ಕನ್ನಡಪ್ರಭ ವಾರ್ತೆ, ದಾವಣೆಗೆರೆ ವಿಜ್ಞಾನ ಸಾಹಿತ್ಯ, ವಚನ, ಮಕ್ಕಳ ಸಾಹಿತ್ಯ, ಚುಟುಕು ಸಾಹಿತ್ಯ, ಬಂಡಾಯ ಸಾಹಿತ್ಯ ಹೀಗೆ ಎಲ್ಲಾ ಸಾಹಿತ್ಯಗಳ ಸಂಘ-ಸಂಸ್ಥೆಗಳಿಗೂ ಕನ್ನಡ ಸಾಹಿತ್ಯ ಪರಿಷತ್ ಮಾತೃ ಸ್ಥಾನದಲ್ಲಿದ್ದು ಕೆಲಸ ಮಾಡುತ್ತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು. ನಗರದ ರೋಟರಿ ಬಾಲಭವನದಲ್ಲಿ ಶುಕ್ರವಾರ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಸ್ಫೂರ್ತಿ ಪ್ರಕಾಶನ ತೆಲಿಗಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಕವಿಗೋಷ್ಠಿ ಕ್ರೋಧಿನಾಮ ಸಂವತ್ಸರದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾವನೆಗಳಿಗೆ ಅಕ್ಷರ ರೂಪ ಕೊಟ್ಟರೆ ಅದೆಲ್ಲವೂ ಸಾಹಿತ್ಯವಾಗಲಿದೆ ಎಂದರು. ವಿಜ್ಞಾನ ಕ್ಷೇತ್ರದಲ್ಲಿ ಸಾಹಿತ್ಯ ರಚನೆಯಾದರೆ ಅದು ವಿಜ್ಞಾನ ಸಾಹಿತ್ಯವಾಗುತ್ತದೆ. ಮಕ್ಕಳ ಲಾಲಿತ್ಯವುಳ್ಳ ಸಾಹಿತ್ಯ ಮಕ್ಕಳ ಸಾಹಿತ್ಯವಾದರೆ, ವ್ಯವಸ್ಥೆಯ ವಿರುದ್ಧ ಬಂಡಾಯದ ದನಿ ಬಂಡಾಯ ಸಾಹಿತ್ಯವಾಗುತ್ತದೆ. ಹಾಗೆಯೇ ಚುಟುಕು ಅಭಿವ್ಯಕ್ತಿಯ ಚುಟುಕು ಸಾಹಿತ್ಯವಾಗುತ್ತದೆ. ಅನುಭವಗಳನ್ನು ಕಟ್ಟಿ ಕೊಟ್ಟ, ಜೀವನ ಸಂದೇಶ ಸಾರಿದ ಸಾಹಿತ್ಯ ಶರಣರ ವಚನ ಸಾಹಿತ್ಯ ಎಂದವರು ಹೇಳಿದರು. ಇನ್ನು ಕನ್ನಡ ಸಾಹಿತ್ಯ ಪರಿಷತ್ ನಾಡಿನುದ್ದಗಲಕ್ಕೆ ಮಾತ್ರವಲ್ಲದೇ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನದೇ ಆದ ಕೆಲಸ ಮಾಡುತ್ತಿದೆ. ಯುಗಾದಿ ಹಬ್ಬವನ್ನು ಹೀಗೆ ಆಚರಿಸುವ ಮೂಲಕ ಸಾಹಿತ್ಯಿಕ ಮನಸ್ಸುಗಳು ಹಬ್ಬದ ಜೊತೆಗೆ ಜನರಲ್ಲಿ, ವಿದ್ಯಾರ್ಥಿ, ಯುವಜನರು, ಮಹಿಳೆಯರು, ಹಿರಿಯರಲ್ಲಿ ಸಾಹಿತ್ಯಾ ಭಿರುಚಿ ಮೂಡಿಸುವ ಕೆಲಸ ಮಾಡುವ ಮೂಲಕ ಇತರರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದು ಅವರು ಶ್ಲಾಘಿಸಿದರು.