಈ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಆದಷ್ಟು ಬೇಗನೆ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಕೆಎಸ್‌ಸಿಎ ಅಧ್ಯಕ್ಷ ಬಿ.ಕೆ. ಸಂಪತ್‌ಕುಮಾರ ಹೇಳಿದರು.

ಅವರು ಇಲ್ಲಿನ ಬಿವಿಬಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಧಾರವಾಡ ವಲಯದಲ್ಲಿ 2021–22, 2022-23, 2023-24ನೇ ಸಾಲಿನಲ್ಲಿ ನಡೆದ ವಿವಿಧ ಟೂರ್ನಿಗಳ ವಿಜೇತ ತಂಡಗಳಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಹುಬ್ಬಳ್ಳಿಯಲ್ಲಿಯೂ ಆಯೋಜಿಸುವಂತೆ ಹಲವು ಮನವಿಗಳು ಬಂದಿವೆ. ಆದರೆ, ಹಲವು ಸೌಲಭ್ಯಗಳ ಕೊರತೆ ಕಾರಣ ಸದ್ಯಕ್ಕೆ ಬೆಂಗಳೂರು ಬಿಟ್ಟು ಬೇರೆಡೆ ಆಯೋಜಿಸಲು ಆಗುತ್ತಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್‌ ಏರ್ ಸೌಲಭ್ಯವಿದ್ದು, ಮಳೆ ಬಂದರೂ 20 ನಿಮಿಷದಲ್ಲಿ ಪಂದ್ಯ ಆರಂಭಿಸಬಹುದು. ಅಲ್ಲದೆ, ಅಧಿಕೃತ ಪ್ರಸಾರ ವಾಹಿನಿಗೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆದರೆ ನೇರಪ್ರಸಾರಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಕೆಎಸ್‌ಸಿಎ ಧಾರವಾಡ ವಲಯದ ಚೇರ್‌ಮನ್‌ ವೀರಣ್ಣ ಸವಡಿ ಮಾತನಾಡಿ, ಸಂಸ್ಥೆಯ ಹಿಂದಿನ ಸಮಿತಿ ನೀಡಿದ ಪ್ರೋತ್ಸಾಹದಿಂದ ಧಾರವಾಡ ವಲಯದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಹುಬ್ಬಳ್ಳಿ, ಬೆಳಗಾವಿಯಲ್ಲಿ ಕ್ರೀಡಾಂಗಣಗಳಿವೆ. ಉತ್ತಮ ಮೂಲಸೌಕರ್ಯಗಳಿಂದಾಗಿ ಧಾರವಾಡ ವಲಯದ ಆಟಗಾರರು ವಿವಿಧ ವಯೋಮಾನದವರ ವಿಭಾಗದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಎಂದರು.

ರಾಜನಗರ ಕ್ರೀಡಾಂಗಣದಲ್ಲಿ ಕ್ರೀಡಾ ಕೇಂದ್ರ ಕಾಮಗಾರಿ ಬಾಕಿ ಇದೆ. ಅದನ್ನು ಪೂರ್ಣಗೊಳಿಸಬೇಕು. ಹುಬ್ಬಳ್ಳಿಯಲ್ಲಿ ಸಾಕಷ್ಟು ಅಭಿಮಾನಿಗಳಿದ್ದು, ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಇಲ್ಲಿಯೂ ಆಯೋಜಿಸುವಂತೆ ಮನವಿ ಮಾಡಿದರು.

ಕೆಎಸ್‌ಸಿಎ ಕಾರ್ಯದರ್ಶಿ ಎ. ಶಂಕರ್ ಮಾತನಾಡಿ, ನಿರಂತರ ಶ್ರಮದಿಂದ ಮಾತ್ರ ಕ್ರಿಕೆಟ್‌ನಲ್ಲಿ ಸಾಧನೆ ಮಾಡಲು ಸಾಧ್ಯ. ಸೋಲು, ಗೆಲುವಿಗಿಂತ ಕ್ರೀಡಾಸ್ಫೂರ್ತಿ ಮುಖ್ಯ. ಧಾರವಾಡ ವಲಯದ ಕ್ರೀಡಾಪಟುಗಳು ಮುಂಬರುವ ವಿಶ್ವಕಪ್‌ಗೆ ಆಯ್ಕೆಯಾಗುವ ನಿಟ್ಟಿನಲ್ಲಿ ಶ್ರಮವಹಿಸುವಂತೆ ಕರೆ ನೀಡಿದರು.

ಕೆಎಸ್‌ಸಿಎ ವಿಭಾಗೀಯ ಉಸ್ತುವಾರಿ ಎಂ.ಎಸ್. ವಿನಯ್ ಮಾತನಾಡಿ, ರಾಜ್ಯದ ಆಟಗಾರರು ಇತ್ತೀಚಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ಧಾರೆ. 14 ವರ್ಷದೊಳಗಿನವರ ತಂಡ, ಕೂಚ್ ಬೆಹಾರ್‌, ಸಿ.ಕೆ. ನಾಯ್ಡು, ಮಹಿಳೆಯರ ಟ್ವೆಂಟಿ-20 ತಂಡಗಳು ಚಾಂಪಿಯನ್ ಆಗಿವೆ. ಆಟಗಾರರು ಕ್ರೀಡೆಯ ಜತೆಗೆ ಓದಿನ ಕಡೆಗೂ ಗಮನ ಹರಿಸಬೇಕು ಎಂದರು.

ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕದ ನಿಖಿಲ್ ಭೂಸದ ಮಾತನಾಡಿದರು. ರಾಜ್ಯ ರಣಜಿ ತಂಡಕ್ಕೆ ಆಯ್ಕೆ ಆಗಿದ್ದ ಎ.ಸಿ. ರೋಹಿತ್‌ಕುಮಾರ್ ಪರ ಅವರ ತಾಯಿ ಬಹುಮಾನ ಸ್ವೀಕರಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌