ಬಾಳೆಹೊನ್ನೂರು, ಶೃಂಗೇರಿ ಕ್ಷೇತ್ರದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಗರಿಗೆದರಿರುವ ಬಗ್ಗೆ ಮುಖ್ಯಮಂತ್ರಿ, ಡಿಸಿಎಂ, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗೃಹ ಸಚಿವರ ಸಂಪರ್ಕ ಸಾಧ್ಯವಾಗಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಸಣ್ಣಪುಟ್ಟ ಒತ್ತುವರಿ ಮಾಡಿದವರ ತೆರವುಗೊಳಿಸುವ ಹುನ್ನಾರ ಹಿನ್ನೆಲೆ ನಕ್ಸಲ್ ಚಟುವಟಿಕೆ ಮುನ್ನೆಲೆಗೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಶೃಂಗೇರಿ ಕ್ಷೇತ್ರದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಗರಿಗೆದರಿರುವ ಬಗ್ಗೆ ಮುಖ್ಯಮಂತ್ರಿ, ಡಿಸಿಎಂ, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗೃಹ ಸಚಿವರ ಸಂಪರ್ಕ ಸಾಧ್ಯವಾಗಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಅರಣ್ಯ ಇಲಾಖೆ ವಿವಿಧ ಕಾನೂನುಗಳಿಂದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ತಲೆ ತಲಾಂತರದಿಂದ ಬದುಕು ಕಟ್ಟಿಕೊಂಡವರ ಮೂಲಭೂತ ಸೌಕರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅಡಚಣೆ ಮಾಡುತ್ತಿದ್ದು, ಬದುಕಿಗಾಗಿ ಸಣ್ಣಪುಟ್ಟ ಒತ್ತುವರಿ ಮಾಡಿ ಕೊಂಡವರನ್ನು ತೆರವುಗೊಳಿಸುವ ಹುನ್ನಾರ ಹಿನ್ನೆಲೆಯಲ್ಲಿ ನಕ್ಸಲ್ ಚಟುವಟಿಕೆ ಮುನ್ನೆಲೆಗೆ ಬಂದಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.ಶೃಂಗೇರಿ ಕ್ಷೇತ್ರದಲ್ಲಿ ಎಲ್ಲಿಯೂ ಒತ್ತುವರಿ ತೆರವು ಮಾಡಿಲ್ಲ. ಆದರೆ ಕೆಲವರು ಸುಮ್ಮನೇ ಒತ್ತುವರಿ ತೆರವು ಮಾಡಿದ್ದಾರೆ ಎಂದು ಪ್ರತಿಭಟಿಸುತ್ತಿದ್ದಾರೆ. ಮುಂದಿನ ಪೀಳಿಗೆಗೆ ಪರಿಸರದ ಕೊಡುಗೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ದೆಹಲಿ ಯ ತಾಪಮಾನ ನೋಡಿದರೆ ಅದರ ಅವಶ್ಯಕತೆ ನಮಗೆ ತಿಳಿಯಲಿದೆ. ಕೆಲವರಿಗೆ ಮನೆ ಕಟ್ಟಲು ಜಾಗವಿಲ್ಲ. ಇರುವ ಜಾಗವನ್ನೆಲ್ಲಾ ಅರಣ್ಯ ಮಾಡಿದ್ದಾರೆ. ಅವೈಜ್ಞಾನಿಕ ಅರಣ್ಯವನ್ನು ಮೀಸಲು ಮಾಡಿರು ವುದು, ಒಂದೇ ಸರ್ವೆ ನಂಬರಿನ ಅರಣ್ಯವನ್ನು ಡೀಮ್ಡ್ ಫಾರೆಸ್ಟ್, 4/1 ನೋಟಿಫಿಕೇಶನ್ ಮಾಡಿರುವ ಗೊಂದಲ ವಿದೆ. ಈ ಬಗ್ಗೆ ಟಾಸ್ಕ್ ಪೋರ್ಸ್ ರಚನೆ ಕೆಲಸ ಶೇ.75 ಮುಕ್ತಾಯಗೊಂಡಿದ್ದು, ಶೇ.25 ಸರ್ಕಾರಿ ಆದೇಶವಾದಲ್ಲಿ ಅರ್ಹರಿಗೆ ನ್ಯಾಯ ಕೊಡಿಸಲು ಸಾಧ್ಯ ಎಂದರು.ಕ್ಷೇತ್ರದಲ್ಲಿ ಮಳೆ ನಿಂತು ಒಂದು ವಾರವಾಗಿದೆ. ಕ್ಷೇತ್ರಾದ್ಯಂತ 10-15 ಜೆಸಿಬಿ ಗಳು ಮುಖ್ಯರಸ್ತೆ ಬದಿ ನಿರಂತರವಾಗಿ ಕೆಲಸ ಮಾಡುತ್ತಿವೆ. ಚಿಕ್ಕಮಗಳೂರಿನಲ್ಲಿ ಪಿ.ಡಬ್ಲ್ಯೂ.ಡಿ ಅಧಿಕಾರಿಗಳ ಸಭೆ ಶೃಂಗೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆಸಲಾಗಿದೆ. ಮಳೆ ನಿಂತು, ಭೂಮಿ ಸಂಪೂರ್ಣ ಒಣಗಿದ ನಂತರ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವುದು. ಅಡಕೆ ಕೊಳೆ ರೋಗದ ಕುರಿತು ಪರಿಹಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿ ಮಾತನಾಡಿದ್ದು, ಸೂಕ್ತವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿ ರೈತರ ನಿಯೋಗ ತೆರಳಿ ಚಿರ್ಚಿಸಲಾಗುವುದು. ಕಳೆದ ಸಾಲಿಗಿಂತ ಶೇ.30 ಮಳೆ ಅಧಿಕವಾಗಿದ್ದು, ಈ ಬಗ್ಗೆ ಮಲೆನಾಡು ಭಾಗದ ಎಲ್ಲಾ ಶಾಸಕರು ಸಂಬಂಧಿಸಿದ ಸಚಿವರು, ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಕಡೂರಿನಲ್ಲಿ ನ.25ರಂದು ಜನಸಂಪರ್ಕ ಸಭೆಯಿದೆ. ಅಲ್ಲಿ ಸಚಿವ ಕೆ.ಜೆ.ಜಾರ್ಜ್ ರೊಂದಿಗೆ ಸಮಾಲೋಚಿಸಲಾಗುವುದು ಎಂದರು.
ರಾಜೇಗೌಡ ನಾಟ್ ಫಾರ್ ಸೇಲ್ (ಬಾಕ್ಸ್)
ಬಿಜೆಪಿಯಿಂದ ಈ ಹಿಂದೆ ನನಗೆ ಆಫರ್ ಬಂದಿತ್ತು. ಹಲವಾರು ಜನ ಬಿಜೆಪಿ ನಾಯಕರು ನನಗೆ ಬಹಳ ಒತ್ತಡ ತಂದಿದ್ದು, ಸಾಕಷ್ಟು ಆಸೆ, ಆಮಿಷ ಒಡ್ಡಿದ್ದರು. ಅಂದೇ ನಾನು ಬಗ್ಗಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಯಾರೂ ಆಪರೇಷನ್ ಕಮಲಕ್ಕೆ ಸಂಪರ್ಕ ಮಾಡಿಲ್ಲ. ರಾಜೇಗೌಡ ನಾಟ್ ಫಾರ್ ಸೇಲ್ ಎಂದು ಯಾರೂ ಬಂದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಇಂದು ನಮ್ಮದೇ ಆದ ಸ್ಥಿರ ಜನಪ್ರಿಯ ಸರ್ಕಾರವಿದೆ. ಐದು ಭಾಗ್ಯಗಳ ಘೋಷಣೆ ಮಾಡಿ, ಅಧಿಕಾರಕ್ಕೆ ಬಂದ 2-3 ತಿಂಗಳಲ್ಲಿ ಜನರಿಗೆ ಕೊಟ್ಟ ಕೀರ್ತಿಯಿದೆ. ಈ ಹಿಂದೆ ಕರೋನಾದಲ್ಲಿ ಜನ ಬೀದಿ ಬೀದಿಗಳಲ್ಲಿ ಸಾವನ್ನಪ್ಪಿದ್ದರು. ಜನ ತಿನ್ನಲು ಅನ್ನ, ವ್ಯವಸ್ಥೆಗಳಿಲ್ಲದೇ ಪರದಾಡಿದ್ದರು. ಅಂದಿನ ಸರ್ಕಾರದ ವಿರುದ್ಧ ಜನ ರೋಸಿ ಹೋಗಿದ್ದರು. ಅದನ್ನು ಸುಸ್ಥಿತಿಗೆ ತರುವ ಉದ್ದೇಶ , ಮಾನಸಿಕ ಸ್ಥೈರ್ಯ ತುಂಬಲು ಉಚಿತ ಭಾಗ್ಯಗಳ ಘೋಷಣೆ ಮಾಡಿ ಸರ್ಕಾರ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.