ವಾಲ್ಮೀಕಿ ಭವನ ಮುಕ್ಕಾಗಲಿದೆ । ರೆಡ್ಡಿ ಹಾಸ್ಟೆಲ್ ಕಟ್ಟಡ, ಸ್ವಸಹಾಯ ಸಂಘಗಳ ಮಳಿಗೆಗಳು ನೆಲಸಮ । ಲಕ್ಷ್ಮಿಬಜಾರ್ ಮಾತ್ರ ಉಳಿಯುತ್ತೆ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗನಗರದ ಪ್ರಮುಖ ರಸ್ತೆ ಅಗಲೀಕರಣದ ಪ್ರಸ್ತಾಪಗಳು ನಿಧಾನವಾಗಿ ಕೋಟೆ ನಾಡಲ್ಲಿ ಮಾರ್ದನಿಸುತ್ತಿದ್ದು ಹಾಗೊಂದು ವೇಳೆ ಅಗಲೀಕರಣವಾದಲ್ಲಿ ಏನಿರುತ್ತೆ, ಏನೇನೆಲ್ಲ ಹೋಗುತ್ತೆ ಎಂಬ ಲೆಕ್ಕಾಚಾರಗಳು ಬಾಯಿಂದ ಬಾಯಿಗೆ ಹರಿದಾಡುತ್ತಿವೆ. ಹೋಟೆಲ್, ಬಾರ್, ಕ್ಲಬ್ ಗಳಲ್ಲಿ ಎಲ್ಲಿ ಹೋದರೂ ಇವೇ ಮಾತುಗಳೇ ಕೇಳಿ ಬರುತ್ತಿವೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಅಂದಾಜಿಸಿದ ಪ್ರಕಾರ ರಸ್ತೆ ಮಧ್ಯ ಭಾಗದಿಂದ ಎರಡೂ ಕಡೆ 21 ಮೀಟರ್ ರಸ್ತೆ ಅಗಲ ಮಾಡಲಾಗುತ್ತದೆ. ಚಳ್ಳಕೆರೆ ಟೋಲ್ ಗೇಟ್ ನಿಂದ ಗಾಂಧಿ ವೃತ್ತದ ಮಾರ್ಗವಾಗಿ ಕನಕ ಸರ್ಕಲ್ ವರೆಗೆ ಸದ್ಯಕ್ಕೆ ಅಗಲೀಕರಣ ಪ್ರಕ್ರಿಯೆ ಪ್ರಸ್ತಾಪಗಳಿವೆ. ಸರಿ ಸುಮಾರು ಎರಡುವರೆ ಕಿಮೀ ಉದ್ದ ಈ ಹಾದಿಯಲ್ಲಿ ಸರ್ಕಾರಿ, ಖಾಸಗಿ ಕಟ್ಟಡಗಳು , ದೇವಸ್ಥಾನ, ಆಸ್ಪತ್ರೆ, ಹೋಟೆಲ್, ಮಸೀದಿಗಳು ಬರುತ್ತವೆ. ಎರಡು ವರ್ಷಗಳ ಹಿಂದೆ ನಡೆದ ಅಗಲೀಕರಣ ಪ್ರಕ್ರಿಯೆಯಲ್ಲಿ ಮುಕ್ಕಾದ ಕಟ್ಟಡಗಳು ಈಗ ಮತ್ತಷ್ಟು ಅಂದ ಕೆಡಿಸಿಕೊಳ್ಳಲಿವೆ.ಪಂಚಾಚಾರ್ಯ ಕಲ್ಯಾಣ ಮಂಟಪ ಮತ್ತಷ್ಟು ಕಿರಿದಾಗಲಿದೆ, ಎಲ್ಐಸಿ ಕಟ್ಟಡ, ಡಿಎಚ್ಒ ಆಫೀಸ್ ಮುಕ್ಕಾಗಲಿವೆ. ಇಲ್ಲಿಯೇ ಇರುವ ಎರಡು ಪೆಟ್ರೋಲ್ ಬಂಕುಗಳು ಉಳಿಯುತ್ತವೆ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಬಾರ್ ಲೈನ್ ಕಾಂಪೌಂಡ್ ಮತ್ತಷ್ಟು ಕುಗ್ಗಲಿದೆ. ಇದರ ಪಕ್ಕದಲ್ಲಿಯೇ ಇರುವ ಮಸೀದಿ 21 ಮೀಟರ್ ವ್ಯಾಪ್ತಿಯ ಒಳಗಡೆ ಬರಲಿದೆ. ಉದ್ಘಾಟನೆಯಾಗಿ ಬಳಕೆಯಾಗದೇ ಬಾಗಿಲು ಹಾಕಿಕೊಂಡಿರುವ ವಾಲ್ಮೀಕಿ ಭವನದ ಮುಂಭಾಗವ ಜೆಸಿಬಿ ಯಂತ್ರಗಳು ಸವರಲೇ ಬೇಕಿದೆ. ದೀಪಕ್ ಬುಕ್ ಹೌಸ್ ಕಟ್ಟಡ, ಪಕ್ಕದಲ್ಲಿಯೇ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ನರ್ಸಿಂಗ್ ಹೋಂ ಬಿಲ್ಡಿಂಗ್ ಕೂಡಾ ರಸ್ತೆಗಾಗಿ ಜಾಗ ಬಿಟ್ಟುಕೊಡಲು ತಮ್ಮ ಅಸ್ಥಿತ್ವ ಕಳೆದುಕೊಳ್ಳಬೇಕಾಗಿದೆ.
ತರಾಸು ರಂಗಮಂದಿರದ ಕಾಂಪೌಡ್ ಇಲ್ಲವಾಗುತ್ತದೆ. ಮೂರು ತಿಂಗಳ ಹಿಂದೆಯಷ್ಟೇ ನಿರ್ಮಾಣವಾದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೌಂಪೌಂಡ್, ಶೌಚಾಲಯಗಳು ಮತ್ತೆ ನೆಲಸಮವಾಗುವುದು ಖಚಿತ. ಸ್ಕೌಟ್ಸ್ ಅಂಡ್ ಗೈಡ್ಸ್ ನ ಕಟ್ಟಡದಲ್ಲಿರುವ ಅರಮನೆ ಸ್ವೀಟ್ಸ್, ಇದಲ್ಲದೇ ಇನ್ನೂ ಉದ್ಘಾಟನೆಯಾಗದೇ ಇರುವ ಹೋಟೆಲ್ ಗಳಿಗೆ ಜೆಸಿಬಿ ಯಂತ್ರಗಳು ಮುತ್ತಿಕ್ಕಿ ಕೆಡವಲಿವೆ. ಒತ್ತುವರಿ ಕಾರ್ಯಾಚರಣೆಗೆ ಮುಂದಾಗಿರುವ ನಗರಸಭೆ ಕೂಡಾ ತನ್ನ ಕಾಂಪೌಂಡ್ ಕಳೆದುಕೊಳ್ಳಲಿದೆ. ಹೊಸದಾಗಿ ನಿರ್ಮಾಣಗೊಂಡ ನಗರ ಪೊಲೀಸ್ ಠಾಣೆ ಕಟ್ಟಡ, ಅದರ ಪಕ್ಕದಲ್ಲಿಯೇ ಇರುವ ಕಣಿವೆ ಮಾರಮ್ಮ ದೇವಸ್ಥಾನ ಜಾಗ ಕಳೆದುಕೊಂಡು ಬೀದಿಗೆ ಬರಲಿವೆ.ನಿರ್ಮಾಣ ಹಂತದಲ್ಲಿರುವ ಮಹವೀರ ಸರ್ಕಲ್, ಸಮೀಪದಲ್ಲಿಯೇ ಇರುವ ನಗರಾಭಿವೃದ್ದಿ ಪ್ರಾಧಿಕಾರದಿಂದ ನಿರ್ಮಿಸಿದ ದುಬಾರಿ ವೆಚ್ಚದ ಬಸ್ ತಂಗುದಾಣ ನೆಲಸಮವಾಗಲಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ವ ಸಹಾಯ ಸಂಘಗಳ ಉತ್ನನ್ನ ಮಾರಾಟದ ಮಳಿಗೆಗಳು ಪೂರ್ಣಪ್ರಮಾಣದಲ್ಲಿ ನೆಲಸಮವಾಗಲಿವೆ. ರೆಡ್ಡಿ ಹಾಸ್ಟೆಲ್ ಬಿಲ್ಡಿಂಗ್ ವಾಣಿಜ್ಯ ಸಮುಚ್ಛಯ, ಕೆನರಾ ಬ್ಯಾಂಕ್, ಕಾವೇರಿ ಸ್ಟೋರ್ಸ್ಗಳು ಇಲ್ಲವಾಗುತ್ತವೆ. ದುರ್ಗದ ಜನರ ಬಾಯಿಗೆ ರುಚಿಯಾದ ತಿಂಡಿ ತಿನಿಸುಗಳ ಉಣಬಡಿಸಿದ ಕಾಂತಿ ಸ್ವೀಟ್ಸ್, ಕಟ್ಟಡಗಳು ಜೆಸಿಬಿ ಸದ್ದಿಗೆ ಕುಸಿದು ಬೀಳಲಿವೆ. ಲಕ್ಷ್ಮಿಬಜಾರ್ ಮಾತ್ರ ಉಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.
21 ಮೀಟರ್ ರಸ್ತೆ ಅಗಲೀಕರಣದಿಂದಾಗಿ ಉಪಾದ್ಯ ಹೋಟೆಲ್ ನಲ್ಲಿ ಅಡುಗೆ ಮನೆ ಹಾಗೂ ವಾಶ್ ರೂಂ ಮಾತ್ರ ಉಳಿಯುತ್ತದೆ. ನೀಲಕಂಠೇಶ್ವರ ದೇವಸ್ಥಾನದಲ್ಲಿ ಈಶ್ವರನ ಮೂರ್ತಿ ಪಕ್ಕಕ್ಕೆ ಸರಿಯಲಿದೆ. ಎದುರಾಗಬಹುದು. ಗೌರಸಂದ್ರ ಮಾರಮ್ಮ ದೇವಸ್ಥಾನವ ಬೇರೆಡೆಗೆ ಸ್ಥಳಾಂತರ ಮಾಡುವುದು ಅನಿವಾರ್ಯ. ರಸ್ತೆ ಅಗಲೀಕರಣ ನಿರ್ಧಾರದಿಂದ ಯಾವುದೇ ಕಾರಣದಿಂದ ಜಿಲ್ಲಾಡಳಿತ, ನಗರಸಭೆ ಹಿಂದೆ ಸರಿಯಬಾರದು. ಚಿತ್ರದುರ್ಗ ಕಿಷ್ಕಿಂದೆಯಂತಾಗಿದ್ದು ರಸ್ತೆ ಅಗಲೀಕರಣವಾದಲ್ಲಿ ನಗರದ ಸೌಂದರ್ಯ ಹೆಚ್ಚಾಗಲಿದೆ. ಸುಗಮ ಸಂಚಾರಕ್ಕೆ ಅನುವಾಗಲಿದೆ. ತಾಲೂಕು ಕೇಂದ್ರದ ರಸ್ತೆಗಳು ವಿಶಾಲವಾಗಿದ್ದು ಜಿಲ್ಲಾ ಕೇಂದ್ರದಲ್ಲಿ ಅಂತಹ ದೃಶ್ಯಗಳಿಲ್ಲ. ತೆರವು ಕಾರ್ಯಾಚರಣೆ ಒಮ್ಮೆಲೆ ಪೂರ್ಣಗೊಳಿಸಲಿ. ಪದೇ ಪದೆ ಕೈಗೆತ್ತಿಕೊಳ್ಳುವುದು ಬೇಡ.ಎಚ್.ಸಿ.ನಿರಂಜನ ಮೂರ್ತಿ, ಮಾಜಿ ಅಧ್ಯಕ್ಷ, ನಗರಸಭೆ ಚಿತ್ರದುರ್ಗ