ತಂಬಾಕು ಬಿಟ್ಹಾಕಿ ತೆಂಗು, ಅಡಿಕೆ ಜೊತೆಗೆ ನರ್ಸರಿ ಮಾಡ್ರೀ: ಭರ್ಜರಿ ಲಾಭರೀ...!

KannadaprabhaNewsNetwork |  
Published : Jun 05, 2025, 12:47 AM ISTUpdated : Jun 05, 2025, 12:48 AM IST
ಮಹದೇವ 10 | Kannada Prabha

ಸಾರಾಂಶ

ಪಿರಿಯಾಪಟ್ಟಣ ತಾಲೂಕು ಚಿಕ್ಕಮಳಲಿ ಗ್ರಾಮದ ಎಸ್‌. ಮಹದೇವ ಅವರು 2013 ರಿಂದ ತಂಬಾಕು ಬಿಟ್ಹಾಕಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೆಂಗು, ಅಡಿಕೆ ಜೊತೆಗೆ ನರ್ಸರಿ ನಡೆಸುತ್ತಾ ಭರ್ಜರಿ ಲಾಭ ಮಾಡುತ್ತಿದ್ದಾರೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಪಿರಿಯಾಪಟ್ಟಣ ತಾಲೂಕು ಚಿಕ್ಕಮಳಲಿ ಗ್ರಾಮದ ಎಸ್‌. ಮಹದೇವ ಅವರು 2013 ರಿಂದ ತಂಬಾಕು ಬಿಟ್ಹಾಕಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೆಂಗು, ಅಡಿಕೆ ಜೊತೆಗೆ ನರ್ಸರಿ ನಡೆಸುತ್ತಾ ಭರ್ಜರಿ ಲಾಭ ಮಾಡುತ್ತಿದ್ದಾರೆ.

ಅವರಿಗೆ 13 ಎಕರೆ ಜಮೀನಿದೆ. ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ನಾಲ್ಕು ಕೊಳವೆ ಬಾವಿ ಕೊರೆಸಿದ್ದಾರೆ. ಸೋಲಾರ್‌ ಐಪಿ ಸೆಟ್‌ ಇದೆ. ಮೂರು ವರ್ಷ ಜಿ-9 ಹಾಗೂ ಏಲಕ್ಕಿ ಬಾಳೆ ಬೆಳೆದಿದ್ದರು. ಮೊದಲ ಬಾರಿ ದರ ಕುಸಿತದಿಂದ ನಷ್ಟವಾಯಿತು. ಎರಡನೇ ವರ್ಷ ಉತ್ತಮ ಆದಾಯ ಬಂದಿತು. ತೆಂಗು-130 ಫಸಲು ಬರುವ ಮರಗಳಿವೆ. 250 ಹೊಸದಾಗಿ ಹಾಕಿದ್ದಾರೆ. 30 ರು.ವರೆಗೆ ಸಿಕ್ಕರೆ ಎಳನೀರು ಹಂತದಲ್ಲಿಯೇ ಮಾರಾಟ ಮಾಡುತ್ತಾರೆ. ಇಲ್ಲವೇ ಕೊಬ್ಬರಿ ಮಾಡಿ, ತಿಪಟೂರಿನಲ್ಲಿ ಮಾರಾಟ ಮಾಡುತ್ತಾರೆ.

ಕ್ವಿಂಟಲ್‌ಗೆ 3000-3,500 ರು. ಸಿಗುತ್ತದೆ. ಅಡಿಕೆ- 2500 ಮರಗಳಿವೆ. ಈ ಪೈಕಿ 300-400 ರಲ್ಲಿ ಫಸಲಿಲ್ಲ. ಪ್ರತಿಮರಕ್ಕೆ 17 ಕೆಜಿ ಫಸಲು ಬಂದಿದ್ದು, ರಾಮನಾಥಪುರದ ಕ್ಯಾಂಪ್ಕೋ ಕಂಪನಿಗೆ ಪೂರೈಸಿದ್ದಾರೆ. ಸ್ಥಳೀಯವಾಗಿಯೂ ಮಾರಾಟ ಮಾಡಿದ್ದಾರೆ.

ಕೋಸು, ಮೆಣಸಿನಕಾಯಿ, ಟೊಮ್ಯಾಟೋಸ ಕಲ್ಲಂಗಡಿ, ಪಪ್ಪಾಯ, ತೆಂಗು, ಅಡಿಕೆ ಸಸಿಗಳ ನರ್ಸರಿ ಇದೆ. ವರ್ಷಕ್ಕೆ ಸುಮಾರು 2-3 ಲಕ್ಷ ಸಸಿಗಳನ್ನು ಮಾರಾಟ ಮಾಡುತ್ತಾರೆ. ಅರಣ್ಯ ಕೃಷಿಗೂ ಒತ್ತು ನೀಡಿದ್ದು, ಸಿಲ್ವರ್- 200, ತೇಗ- 150, ನೀಲಗಿರಿ- 100 ಮರಗಳಿವೆ.

ಇವರ ಬಳಿ ನಾಟಿ ಹಸು-5, ಎಚ್‌ಎಫ್‌- 2 ಹಸುಗಳಿವೆ. ಮೇಕೆ-2, ನಾಟಿ ಕೋಳಿ- 15 ಇವೆ. ಕುರಿ ಹಾಗೂ ಕೋಳಿ ಶೆಡ್‌ ನಿರ್ಮಿಸಿದ್ದಾರೆ. ಕೋಳಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕಾಣಿಕೆ ಮಾಡಬೇಕು ಎಂಬ ಉದ್ದೇಶ ಇತ್ತು.ಆದರೆ ನರಿ ಹಾಗೂ ನಾಯಿಗಳ ಕಾಟದಿಂದ ಸಾಧ್ಯವಾಗಿಲ್ಲ. ಕೃಷಿ ಇಲಾಖೆಯಿಂದ ಸಹಾಯಧನ ಪಡೆದು ಕೃಷಿ ಹೊಂಡ ನಿರ್ಮಿಸಿದ್ದಾರೆ. ಮೀನು ಸಾಕಾಣಿಕೆ ಮಾಡಬೇಕು ಎಂಬುದು ಕಾರ್ಯರೂಪಕ್ಕೆ ಬಂದಿಲ್ಲ. ಜೇನು ಸಾಕಾಣಿಕೆಯನ್ನು ಕೂಡ ಮಾಡುತ್ತಾರೆ. ಮೊದಲು 24 ಪೆಟ್ಟಿಗೆಗಳಿದ್ದವು. ಈಗ 5 ಪೆಟ್ಟಿಗೆಗಳಿವೆ.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣು ಪರೀಕ್ಷೆ ಮಾಡಿಸುತ್ತಾರೆ. ಜಮೀನಿಗೆ ಹನಿ ಹಾಗೂ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಟ್ರ್ಯಾಕ್ಟರ್‌ ಕೂಡ ಇದೆ.

ತೋಟಗಾರಿಕೆ ವಿಭಾಗದಲ್ಲಿ ಸಾಧನೆಗಾಗಿ ಮಹದೇವ ಅವರನ್ನು 2022ರ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ. ಪೊನ್ನಂಪೇಟೆ ಅರಣ್ಯ ಕಾಲೇಜಿಗೆ ಹೋಗಿ ಜೇನುಕೃಷಿಯ ಬಗ್ಗೆ ತರಬೇತಿ ನೀಡಿದ್ದಾರೆ.

ಸಂಪರ್ಕ ವಿಳಾಸ

ಎಸ್. ಮಹದೇವ ಬಿನ್‌ ಶಿವಣ್ಣೇಗೌಡ

ಚಿಕ್ಕಮಳಲಿ,

ಬೆಟ್ಟದಪುರ ಹೋಬಳಿ

ಪಿರಿಯಾಪಟ್ಟಣ ತಾಲೂಕು

ಮೈಸೂರು ಜಿಲ್ಲೆ

ಮೊ. 98456 47875

ಕೃಷಿಯನ್ನು ಖುಷಿಯಿಂದ ಮಾಡಬೇಕು. ಇದಕ್ಕೆ ನಿರಂತರ ಪರಿಶ್ರಮ ಬೇಕು. ಲೆಕ್ಕಾಚಾರದ ಬದುಕು ಸಾಗಿಸುತ್ತಾ ನಿರಂತರ ದುಡಿಮೆ ಮಾಡಿದರೆ ಕೃಷಿಯಿಂದ ಲಾಭ ಇದೆ.

-ಎಸ್‌.ಮಹದೇವ, ಚಿಕ್ಕಮಳಲಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ