ಬಜೆಟ್ ಮೇಲೆ ಭಾರಿ ನಿರೀಕ್ಷೆ, 6ರ ರತ್ತ ಎಲ್ಲರ ಚಿತ್ತ

KannadaprabhaNewsNetwork |  
Published : Mar 05, 2026, 02:00 AM IST
ಮೆಡಿಕಲ್ ಕಾಲೇಜಿನ ನೂತನ ಆಸ್ಪತ್ರೆ ಕಟ್ಟಡ | Kannada Prabha

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಜನತೆ ಈ ಬಾರಿ ಬಜೆಟ್ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಉನ್ನತ ಶಿಕ್ಷಣ ಸಂಸ್ಥೆ, ಕೈಗಾರಿಕೆಗಳ ಸ್ಥಾಪನೆ, ಪ್ರವಾಸೋದ್ಯಮ ಬೆಳವಣಿಗೆ ಮತ್ತಿತರ ಬೇಡಿಕೆಗಳು ಈ ಬಾರಿಯಾದರೂ ಈಡೇರೀತೆ ಎಂದು ಜನತೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಈ ಬಾರಿಯಾದರೂ ಈಡೇರುವುವೇ ವಿವಿಧ ಬೇಡಿಕೆಗಳು । ಗರಿಗೆದರಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸು

ವಸಂತಕುಮಾರ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರಉತ್ತರ ಕನ್ನಡ ಜಿಲ್ಲೆಯ ಜನತೆ ಈ ಬಾರಿ ಬಜೆಟ್ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಉನ್ನತ ಶಿಕ್ಷಣ ಸಂಸ್ಥೆ, ಕೈಗಾರಿಕೆಗಳ ಸ್ಥಾಪನೆ, ಪ್ರವಾಸೋದ್ಯಮ ಬೆಳವಣಿಗೆ ಮತ್ತಿತರ ಬೇಡಿಕೆಗಳು ಈ ಬಾರಿಯಾದರೂ ಈಡೇರೀತೆ ಎಂದು ಜನತೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೂಗು ಇಂದು ನಿನ್ನೆಯದಲ್ಲ. ಜನರ ಭಾರಿ ಆಗ್ರಹದ ಮೇರೆಗೆ ಬಿಜೆಪಿ ಸರ್ಕಾರ 2022ರ ಬಜೆಟ್‌ನಲ್ಲಿ ಜಿಲ್ಲೆಗೆ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿತ್ತು. ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಹಾಗೂ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಿತ್ತು. ನಂತರ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದು ನನೆಗುದಿಗೆ ಬಿದ್ದಿತ್ತು. ಆದಾದ ಮೂರು ವರ್ಷಗಳ ನಂತರ ಈಗ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸು ಗರಿಗೆದರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಕಾರವಾರಕ್ಕೆ ಬಂದಾಗ ಈ ಬಾರಿಯ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಆಸ್ಪತ್ರೆಯ ಕನಸು ಗರಿಗೆದರಿದೆ.ಜಿಲ್ಲೆಯ ಯುವ ಜನತೆಗೆ ಉದ್ಯೋಗ ನೀಡುವ ಯಾವುದೇ ಕೈಗಾರಿಕೆಗಳು ಜಿಲ್ಲೆಯಲ್ಲಿ ಇಲ್ಲ. ಯುವ ಜನತೆ ಗೋವಾ, ಮುಂಬಯಿ, ಬೆಂಗಳೂರು ಮತ್ತಿತರ ಕಡೆ ಉದ್ಯೋಗಕ್ಕಾಗಿ ತೆರಳುತ್ತಿದ್ದಾರೆ. ಹೀಗಾಗಿ ಇಲ್ಲಿನ ಯುವ ಜನತೆಗೆ ಉದ್ಯೋಗ ನೀಡುವ ಪರಿಸರಕ್ಕೆ ಪೂರಕ ಕೈಗಾರಿಕೆಗಳು ಜಿಲ್ಲೆಯಲ್ಲಿ ಬರಬೇಕು ಎನ್ನುವುದು ಯುವ ಜನತೆ ಬಹುಕಾಲದಿಂದ ಮಂಡಿಸುತ್ತಿರುವ ಬೇಡಿಕೆ.

ಪ್ರವಾಸಿ ತಾಣಗಳಿಗೆ ಜಿಲ್ಲೆಯಲ್ಲಿ ಬರವಿಲ್ಲ. ಆದರೆ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಪ್ರವಾಸೋದ್ಯಮದ ಸಾಧ್ಯತೆಗಳೂ ಸಾಕಷ್ಟಿವೆ. ಪ್ರವಾಸೋದ್ಯಮದ ಬೆಳವಣಿಗೆಗೆ ಈ ಬಾರಿಯಾದರೂ ಕೊಡುಗೆ ಸಿಗಬಹುದು ಎಂದು ಆಶಾವಾದ ಜನತೆಯದ್ದಾಗಿದೆ.ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶಗಳಿಲ್ಲದೆ ಯುವ ಜನತೆ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಕಡೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಯಲ್ಲೇ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಾಗಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ.

ಅಡಕೆ ಬೆಳೆಗಾರರು, ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರೈತರು, ಮೀನುಗಾರರಿಗೆ ಈ ಬಜೆಟ್ ಪೂರಕವಾಗಿರಲಿ ಎನ್ನುವುದು ರೈತರ ಹಾಗೂ ಮೀನುಗಾರರ ಆಶಯವಾಗಿದೆ.ಇನ್ನೂ ಹತ್ತು ಹಲವು ನಿರೀಕ್ಷೆಗಳನ್ನು ಈ ಬಜೆಟ್ ಮೇಲೆ ಜನತೆ ಇಟ್ಟುಕೊಂಡಿದ್ದಾರೆ. ಅವೆಲ್ಲ ಈಡೇರೀತೆ ಎನ್ನುವ ಕುತೂಹಲಕ್ಕೆ ಮಾ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಉತ್ತರ ನೀಡಲಿದೆ.--2025-26 ಬಜೆಟ್‌ನಲ್ಲಿ ಗಮನಾರ್ಹ ಕೊಡುಗೆ ಇಲ್ಲ

ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಗಮನಾರ್ಹ ಕೊಡುಗೆ ಇರಲಿಲ್ಲ. ಜೋಯಿಡಾ ಸಾವಯವ ತಾಲೂಕಾಗಿಸಲು ಘೋಷಿಸಲಾಗಿತ್ತು. ಅದರ ಆರಂಭಿಕ ಪ್ರಕ್ರಿಯೆಗಳು ಶುರುವಾಗಿವೆ.

ಸಾವಯವ ತಾಲೂಕು ಘೋಷಣೆಗೆ 3 ವರ್ಷಗಳ ಕಾಲಾವಕಾಶ ನಿಗದಿ ಮಾಡಲಾಗಿದ್ದು, ಇದುವರೆಗೆ ಕೇವಲ ₹1 ಕೋಟಿ ಮಾತ್ರ ಬಂದಿದ್ದು, ಕೃಷಿ ಇಲಾಖೆ ₹10 ಕೋಟಿಗೆ ಬೇಡಿಕೆ ಇಟ್ಟಿದೆ. ಕೃಷಿ ಸಚಿವ ಚಲುವರಾಯಸ್ವಾಮಿ ಸಾವಯವ ತಾಲೂಕು ಘೋಷಣೆಗೆ ಚಾಲನೆ ನೀಡಿದ್ದಾರೆ.

ಇನ್ನು ನೌಕಾನೆಲೆ ವಿಮಾನ ನಿಲ್ದಾಣ ಕಾಮಗಾರಿ ಶುರುವಾಗುವ ಭರವಸೆ ನೀಡಲಾಗಿತ್ತಾದರೂ ಅದಿನ್ನೂ ಆರಂಭವಾಗಿಲ್ಲ. ಇದನ್ನು ಹೊರತು ಪಡಿಸಿದರೆ ಉತ್ತರ ಕನ್ನಡಕ್ಕೆ ಸೀಮಿತವಾದ ಯಾವುದೇ ಯೋಜನೆಗಳಿಲ್ಲ. ಭೂಕುಸಿತ ತಡೆ, ಕೆಎಫ್‌ಡಿ ನಿಯಂತ್ರಣ, ಮೀನುಗಾರಿಕೆ ಕೊಂಡಿ ರಸ್ತೆ, ಅಡಕೆ ಸಸ್ಯ ಸಂರಕ್ಷಣೆ ಹೀಗೆ ಕೆಲವು ಜಿಲ್ಲೆಗಳನ್ನು ಸೇರಿಸಿ ಯೋಜನೆ ರೂಪಿಸಲಾಗಿತ್ತು. ಅದಿನ್ನೂ ಜಾರಿಗೆ ಬರಬೇಕಾಗಿದೆ.

ಮಂಕಿ ಬಂದರು ನಿರ್ಮಾಣ, ಹೊನ್ನಾವರ ಹಡಗು ನಿರ್ಮಾಣ ಘಟಕ, ನದಿ ಕ್ರ್ಯೂಸ್ ಪ್ರವಾಸೋದ್ಯಮಗಳಿಗೆ ವಿಸ್ತ್ರತ ಯೋಜನಾ ವರದಿ ರೂಪಿಸುವುದನ್ನು ಪ್ರಸ್ತಾಪಿಸಲಾಗಿತ್ತು. ಯೋಜನಾ ವರದಿ ರೂಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಣ್ಣದೋಕುಳಿಯಲ್ಲಿ ಮಿಂದೆದ್ದ ಧಾರವಾಡಿಗರು!
ಸಮಾನತೆ ತರಲು ಶ್ರಮಿಸಿದವರು ಕೈವಾರ ತಾತಯ್ಯ: ಅರವಿಂದ