2028ಕ್ಕೆ ಸರ್ಕಾರ ತರುವ ಮಾತುಕೊಟ್ಟಿದ್ದೇನೆ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Jun 19, 2025, 11:48 PM ISTUpdated : Jun 20, 2025, 10:28 AM IST
19 ಟಿವಿಕೆ 1 – ತುರುವೇಕೆರೆಗೆ ಆಗಮಿಸಿದ ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರನ್ನು ಜೆಡಿಎಸ್ ಕಾರ್ಯಕರ್ತರು ಅಭಿನಂದಿಸಿದರು. | Kannada Prabha

ಸಾರಾಂಶ

ನಮ್ಮ ಸರ್ಕಾರ ಬರುವ ತನಕ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ. ಪ್ರತಿ ದಿನ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವೆ. ಇದು ನನ್ನ ಶಪಥ ಎಂದು ರಾಜ್ಯ ಯುವ ಜೆಡಿಎಸ್ ನ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

 ತುರುವೇಕೆರೆ :  ಮುಂಬರುವ 2028 ರ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಸರ್ಕಾರ ತರುವ ಬಗ್ಗೆ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿಯವರಿಗೆ ಮಾತು ಕೊಟ್ಟಿದ್ದೇನೆ. ಹಾಗಾಗಿ ಇನ್ನೂ ಸಾವಿರ ದಿನಗಳು ಇವೆ. ನಮ್ಮ ಸರ್ಕಾರ ಬರುವ ತನಕ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ. ಪ್ರತಿ ದಿನ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವೆ. ಇದು ನನ್ನ ಶಪಥ ಎಂದು ರಾಜ್ಯ ಯುವ ಜೆಡಿಎಸ್ ನ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ನನ್ನನ್ನು ಮೂರು ಬಾರಿ ಸೋಲಿಸಲಾಗಿದೆ. ಇದಕ್ಕೆ ಎದೆಗುಂದುವವ ನಾನಲ್ಲ. ಇವೆಲ್ಲಾ ಸಾಮಾನ್ಯ. ಚುನಾವಣೆಗೆ ಇನ್ನೂ ಮೂರು ವರ್ಷ ಇದೆ. ಈಗಿಂದಲೇ ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ನಮ್ಮ ಹಿರಿಯರು ನನಗೆ ನೀಡಿದ್ದಾರೆ. 

ಮುಂಬರುವ ದಿನಗಳಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಚುನಾವಣೆಗಳು ನಡೆಯಲಿವೆ. ಆ ಹೊತ್ತಿಗೆ ನಮ್ಮ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಬೇಕಿದೆ ಎಂದರು. 

ನಾನು ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ ಅಲ್ಲ. ನನಗೆ ಶಾಸಕನಾಗಬೇಕು, ಸಂಸದನಾಗಬೇಕು ಎಂಬ ಹಂಬಲ ಇಲ್ಲ. ನಮ್ಮ ತಾತನವರು ಕಟ್ಟಿ ಬೆಳೆಸಿರುವ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಹಂಬಲವಿದೆ ಅಷ್ಟೇ. ಜೆಡಿಎಸ್ ಜನಮಾನಸದಲ್ಲಿ ಇದೆ. ಎಚ್.ಡಿ.ಕುಮಾರಸ್ವಾಮಿಯವರು ಮಾಡಿರುವ ಜನ ಸೇವೆ ರಾಜ್ಯದ ಜನರ ಹೃದಯದಲ್ಲಿ ಮನೆ ಮಾಡಿದೆ. ಕುಮಾರಸ್ವಾಮಿಯವರು ಜನ ಸಾಮಾನ್ಯರ ಮುಖ್ಯಮಂತ್ರಿ ಆಗಿದ್ದರು. ಇಂದಿಗೂ ಕುಮಾರಣ್ಣನವರ ಬಗ್ಗೆ ಜನರಿಗೆ ಬಹಳ ಗೌರವವಿದೆ ಎಂದರು. 

ಪ್ರಾದೇಶಿಕ ಪಕ್ಷಗಳು ಎಂದೆಂದೂ ರೈತರ, ದೀನ ದಲಿತರ, ಬಡವರ ಹಾಗೂ ನಾಡಿನ ಅಭಿವೃದ್ಧಿಯನ್ನು ಬಯಸುತ್ತದೆ. ಜನರ ನಿರೀಕ್ಷೆಯನ್ನು ಹುಸಿ ಮಾಡಬಾರದೆಂದು ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ನಿಶ್ಚಯಿಸಿ ಹೋರಾಟಕ್ಕೆ ಇಳಿದಿದ್ದೇನೆ. ಹಿರಿಯರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುವುದೇ ನನ್ನ ಗುರಿಯಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡವೆಂದುಕೊಂಡಿದ್ದೆ. ಆದರೆ ದೇವೇಗೌಡರು ಮತ್ತು ಕುಮಾರಣ್ಣನವರು ಮತ್ತೆ ನಾನೇ ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದಾರೆ.  ಮತ್ತೆ ನನಗೆ ಆಶೀರ್ವದಿಸಿ ಎಂದು ಕಾರ್ಯಕರ್ತರಲ್ಲಿ ಕೈಮುಗಿದು ಕೇಳಿಕೊಂಡರು. 

ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ಜಿಲ್ಲಾ ಅಧ್ಯಕ್ಷ ಅಂಜನಪ್ಪ. ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಮುಖಂಡರಾದ ಶಂಕರೇಗೌಡ, ವೆಂಕಟಾಪುರ ಯೋಗೀಶ್‌, ಎಂ.ಡಿ.ರಮೇಶ್ ಗೌಡ, ಎ.ಬಿ.ಜಗದೀಶ್ ಲೀಲಾವತಿ ಗಿಡ್ಡಯ್ಯ, ತ್ಯಾಗರಾಜು, ಮಂಗೀಕುಪ್ಪೆ ಬಸವರಾಜು, ರಾಜೀವ್ ಕೃಷ್ಣಪ್ಪ, ವೆಂಕಟೇಶ್ ಕೃಷ್ಣಪ್ಪ, ಸಿ.ಎಸ್.ಪುರ ನರಸಿಂಹಮೂರ್ತಿ, ನರಸೇಗೌಡ, ಜಗದೀಶ್, ಗೋಣಿತುಮಕೂರು ನಾಗೇಂದ್ರ, ಗೊಟ್ಟೀಕೆರೆ ಪ್ರಕಾಶ್, ಕುಶಾಲ್ ಕುಮಾರ್, ಮಾದಿಹಳ್ಳಿ ಕಾಂತರಾಜು, ಬೂವನಹಳ್ಳಿ ಪುನಿತ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

PREV
Read more Articles on

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ