ಪ್ರತಿಭೆ ಇದ್ದರೆ ಒಂದಲ್ಲ ಒಂದು ದಿನ ಗೆಲುವು ಸಿಗುತ್ತದೆ: ಪ್ರೊ.ಎನ್.ಕೆ.ಲೋಕನಾಥ್‌

KannadaprabhaNewsNetwork |  
Published : Sep 10, 2026, 01:15 AM IST
3 | Kannada Prabha

ಸಾರಾಂಶ

ಜ್ಞಾನದ ಜತೆಗೆ ನಮ್ಮಲ್ಲಿರುವ ಪ್ರತಿಭೆ ಗುರುತಿಸಿ ಅದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಜೀವನದಲ್ಲಿ ಸೋಲು, ಗೆಲುವು ಎರಡು ಇರುತ್ತದೆ. ಪ್ರತಿದಿನ ಸೋಲೇ ಬರುವುದಿಲ್ಲ. ನಮ್ಮಲ್ಲಿ ಪ್ರತಿಭೆ ಇದ್ದರೆ ಒಂದಲ್ಲ ಒಂದು ದಿನ ಗೆಲುವು ಸಿಗುತ್ತದೆ. ಪ್ರತಿಭೆಯಿದ್ದರೆ ಎಲ್ಲಿದ್ದರೂ ಕೂಡ ನಮ್ಮನ್ನು ಗುರುತಿಸುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮಲ್ಲಿರುವ ಪ್ರತಿಭೆಯನ್ನು ನಾವೇ ಗುರುತಿಸಿಕೊಳ್ಳಬೇಕು. ಪ್ರತಿಭೆ ಇದ್ದರೆ ಒಂದಲ್ಲ ಒಂದು ದಿನ ಗೆಲವು ಸಿಗುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ ಹೇಳಿದರು.

ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಪಠ್ಯೇತರ ಚಟುವಟಿಕೆಗಳ ಸಮಿತಿ ವತಿಯಿಂದ ಬುಧವಾರ ನಡೆದ ಪ್ರತಿಭಾನ್ವೇಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಭೆ ಇರುತ್ತದೆ. ತಮ್ಮಲ್ಲಿರುವ ಪ್ರತಿಭೆಯನ್ನು ಮೊದಲು ನಾವೇ ಗುರುತಿಸಿಕೊಳ್ಳಬೇಕು. ಭಾರತದ ಹೆಸರಾಂತ ನಟ ರಜನಿಕಾಂತ್ ಅವರು ಬಸ್ ಕಂಡಕ್ಟರ್ ಆಗಿದ್ದವರು. ರಜನಿಕಾಂತ್ ಮೊದಲು ತಮ್ಮಲ್ಲಿರುವ ಪ್ರತಿಭೆ ಗುರುತಿಸಿಕೊಂಡು ವಿಭಿನ್ನ ಶೈಲಿಯಿಂದಲೇ ವ್ಯಕ್ತಪಡಿಸಿದ ನಂತರವೇ ಅವರು ಹೀರೋ ಆಗಿದ್ದಾಗಿ ಅದರು ತಿಳಿಸಿದರು.

ಜ್ಞಾನದ ಜತೆಗೆ ನಮ್ಮಲ್ಲಿರುವ ಪ್ರತಿಭೆ ಗುರುತಿಸಿ ಅದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಜೀವನದಲ್ಲಿ ಸೋಲು, ಗೆಲುವು ಎರಡು ಇರುತ್ತದೆ. ಪ್ರತಿದಿನ ಸೋಲೇ ಬರುವುದಿಲ್ಲ. ನಮ್ಮಲ್ಲಿ ಪ್ರತಿಭೆ ಇದ್ದರೆ ಒಂದಲ್ಲ ಒಂದು ದಿನ ಗೆಲುವು ಸಿಗುತ್ತದೆ. ಪ್ರತಿಭೆಯಿದ್ದರೆ ಎಲ್ಲಿದ್ದರೂ ಕೂಡ ನಮ್ಮನ್ನು ಗುರುತಿಸುತ್ತಾರೆ ಎಂದರು.

ಅಂಬೇಡ್ಕರ್ ಅವರು ಓದಿದಷ್ಟು ನಾವು ಓದಲು ಸಾಧ್ಯವಿಲ್ಲ. ಅವರು ಈ ಮಟ್ಟಕ್ಕೆ ಬರಲು ಎಷ್ಟು ಕಷ್ಟಪಟ್ಟಿದ್ದರು ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಆ ಮಟ್ಟದ ಶ್ರಮ, ಗುರಿ ಅವರಲ್ಲಿ ಇತ್ತು. ಅಂತಹ ಗುರಿ, ಶ್ರಮ ಹಾಕಿ ನಾವೂ ಸಹ ಓದಬೇಕು ಎಂದರು.

ಮಹಾರಾಜ ಕಾಲೇಜು ಮೈಸೂರಿನ ಅಸ್ಮಿತೆ. ಈ ಕಾಲೇಜಿನಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು, ಕೆಲಸ ಮಾಡಿದವರು ಸಮಾಜದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಂಡು ಸಾಗಿದರೆ ಎಲ್ಲರೂ ಯಶಸ್ಸು ಕಾಣಬಹುದು. ಮಹಾರಾಜ ಕಾಲೇಜಿನಲ್ಲಿ ಓದಿದವರು ಮುಖ್ಯಮಂತ್ರಿಗಳಾಗಿದ್ದಾರೆ, ರಾಷ್ಟ್ರಕವಿಗಳಾಗಿದ್ದಾರೆ ಹಾಗೂ ಒಳ್ಳೊಳ್ಳೆ ಆಡಳಿತಗಾರರಾಗಿದ್ದಾರೆ ಎಂದರು.

ಜ್ಞಾನಕ್ಕಾಗಿ ಓದಬೇಕು. ಓದು ಕೇವಲ ಜ್ಞಾನ ಹೆಚ್ಚಿಸುತ್ತದೆ. ಆದರೆ ಇಂದು ಓದಿನ ಜತೆಗೆ ಕೌಶಲ್ಯವನ್ನು ಮೈಗೂಡಿಸಿಕೊಳ್ಳಬೇಕು. ಕೆಲಸ ತೆಗೆದುಕೊಳ್ಳುವುದಕ್ಕಾಗಿ ನಾವು ಓದಬಾರದು. ಶಿಕ್ಷಣದಿಂದ ಮಾತ್ರ ನಮ್ಮನ್ನು ನಾವು ಬದಲಿಸಿಕೊಳ್ಳಲು ಸಾಧ್ಯ. ಸಮಾಜದಲ್ಲಿ ಉನ್ನತ ವ್ಯಕ್ತಿ ಎನಿಸಿಕೊಳ್ಳಲು ಶಿಕ್ಷಣ ಕಲಿಯಬೇಕು. ಅದರಲ್ಲೂ ಪ್ರಮುಖವಾಗಿ ಉನ್ನತ ಶಿಕ್ಷಣವನ್ನು ಬಹಳ ಶಿಸ್ತಿನಿಂದ ಓದಬೇಕು ಎಂದರು.

ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ. ಷಣ್ಮುಗಂ, ಗಾಯಕರಾದ ವೆ.ಚಿ. ಅರುಣ್, ವೈ.ಜಿ. ಉಮಾ, ಮಹಾರಾಜ ಕಾಲೇಜಿನ ಆಡಳಿತಾಧಿಕಾರಿ ಡಾ.ಎಂ. ಮಂಜುಳಾ, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕಿ ಪ್ರೊ. ವಿಜಯಲಕ್ಷ್ಮಿ ಮನಾಪುರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತ್ರೇಯ ಕಾಲೇಜು ಲಾಕ್‌ಡೌನ್‌: 2ನೇ ದಿನಕ್ಕೆ ಕಾಲಿಟ್ಟ ಧರಣಿ
ಈಶ್ವರ ಖಂಡ್ರೆ ಭೇಟಿ ಬೆನ್ನಲ್ಲೇ ಹಿರೇಹಳ್ಳಿ ಕೆರೆ ಒತ್ತುವರಿ ತೆರವು