ಹಾವೇರಿ ಜಿಲ್ಲೆಯಲ್ಲಿ 1ನೇ ತರಗತಿ ಪ್ರವೇಶಾತಿಯಲ್ಲಿ ಭಾರೀ ಕುಸಿತ

KannadaprabhaNewsNetwork |  
Published : Jul 28, 2026, 02:15 AM IST
ಸರ್ಕಾರಿ ಶಾಲೆ (ಎಐ ಚಿತ್ರ) | Kannada Prabha

ಸಾರಾಂಶ

ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಸರ್ಕಾರ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಮೂಲಸೌಕರ್ಯ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೂ ಜಿಲ್ಲೆಯಲ್ಲಿ ಮೊದಲನೇ ತರಗತಿ ದಾಖಲಾತಿ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿರುವುದು ಶಿಕ್ಷಣ ಇಲಾಖೆಗೆ ಹೊಸ ಸವಾಲಾಗಿ ಪರಿಣಮಿಸಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಸರ್ಕಾರ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಮೂಲಸೌಕರ್ಯ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೂ ಜಿಲ್ಲೆಯಲ್ಲಿ ಮೊದಲನೇ ತರಗತಿ ದಾಖಲಾತಿ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿರುವುದು ಶಿಕ್ಷಣ ಇಲಾಖೆಗೆ ಹೊಸ ಸವಾಲಾಗಿ ಪರಿಣಮಿಸಿದೆ.

ಶಿಕ್ಷಣ ಇಲಾಖೆ ಸ್ಯಾಟ್ಸ್‌ ದಾಖಲಾತಿ ಪ್ರಗತಿ ವರದಿ ಪ್ರಕಾರ, ಜಿಲ್ಲಾದ್ಯಂತ ಮೊದಲನೇ ತರಗತಿಗೆ 17,093 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 23,673 ಮಕ್ಕಳು ದಾಖಲಾಗಿದ್ದರು. ಅಂದರೆ ಕೇವಲ ಒಂದು ವರ್ಷದಲ್ಲೇ 6,580 ಮಕ್ಕಳ ದಾಖಲಾತಿ ಕಡಿಮೆಯಾಗಿದ್ದು, ಇದು ಸುಮಾರು ಶೇ.27.8ರಷ್ಟು ಇಳಿಕೆಯಾಗಿದೆ.

ಅದರಲ್ಲೂ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಕಳೆದ ವರ್ಷ 12,667 ಮಕ್ಕಳಿದ್ದ ದಾಖಲಾತಿ, ಈ ಶೈಕ್ಷಣಿಕ ಸಾಲಿನಲ್ಲಿ 8,556ಕ್ಕೆ ಇಳಿದಿದ್ದು, 4,111 ಮಕ್ಕಳ ಕೊರತೆ ಉಂಟಾಗಿದೆ. ನಿಗದಿಪಡಿಸಿದ್ದ ಗುರಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಮೊದಲನೇ ತರಗತಿ ದಾಖಲಾತಿ ಸಾಧನೆ ಕೇವಲ ಶೇ.70.13 ಮಾತ್ರವಾಗಿದೆ. ಜಿಲ್ಲೆಯ ಒಟ್ಟಾರೆ ಮೊದಲನೇ ತರಗತಿ ದಾಖಲಾತಿ ಪ್ರಗತಿ ಶೇ.74.03ರಷ್ಟು ಎಂದು ಶಿಕ್ಷಣ ಇಲಾಖೆಯ ಅಂಕಿಸಂಖ್ಯೆಯಿಂದ ತಿಳಿದುಬಂದಿದೆ.

ಎಲ್ಲ ತಾಲೂಕುಗಳಲ್ಲೂ ಕುಸಿತ: ಜಿಲ್ಲೆಯ ಯಾವುದೇ ತಾಲೂಕು ವಿದ್ಯಾರ್ಥಿಗಳ ದಾಖಲಾತಿ ಕುಸಿತದಿಂದ ಹೊರತಾಗಿಲ್ಲ. ಹಾವೇರಿ, ರಾಣಿಬೆನ್ನೂರು, ಹಾನಗಲ್ಲ, ಹಿರೇಕೆರೂರು, ಶಿಗ್ಗಾಂವಿ, ಸವಣೂರು ಹಾಗೂ ಬ್ಯಾಡಗಿ ಹೀಗೆ ಎಲ್ಲ ತಾಲೂಕುಗಳಲ್ಲೂ ಮೊದಲನೇ ತರಗತಿ ದಾಖಲಾತಿ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಜಿಲ್ಲೆಯ ಅತಿದೊಡ್ಡ ತಾಲೂಕಾದ ರಾಣಿಬೆನ್ನೂರಿನಲ್ಲಿ ದಾಖಲಾತಿ 5,095ರಿಂದ 3,685ಕ್ಕೆ, ಹಾವೇರಿಯಲ್ಲಿ 4,544ರಿಂದ 3,454ಕ್ಕೆ ಇಳಿದಿದೆ.

ಕಾರಣ ಹಲವು: ಖಾಸಗಿ ಶಾಲೆಗಳತ್ತ ಪೋಷಕರ ಹೆಚ್ಚುತ್ತಿರುವ ಒಲವು, ನಗರ ಪ್ರದೇಶಗಳಿಗೆ ವಲಸೆ, ಇಂಗ್ಲಿಷ್ ಮಾಧ್ಯಮದ ಮೇಲಿನ ಆಕರ್ಷಣೆ ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ವಿಲೀನ ಪ್ರಕ್ರಿಯೆ ಮೊದಲಾದ ಅಂಶಗಳು ದಾಖಲಾತಿ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಎಲ್ಲ ಅಂಶಗಳ ಕುರಿತು ಶಿಕ್ಷಣ ಇಲಾಖೆ ಸಮಗ್ರ ಅಧ್ಯಯನ ನಡೆಸುವ ಅಗತ್ಯವಿದೆ.

ಒಂದನೇ ತರಗತಿಯೇ ಶಾಲಾ ಶಿಕ್ಷಣದ ಅಡಿಪಾಯ. ಇದೇ ಹಂತದಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವುದು ಮುಂದಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ಒಟ್ಟು ವಿದ್ಯಾರ್ಥಿ ಸಂಖ್ಯೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ, ಮನೆಮನೆಗೆ ಭೇಟಿ ನೀಡಿ ಮಕ್ಕಳ ದಾಖಲಾತಿ ಖಚಿತಪಡಿಸುವುದು, ಅಂಗನವಾಡಿ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವುದು, ಪೋಷಕರಲ್ಲಿ ವಿಶ್ವಾಸ ಮೂಡಿಸುವ ವಿಶೇಷ ಅಭಿಯಾನ ಕೈಗೊಳ್ಳುವುದು ಹಾಗೂ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಇನ್ನಷ್ಟು ಬಲಪಡಿಸುವುದು ತುರ್ತು ಅಗತ್ಯವಾಗಿದೆ.

ಮೊದಲನೇ ತರಗತಿ ದಾಖಲಾತಿಯ ಈ ಇಳಿಮುಖ ಪ್ರವೃತ್ತಿಯನ್ನು ಕೇವಲ ಅಂಕಿ-ಅಂಶವಾಗಿ ನೋಡುವುದಕ್ಕಿಂತ, ಸರ್ಕಾರಿ ಶಾಲೆಗಳ ಭವಿಷ್ಯದ ಬಗ್ಗೆ ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಬೇಕಾಗಿದೆ ಎಂಬುದು ಶಿಕ್ಷಣ ತಜ್ಞರ ಅಭಿಮತವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಒಂದನೇ ತರಗತಿ ದಾಖಲಾತಿ ಪ್ರಮಾಣ ಕಡಿಮೆಯಾಗಿದೆ. ಇನ್ನೂ ಪ್ರವೇಶ ಪಡೆದ ಮಕ್ಕಳ ವಿವರಗಳನ್ನು ಇಲಾಖೆಯ ಸ್ಯಾಟ್ಸ್‌ ಪೋರ್ಟಲ್‌ನಲ್ಲಿ ಭರ್ತಿ ಮಾಡುವುದು ಬಾಕಿ ಇದೆ. ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಯತ್ತ ಸೆಳೆಯಲು ಸಾಕಷ್ಟು ಪ್ರಯತ್ನ ನಡೆಸಲಾಗಿದೆ ಎಂದು ಹಾವೇರಿ ಡಿಡಿಪಿಐ ಮೋಹನ ದಂಡಿನ ಹೇಳಿದರು.

ತಾಲೂಕು 2025–26 2026–27

ಬ್ಯಾಡಗಿ 1,089 731

ಹಾನಗಲ್ಲ 2,335 1,591

ಹಾವೇರಿ 2,159 1,555

ಹಿರೇಕೆರೂರು 1,742 1,114

ರಾಣಿಬೆನ್ನೂರು 2,035 1,337

ಸವಣೂರು 1,613 1,090

ಶಿಗ್ಗಾಂವಿ 1,694 1,138

ಒಟ್ಟು 12,667 8556

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಇಲಾಖೆಯ ಸೇವಾ ಶ್ರೇಷ್ಠತೆ ಹೆಚ್ಚಿಸೋಣ: ಹೂವಪ್ಪ
ಆಧುನಿಕತೆ ಬಳಸಿ, ಕೃಷಿ ಮುಂದುವರೆಸಿ: ಶಾಸಕ ದಿನಕರ ಶೆಟ್ಟಿ