ಹುಲಿಯು ಹುಟ್ಟಿತು ಕಿತ್ತೂರು ನಾಡಾಗ ಪುಸ್ತಕ ಲೋಕಾರ್ಪಣೆ

KannadaprabhaNewsNetwork | Published : Feb 26, 2024 1:36 AM

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹುಲಿಯು ಹುಟ್ಟಿತು ಕಿತ್ತೂರು ನಾಡಾಗ ಪುಸ್ತಕ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಧಾರವಾಡ

ತಾಲೂಕಿನ ಹೆಬ್ಬಳ್ಳಿ ಗ್ರಾಮದ ಆಶುಕವಿ ದಿ.ಚಂದಪ್ಪ ಚಲವಾದಿ ಅವರ ಹುಲಿಯು ಹುಟ್ಟಿತು ಕಿತ್ತೂರು ನಾಡಾಗ ಅನುಭಾವ ಪದಗಳ ಪುಸ್ತಕ ಲೋಕಾರ್ಪಣೆ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಯಶಸ್ವಿಯಾಗಿ ನಡೆಯಿತು.

ಶಾಲಾ ಶಿಕ್ಷಣ ಇಲಾಖೆಯ ಸಿಸ್ಲೆಪ್ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ದನ್ ಮಾತನಾಡಿ, ಶಿಕ್ಷಕ ಮಿತ್ರ ವೈ.ಬಿ. ಕಡಕೋಳ ಅವರು ಚಂದಪ್ಪ ಅಜ್ಜನ ಹಾಡುಗಳನ್ನು ಸಂಪಾದಿಸಿ ಪ್ರಕಟಿಸಿದ್ದು, ಅಭಿಮಾನದ ಸಂಗತಿ. ಈ ಸಂಗ್ರಹದ ಮೊದಲ ಹಾಡು ಕಿತ್ತೂರ ನಾಡಿನ ಕ್ರಾಂತಿವೀರ ಸೂರ ಸಂಗೊಳ್ಳಿ ರಾಯಣ್ಣನ ಕುರಿತಾದುದು. "ಹುಲಿಯು ಹುಟ್ಟಿತೋ ಕಿತ್ತೂರ ನಾಡಾಗ, ಭಂಟ ರಾಯಣ್ಣ ಸಂಗೊಳ್ಳಿ ಊರಾಗ " ಈ ಹಾಡನ್ನು ನಾಡಿನ ಉದ್ದಗಲಕ್ಕೂ ಹಲವಾರು ಕಲಾವಿದರು ಹಾಡಿ ಸಂಭ್ರಮ ಪಟ್ಟಿದ್ದಾರೆ. ಆದರೆ ಯಾರೂ ಅಭಿಮಾನದಿಂದ ಇದನ್ನು ರಚಿಸಿದವರ ಚಂದಪ್ಪ ಚಲವಾದಿಯವರ ಹೆಸರು ಹೇಳಿದ್ದೆ ಕಡಿಮೆ ಎಂದರು.

ಈ ಹಾಡು ಆಗ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದೇಶಾಭಿಮಾನ ಮೂಡಿಸಲು ರಚಿಸಲಾಗಿತ್ತು. ಭಜನೆಗಳೂ ಭಾವೈಕ್ಯ, ಬಂಧುತ್ವ ಬೆಸೆಯುವ, ದೇಶಾಭಿಮಾನ ಮೂಡಿಸುವ ಕಾರ್ಯ ಮಾಡಿವೆ. ಇಂದು ಒಬ್ಬ ಮುಸಲ್ಮಾನ ಸಮುದಾಯದ ಕಲಾವಿದ ಯಾರಿಗೂ ಕಡಿಮೆ ಇಲ್ಲದಂತೆ "ಶಿವನಾಮ ಸ್ಮರಿಸು "ಎಂಬ ಹಾಡು ಹಾಡಿದ್ದು ನಾಡಿನ ಸಾಮಾಜಿಕ ಸಾಮರಸ್ಯಕ್ಕೆ, ಸೌಹಾರ್ದ ಬದುಕಿಗೆ ಹಿಡಿದ ಕನ್ನಡಿ ಎಂದರು.

ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಗ್ರಾಪಂ ಅಧ್ಯಕ್ಷ ನಿಂಗಪ್ಪ ಮೊರಬದ, ನಮ್ಮೂರಿನ ಆಶುಕವಿ ಭಜನಾಕಾರ ದಿ.ಚಂದ್ರಪ್ಪ ಛಲವಾದಿ ಅವರನ್ನು ಎಲೆಯ ಮರೆಯ ಕಾಯಿಯಂತಿದ್ದ ಅವರ ಸಾಹಿತ್ಯವನ್ನು ಬೆಳಕಿಗೆ ತಂದ ರೋಹನ್ ಕೇರ್ ಫೌಂಡೇಶನ್ ಹಾಗೂ ಸಾಧನಾ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಹಾಗೂ ಶಿಕ್ಷಕ ಎಲ್.ಐ. ಲಕ್ಕಮ್ಮನವರ, ಮಲ್ಲಿಕಾರ್ಜುನ ಉಪ್ಪಿನ, ಮಂಜುನಾಥ ವಾಸಂಬಿ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.

ಪುಸ್ತಕದ ಸಂಪಾದಕ ವೈ.ಬಿ. ಕಡಕೋಳ, ಷಡಕ್ಷರಿ‌ ಚಲವಾದಿ, ಮೈತ್ರಾದೇವಿ ವಸ್ತ್ರದ, ಲೂಸಿ ಸಾಲ್ಡಾನ, ಪರಮೇಶ್ವರ ಕಾಳೆ, ಮಂಜುನಾಥ ವಾಸಂಬಿ ಮತ್ತಿತರರು ಇದ್ದರು.