ನಾನು ಲಿಂಗಾಯತ ನಾಯಕನಲ್ಲ, ಸರ್ವಜನಾಂಗಗಳ ನೇತಾರ: ಸಿದ್ದೇಶ್ವರ

KannadaprabhaNewsNetwork | Published : Mar 4, 2025 12:30 AM

ಸಾರಾಂಶ

ವೀರಶೈವ ಲಿಂಗಾಯತರ ಸಭೆಗೆ ನನ್ನನ್ನು ಕರೆಯೋಕೆ ಧಮ್ಮು ಬೇಕಲ್ಲವಾ ಎಂದು ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಅವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯಗೆ ತಿರುಗೇಟು ನೀಡಿದ್ದಾರೆ.

ದಾವಣಗೆರೆ: ವೀರಶೈವ ಲಿಂಗಾಯತರ ಸಭೆಗೆ ನನ್ನನ್ನು ಕರೆಯೋಕೆ ಧಮ್ಮು ಬೇಕಲ್ಲವಾ ಎಂದು ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಅವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದಾವಣಗೆರೆಯಲ್ಲಿ ವೀರಶೈವ ಲಿಂಗಾಯತರ ಸಭೆ ನಡೆಯುತ್ತಿರುವ ವಿಚಾರ ನನಗೆ ಗೊತ್ತಿದೆ. ಆದರೆ, ನಾನು ಲಿಂಗಾಯತ ಮುಖಂಡನಲ್ಲ. ಸರ್ವಜನಾಂಗದ ನಾಯಕ. ಬಿಜೆಪಿಯ ನಾಯಕ ನಾನು. ಅದನ್ನು ಇಲ್ಲ ಅಂತಾನೂ ಹೇಳಲ್ಲ. ಬೆಂಗಳೂರಿನ ಸಭೆಗೆ ಕರೆದಿದ್ದರು, ಹೋಗಿದ್ದೆ. ಇಲ್ಲಿ ಸಭೆಗೆ ಕರೆದಿದ್ದರೂ ಹೋಗುತ್ತಿದ್ದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರಷ್ಟೇ ಅಲ್ಲ, ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯ ಸಾಧ್ಯತೆಯೂ ಇದೆ. 15 ದಿನದಲ್ಲೇ ಬದಲಾವಣೆ ಆಗಬಹುದು. ಹೊಸ ಅಧ್ಯಕ್ಷರ ಆಯ್ಕೆಯಾಗಬಹುದು ಅಥವಾ ಆಗದೇ ಇರಬಹುದು. ಇರುವವರನ್ನೇ ಮುಂದುವರಿಸಲೂಬಹುದು. ಅದೆಲ್ಲಾ ಪಕ್ಷದ ರಾಷ್ಟ್ರೀಯ ನಾಯಕರು, ವರಿಷ್ಠರು ತೀರ್ಮಾನಿಸುತ್ತಾರೆ. ಹೊಸ ಅಧ್ಯಕ್ಷರ ಘೋಷಿಸುವುದಿದ್ದರೆ ಅದನ್ನು ರಾಷ್ಟ್ರೀಯ ನಾಯಕರೇ ಮಾಡುತ್ತಾರೆ ಎಂದ ಅವರು, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದರು.

ಪಕ್ಷದ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ಮುರುಗೇಶ ಆರಾಧ್ಯ, ಎಸ್.ಟಿ.ಯೋಗೇಶ್ವರ ಇತರರು ಇದ್ದರು.

- - -

(ಟಾಪ್‌ ಕೋಟ್‌)

ನಾನು ಬ್ರೇಕಿಂಗ್ ನ್ಯೂಸ್ ಕೊಡುವವನಲ್ಲ. ಬಸವನಗೌಡ ಪಾಟೀಲ್ ಯತ್ನಾಳ್‌ಗೆ ಕೇಳಿದರೆ ನಿಮಗೆ ಅದೆಲ್ಲಾ ಸಿಗಬಹುದು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಯೆಂಬುದಾಗಿ ಯಾರೂ ಚರ್ಚೆ ಮಾಡಿಲ್ಲ. ನೂರಕ್ಕೆ ನೂರರಷ್ಟು ಹೇಳುತ್ತೇನೆ, ಯಾವುದೇ ಕಾರಣಕ್ಕೂ ರಾಜ್ಯ ವಿಧಾನಸಭೆಗಾಗಲೀ, ಲೋಕಸಭೆಗಾಗಲೀ ಚುನಾವಣೆ ನಡೆಯುವುದಿಲ್ಲ

- ಜಿ.ಎಂ. ಸಿದ್ದೇಶ್ವರ, ಮಾಜಿ ಸಂಸದ

- - -

-1ಕೆಡಿವಿಜಿ11, 12: ಜಿ.ಎಂ.ಸಿದ್ದೇಶ್ವರ

Share this article