ನಿಮ್ಮ ಕೆಲಸ ಮಾಡಿದ್ದೇನೆ, ನನಗೆ ಕೂಲಿ ಕೊಡಿ: ಡಿಕೆ ಸುರೇಶ್

KannadaprabhaNewsNetwork |  
Published : Apr 16, 2024, 01:03 AM IST
ಯಡಿಯೂರಿನಲ್ಲಿ ಪ್ರಚಾರ ಸಭೆ ನಡೆಸಿದ ಡಿಕೆ ಸುರೇಶ್ | Kannada Prabha

ಸಾರಾಂಶ

ಹಳ್ಳಿಗಳು, ರೈತರು, ಮಹಿಳೆಯರ ಅಭಿವೃದ್ಧಿಗೆ ಅಗತ್ಯ ಪ್ರಯತ್ನ ಮಾಡಿದ್ದೇನೆ. ನಾನು ಪಂಚಾಯ್ತಿ ಸದಸ್ಯನಂತೆ ನಿಮ್ಮ ಊರಿಗೆ ಬಂದು ನಿಮ್ಮ ಕಷ್ಟ ಆಲಿಸಿ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಆ ಮೂಲಕ ನಿಮ್ಮ ಕಷ್ಟ - ಸುಖಗಳಲ್ಲಿ ಭಾಗಿಯಾಗಿ ನಿಮ್ಮ ತಾಲೂಕಿನ ಮಗನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಕನ್ನಡಿಗರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಈ ಚುನಾವಣೆಯಲ್ಲಿ ನೀವು ಸ್ವಾಭಿಮಾನದ ಮತವನ್ನು ನನಗೆ ಹಾಕಬೇಕು.

ಕನ್ನಡಪ್ರಭ ವಾರ್ತೆ ಕುಣಿಗಲ್

ನಾನು ನಿಮಗೆ ಕೆಲಸ ಮಾಡಿಕೊಟ್ಟಿದ್ದೇನೆ. ಹೀಗಾಗಿ ಕೂಲಿ ಕೊಡಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ ಎಂದು ಮನವಿ ಮಾಡಿದರು.

ಅವರು ಕುಣಿಗಲ್ ತಾಲೂಕಿನ ಯಡಿಯೂರು ಸೇರಿದಂತೆ ವಿವಿಧೆಡೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಇದೇ 26 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಸ್ತದ ಗುರುತಿಗೆ ಮತ ಕೇಳಲು ಬಂದಿದ್ದೇನೆ. ನಾನು ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ, ನೀವು ಮತ ಹಾಕಬೇಕು, ಬೇರೆಯವರಿಂದಲೂ ಹಾಕಿಸಬೇಕು ಎಂದರು.

ಈ ಕ್ಷೇತ್ರ ಹಾಗೂ ತಾಲೂಕಿನ ಅಭಿವೃದ್ಧಿಗೆ ನಾನು ಶ್ರಮಿಸುವುದಾಗಿ ಮಾತು ನೀಡಿದ್ದೆ. ನೀವೆಲ್ಲರೂ ಬೋರ್ ವೆಲ್ ನೀರು ಕುಡಿಯುತ್ತಿದ್ದೀರಿ. ಅದರಿಂದ ಆರೋಗ್ಯ ಹಾಳಾಗುತ್ತಿತ್ತು. ನಾನು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿ ಅವರಿಗೆ ಶುದ್ಧ ನೀರು ಪೂರೈಸಿದ್ದೇನೆ. ಈ ಕಾರ್ಯಕ್ರಮವನ್ನು ದೇಶದಲ್ಲೇ ಮೊದಲು ರೂಪಿಸಿದ್ದು ನಾನು ಎಂದರು.

ಹಳ್ಳಿಗಳು, ರೈತರು, ಮಹಿಳೆಯರ ಅಭಿವೃದ್ಧಿಗೆ ಅಗತ್ಯ ಪ್ರಯತ್ನ ಮಾಡಿದ್ದೇನೆ. ನಾನು ಪಂಚಾಯ್ತಿ ಸದಸ್ಯನಂತೆ ನಿಮ್ಮ ಊರಿಗೆ ಬಂದು ನಿಮ್ಮ ಕಷ್ಟ ಆಲಿಸಿ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಆ ಮೂಲಕ ನಿಮ್ಮ ಕಷ್ಟ - ಸುಖಗಳಲ್ಲಿ ಭಾಗಿಯಾಗಿ ನಿಮ್ಮ ತಾಲೂಕಿನ ಮಗನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಕನ್ನಡಿಗರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಈ ಚುನಾವಣೆಯಲ್ಲಿ ನೀವು ಸ್ವಾಭಿಮಾನದ ಮತವನ್ನು ನನಗೆ ಹಾಕಬೇಕು ಎಂದರು.

ಕರ್ನಾಟಕಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದೇನೆ. ಬಿಜೆಪಿ ಸರ್ಕಾರ ರೈತರಿಗೆ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಆದರೆ ಆ ಸರ್ಕಾರ ರೈತರಿಂದಲೇ ಜಿಎಸ್ ಟಿ ವಸೂಲಿ ಮಾಡುತ್ತಿದೆ. ಜನ ಸಾಮಾನ್ಯರು ಬಳಸುವ ಎಲ್ಲಾ ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿ ನಿಮ್ಮ ಜೀವನ ದುಬಾರಿ ಮಾಡಿದ್ದಾರೆ. ಇದು ಬಿಜೆಪಿ ಹಾಗೂ ಮೋದಿ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.

ರೈತರ ಗೊಬ್ಬರ, ಕೀಟ ನಾಶಕ, ನೇಗಿಲು, ಊಟ ಮಾಡುವ ಹಾಲು, ಮೋಸರು, ಉಪ್ಪು ಎಲ್ಲದರಲ್ಲೂ ಜಿಎಸ್ ಟಿ ಹಾಕಿದ್ದಾರೆ. ನೀವು ಸಂಪಾದನೆ ಮಾಡಿದ ಹಣ ಅಲ್ಲಿಗಲ್ಲಿಗೆ ಸರಿಹೋಗುವ ಪರಿಸ್ಥಿತಿ ನಿರ್ಮಾಣವಾಗಿ ಸಂಕಷ್ಟ ಎದುರಾಗಿದೆ, ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಬದುಕಿಗೆ ಆಸರೆಯಾಗಲು ನಮ್ಮ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತು. ಈ ಯೋಜನೆಗಳು ಜಾರಿ ನಂತರ ಪ್ರತಿ ತಿಂಗಳೂ ಪ್ರತಿ ಬಡ ಕುಟುಂಬಕ್ಕೆ ಸುಮಾರು 5 ಸಾವಿರ ಉಳಿತಾಯವಾಗುತ್ತಿದೆ. ಪ್ರತಿನಿತ್ಯ 35 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಗೃಹಜ್ಯೋತಿ ಜಾರಿ ಮಾಡಿದ್ದೇವೆ. ಕಳೆದ 9 ತಿಂಗಳಿಂದ 1.50 ಕೋಟಿ ಕುಟುಂಬಗಳಿಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತಿದ್ದೇವೆ. ಕುಣಿಗಲ್ ನಲ್ಲಿ 2 ಸಾವಿರ ಕುಟುಂಬಗಳು ಹೊರತಾಗಿ ಉಳಿದ ಎಲ್ಲಾ ಕುಟುಂಬಗಳು ಉಚಿತ ವಿದ್ಯುತ್ ಪಡೆಯುತ್ತಿವೆ ಎಂದರು.

ನಾವು ಕಾಂಗ್ರೆಸಿಗರಿಗೆ ಮಾತ್ರವಲ್ಲ, ಬಿಜೆಪಿ, ಜೆಡಿಎಸ್ ಸೇರಿ ಎಲ್ಲರಿಗೂ ಈ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಹೀಗಾಗಿ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಮೂಲಕ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಿತು. ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡದೇ ಇದ್ದಾಗ ಅದರ ಪ್ರತಿಯಾಗಿ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 170 ರೂ. ನೀಡಲಾಗುತ್ತಿದೆ. ಕುಣಿಗಲ್ ಕ್ಷೇತ್ರದಲ್ಲಿ 60 ಸಾವಿರ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿವೆ ಎಂದರು.

ವಿರೋಧ ಪಕ್ಷಗಳು ಈ ಯೋಜನೆಗಳಿಂದ ಸರ್ಕಾರ ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದವು. ಸರ್ಕಾರ ಬಡವರಿಗೆ ಸಹಾಯ ಮಾಡಿದರೆ ದಿವಾಳಿಯಾಗುವುದಿಲ್ಲ. ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ 17.50 ಲಕ್ಷ ಕೋಟಿ ಹಣವನ್ನು ಕೈಗಾರಿಕೋದ್ಯಮಿಗಳ ಸಾಲಮನ್ನಾ ಮಾಡಿದೆ ಎನ್ನುತ್ತಿದೆ, ಆದರೆ ಅವರು ರೈತರ ಸಾಲ ಮನ್ನಾ ಮಾಡಲಿಲ್ಲ, ಬರ ಪರಿಹಾರ ನೀಡಲಿಲ್ಲ, ಕಷ್ಟದಲ್ಲಿರುವವರಿಗೆ ನೆರವಾಗಲಿಲ್ಲ. ಕೇಂದ್ರ ಸರ್ಕಾರ ಸೀಮೆಂಟ್ ಮೇಲೆ ಶೇ. 18, ಕಬ್ಬಿಣದ ಮೇಲೆ 28% ಜಿಎಸ್ ಟಿ ಹಾಕಿದ್ದು ಬಡವರು, ಮಧ್ಯಮ ವರ್ಗದವರು ಮನೆ ಕಟ್ಟಲು ಹೇಗೆ ಸಾಧ್ಯ ಎಂದರು.

ದಕ್ಷಿಣ ಭಾರತದ ಹಣ ಉತ್ತರದ ರಾಜ್ಯಗಳಿಗೆ:

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ 24 ಲಕ್ಷ ಕೋಟಿ ಹಣವನ್ನು ಕನ್ನಡಿಗರು ಕಟ್ಟಿದ್ದಾರೆ. ಆದರೆ ನಮಗೆ ಕೇಂದ್ರ ಸರ್ಕಾರ ಕೊಟ್ಟಿರುವುದು ಹತ್ತು ವರ್ಷಗಳಲ್ಲಿ 2.92 ಲಕ್ಷ ಕೋಟಿ ಮಾತ್ರ ನೀಡಿದ್ದಾರೆ ಎಂದರು.

ಬಿಜೆಪಿಯವರಿಗೆ ಮತ ಹಾಕಲು ಅವರು ಮೇಕೆದಾಟು ಯೋಜನೆಗೆ ಅನುಮತಿ ನೀಡಿದ್ದಾರಾ? ಕಳಸಾ ಬಂಡೂರಿ ಯೋಜನೆ, ಕೃಷ್ಣಾ ಮೇಲ್ದಂಡೆ, ಭದ್ರ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿದ್ದಾರಾ? ಕೇವಲ ಸುಳ್ಳು ಹೇಳಿಕೊಂಡು ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ನೀಡಿ, ಕನ್ನಡಿಗರು ಭಿಕ್ಷೆ ಬೇಡುವ ಪರಿಸ್ಥಿತಿಗೆ ನೂಕುತ್ತಿದ್ದಾರೆ ಎಂದರು. ಈ ತಾಲೂಕಿನಲ್ಲಿ ನೀವು ಕೃಷ್ಣಕುಮಾರ, ನಾಗರಾಜಯ್ಯ ಅವರಿಗೆ ಮತ ಹಾಕಿದ್ದೀರಿ. ಈಗ ಇಬ್ಬರೂ ನಿಂತಿಲ್ಲ. ನಿಮ್ಮ ತಾಲೂಕಿನವರು ಯಾರೂ ನಿಂತಿಲ್ಲ. ನಿಮ್ಮ ತಾಲೂಕಿಗೆ ಸೇವೆ ಮಾಡಿ ಕೂಲಿ ಕೇಳುತ್ತಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ತಾಲೂಕಿಗೆ ಒಂದೂವರೆ ಸಾವಿರ ಕೋಟಿಯಷ್ಟು ಅನುದಾನವನ್ನು ಕೊಡಿಸಿದ್ದೇನೆ. ಬಿಜೆಪಿಯವರು ಕೊಡಿಸಿದ್ದಾರಾ?ಅವರು ನಾವು ಕೊಟ್ಟಿದ್ದನ್ನು ಕಿತ್ತುಕೊಂಡಿದ್ದರು ಎಂದರು. ಈಗ ಬಿಜೆಪಿಯಿಂದ ಈ ತಾಲೂಕಿನವರು, ಈ ಕ್ಷೇತ್ರದವರು ನಿಂತಿಲ್ಲ, ದೇವಗೌಡರ ಅಳಿಯ ಹಾಸನದವರು ನಿಂತಿದ್ದಾರೆ. ಅವರು ಅಲ್ಲಿರಲಿ, ನೀವು ನನಗೆ ಆಶೀರ್ವಾದ ಮಾಡಿ. ನಿಮ್ಮ ಋಣ ತೀರಿಸುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ ತೆಬಿಯಾ ರೋಸಿಯಾ ಹೂ ವೈಭವ!
ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌