- ಗಣಿ, ಭೂ ವಿಜ್ಞಾನ ಇಲಾಖೆ ರಾಸಾಯನಿಕ ಪ್ರಯೋಗಾಲಯ ಉದ್ಘಾಟನೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಗಣಿ ಮತ್ತು ಭೂವಿಜ್ಞಾನ ಇಲಾಖೆಯ ವ್ಯಾಪ್ತಿಯ ರಾಸಾಯನಿಕ ಪ್ರಯೋಗಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ₹4 ಕೋಟಿಗೂ ಅಧಿಕ ಅನುದಾನ ಮೀಸಲಿಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಸಾಯನಿಕ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಒಟ್ಟು 3 ರಾಸಾಯನಿಕ ಪ್ರಯೋಗಾಲಯಗಳು ಕ್ರಮವಾಗಿ ಕೇಂದ್ರ ಕಚೇರಿ ಬೆಂಗಳೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲಾ ಕಚೇರಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಜಯನಗರ ಜಿಲ್ಲಾ ಕಚೇರಿಯಲ್ಲಿ ಹೊಸದಾಗಿ ರಾಸಾಯನಿಕ ಪ್ರಯೋಗಾಲಯವನ್ನು ಕೆಎಂಇಆರ್ಸಿ ಅನುದಾನದಡಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ. ಪ್ರಸ್ತುತ ಇಲಾಖೆಯ ಎಲ್ಲ ರಾಸಾಯನಿಕ ಪ್ರಯೋಗಾಲಯಗಳನ್ನು ಸೇರಿಕೊಂಡಂತೆ ಹಲವು ಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಕ್ರಮಕ್ಕೆ ತಿಳಿಸಲಾಗಿದೆ ಎಂದರು.ರಾಜ್ಯಾದ್ಯಂತ ಇಲಾಖೆಯ ಎಲ್ಲ ಜಿಲ್ಲಾ ಕಚೇರಿಗಳಿಂದ ಭೂ ವಿಜ್ಞಾನಿಗಳು ಸಂಗ್ರಹಿಸಲಾಗುವ ಖನಿಜ, ಅದಿರು ಮತ್ತು ಕಲ್ಲಿನ ಮಾದರಿಗಳಲ್ಲಿನ ಶೇಕಡವಾರು ಖನಿಜಾಂಶಗಳಿಗೆ ರಾಸಾಯನಿಕ ವಿಶ್ಲೇಷಣೆ ಕೈಗೊಂಡು ವರದಿ ನೀಡಲಾಗುತ್ತಿದೆ. ಕೇಂದ್ರ ಕಚೇರಿಯ ರಾಸಾಯನಿಕ ಪ್ರಯೋಗಾಲಯದಲ್ಲಿ ಸಾರ್ವಜನಿಕರಿಂದಲೂ ವಿಶ್ಲೇಷಣಾ ಶುಲ್ಕ ಪಾವತಿಸಿಕೊಂಡು ಸೇವಾಸಿಂಧು ಸೇವೆಯಡಿ ಸೇವೆ ನೀಡಲಾಗುತ್ತಿದೆ. ಇಲಾಖೆಯಲ್ಲಿ ಇ-ಹರಾಜು ಪ್ರಕ್ರಿಯೆಗಾಗಿ ಮತ್ತು ಖನಿಜ ಅನ್ವೇಷಣೆಯಲ್ಲಿ ಸಂಗ್ರಹಿಸಲಾಗುವ ಖನಿಜ ಮಾದರಿಗಳಿಗೆ ವಿಶ್ಲೇಷಣೆ ಕೈಗೊಂಡು ಶೇಕಡಾ ಖನಿಜಾಂಶದ ವರದಿಯನ್ನು ನೀಡಲಾಗುತ್ತಿದೆ. ಇದುವರೆವಿಗೂ ಪ್ರಯೋಗಾಲಯದಲ್ಲಿ ಸಾಂಪ್ರದಾಯಿಕ ವಿಧಾನಗಳಲ್ಲಿ ವಿಶ್ಲೇಷಣೆ ಕೈಗೊಂಡು ವರದಿಗಳನ್ನು ನೀಡಲಾಗುತ್ತಿತ್ತು. ಶೇಕಡಾ ಖನಿಜಾಂಶದ ಆಧಾರದ ಮೇಲೆ ರಾಜಧನ ನಿರ್ಧರಿಸಲಾಗುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ರಾಸಾಯನಿಕ ಮತ್ತು ಲೋಹಶಾಸ್ತ್ರ ಪ್ರಯೋಗಾಲಯಗಳ ನವೀಕರಣಕ್ಕೆ ಸರ್ಕಾರದಿಂದ ₹2.26 ಲಕ್ಷ ಹಾಗೂ ಉಪಕರಣಗಳ ಖರೀದಿಗೆ ₹2 ಕೋಟಿಗೂ ಅಧಿಕ ಅನುದಾನ ಮೀಸಲಿಡಲಾಗಿದೆ. ಉತ್ತಮ ಅನ್ವೇಷಣೆಗಳು ಪ್ರಯೋಗಾಲಯದಿಂದ ಹೊರಬರಲಿ ಎಂದು ಸಚಿವರು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಿದರು.ಈ ಸಂದರ್ಭ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
- - -(ಕೋಟ್) ರಾಸಾಯನಿಕ ಪ್ರಯೋಗಾಲಯವನ್ನು ಗುಡ್ ಲ್ಯಾಬರೇಟರಿ ಪ್ರಾಕ್ಟೀಸಸ್ ಅನ್ವಯ ಆಧುನೀಕರಣಗೊಳಿಸಿ ಮೇಲ್ದರ್ಜೆಗೆ ಏರಿಸಲಾಗಿದೆ ಮತ್ತು ಅತ್ಯಂತ ಸೂಕ್ಷ್ಮ ಉಪಕರಣ ಮತ್ತು ಯಂತ್ರಗಳನ್ನು ಎನ್.ಎಂ.ಇ.ಟಿ. ಅನುದಾನದಡಿ ಖರೀದಿಸಿ ಪ್ರತಿಷ್ಠಾಪನೆಗೊಳಿಸಲಾಗಿದೆ. ಇದರಿಂದ ಇಲಾಖೆಯ ಖನಿಜಾನ್ವೇಷಣೆಯಲ್ಲಿ ಸಂಗ್ರಹಿಸಲಾಗುವ ವಿರಳ ಧಾತುಗಳು ಮಹತ್ವ ಪೂರ್ಣ ಮಾದರಿಗಳಿಂದ ಕಡಿಮೆ ಖನಿಜಾಂಶವನ್ನು ವಿಶ್ಲೇಷಣೆಗೊಳಿಸಬಹುದು.
- ಎಸ್.ಎಸ್.ಮಲ್ಲಿಕಾರ್ಜುನ, ಗಣಿ-ಭೂ ವಿಜ್ಞಾನ ಸಚಿವ- - -
-12ಕೆಡಿವಿಜಿ36, 37.ಜೆಪಿಜಿ:ಬೆಂಗಳೂರಿನಲ್ಲಿ ಇತ್ತೀಚೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಸಾಯನಿಕ ಪ್ರಯೋಗಾಲಯವನ್ನು ಗಣಿ ಸಚಿವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಿದರು.