ಕನ್ನಡಪ್ರಭ ವಾರ್ತೆ ಬೀದರ್
ಮನಸ್ಸಿನ ಮೇಲೆ ನಿಗ್ರಹವಿಟ್ಟುಕೊಂಡರೆ ದುಶ್ಚಟಗಳಿಂದ ದೂರ ಇರಲು ಸಾಧ್ಯ ಇಲ್ಲಿ ಸಂಕಲ್ಪ ಮಾಡಿದವರು ಜೀವನದುದ್ದಕ್ಕೂ ದುಶ್ಚಟಗಳಿಂದ ದೂರವಿದ್ದು, ಆದರ್ಶ ಜೀವನ ನಡೆಸಿ ತೋರಿಸಬೇಕು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಸ್ವಾಮೀಜಿ ಸಲಹೆ ನೀಡಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಜನಜಾಗೃತಿ ವೇದಿಕೆ ಇನ್ನಿತರೆ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ಪಾಪನಾಶ ಮಂದಿರ ಸಭಾ ಭವನದಲ್ಲಿ ಒಂದು ವಾರ ಹಮ್ಮಿಕೊಂಡ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮದ್ಯವರ್ಜನ ಶಿಬಿರದಲ್ಲಿ 50 ವ್ಯಸನಿಗಳು ಮದ್ಯ ಸೇವನೆ ತ್ಯಜಿಸಿ, ಹೊಸ ಬದುಕು ಕಟ್ಟಿಕೊಳ್ಳುವ ಸಂಕಲ್ಪ ಮಾಡಿದ್ದಾರೆ ಇದು ಒಳ್ಳೆಯ ಸಂಗತಿಯಾಗಿದೆ ಎಂದರು.ಧರ್ಮಸ್ಥಳ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿರೂಪಾಕ್ಷ ಗಾದಗಿ ಮಾತನಾಡಿ, ಸಮಾಜದ ಸಮಗ್ರ ವಿಕಾಸದ ಧ್ಯೇಯ ಹೊಂದಿ ಧರ್ಮಸ್ಥಳ ಸಂಸ್ಥೆ ಅನೇಕ ಚಟುವಟಿಕೆಗಳನ್ನು ನಡೆಸುತ್ತಿದೆ. ಡಾ.ವೀರೇಂದ್ರ ಹೆಗ್ಗಡೆ ಅವರ ಸಮಾಜ ಪರ ಕಾಳಜಿ, ದೂರದೃಷ್ಟಿತ್ವವು ಮಾದರಿಯಾಗಿದೆ.ಸಾಕಷ್ಟು ಶ್ರಮವಹಿಸಿ ಮದ್ಯವರ್ಜನ ಶಿಬಿರ ಯಶಸ್ವಿಯಾಗಿ ಸಂಘಟಿಸಿದ್ದು, ಅನೇಕ ಕುಟುಂಬಗಳಲ್ಲಿ ಖುಷಿ ತರುವ ಕೆಲಸ ಮಾಡಿರುವುದು ಅವಿಸ್ಮರಣೀಯವಾಗಿದೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಧರ್ಮಸ್ಥಳ ಸಂಸ್ಥೆಯಿಂದ ಬೀದರ್ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಮೂರು ಶಿಬಿರ ನಡೆಸಿ ಇನ್ನೂರಕ್ಕೂ ಹೆಚ್ಚು ಮಂದಿಗೆ ಮದ್ಯ ಸೇವೆನೆ ಬಿಡಿಸಲಾಗಿದೆ. ಈವರೆಗೆ ರಾಜ್ಯದಲ್ಲಿ 1875 ಮದ್ಯವರ್ಜನ ಶಿಬಿರಗಳು ನಡೆದಿದ್ದು, ಒಂದೂವರೆ ಲಕ್ಷಕ್ಕೂ ಅಧಿಕ ವ್ಯಸನಿಗಳು ಮದ್ಯ, ದುಶ್ಚಟ ತ್ಯಜಿಸಿ ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ವಿವರ ನೀಡಿದರು.ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಅನೇಕ ಕುಟುಂಬಗಳಿಗೆ ಬೀದಿಗೆ ತಳ್ಳುವ ಜೊತೆಗೆ ಸ್ವಸ್ಥ ಸಮಾಜಕ್ಕೆ ಬಹುದೊಡ್ಡ ಪಿಡುಗಾಗಿ ಪರಿಣಮಿಸಿದ ಮದ್ಯ ಮಾರಾಟದ ಮೇಲೆ ಸರ್ಕಾರ ನಿಷೇಧ ಹೇರಬೇಕು. ಹಣ ಬರುತ್ತದೆ ಎಂಬ ಕಾರಣದಿಂದ ಅದೆಷ್ಟೋ ಕುಟುಂಬಗಳನ್ನು ಬೀದಿಗೆ ತಳ್ಳಿದರೆ ಇದಕ್ಕೆ ಉತ್ತಮ ಆಡಳಿತ ನೀಡುವ ಸರ್ಕಾರ ಎಂದು ಹೇಳಲಾಗದು ಎಂದರು.ಶಿಬಿರದ ಸಮಾರೋಪದಲ್ಲಿ ಗಾಂಧಿ ಸ್ಮೃತಿ ಹಾಗೂ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ನಡೆಯಿತು. ಕೊನೆಯ ದಿನದಂದು ಶಿಬಿರಾರ್ಥಿಗಳ ಪತ್ನಿ, ಮಕ್ಕಳಿಗೂ ಕರೆಯಿಸಲಾಗಿತ್ತು. ನಿತ್ಯವೂ ಕುಡಿದು ಕಿರಿಕಿರಿ ನೀಡುತ್ತಿದ್ದವರು ಬಿಳಿ ಅಂಗಿ, ಬಳಿ ಪಂಚೆ, ಗಾಂಧಿ ಟೊಪ್ಪಿಗೆ ಹಾಕಿ ಶಿಸ್ತಿನಿಂದ ಕುಳಿತಿದ್ದು ನೋಡಿ ಖುಷಿಪಟ್ಟರು. ನಾವು ಮದ್ಯ ಸೇವನೆ ಮಾಡಲ್ಲ.
ಕುಟುಂಬದವರ ಜೊತೆಗೆ ಚೆನ್ನಾಗಿರುತ್ತವೆ. ನಮ್ಮ ಪರಿವಾರದ ಹಿತ, ಸುಖವೇ ನಮಗೆಲ್ಲ ಮುಖ್ಯ ಎನ್ನುವ ಸಂಕಲ್ಪ ಮಾಡಿದಾಗ ಕುಟುಂಬದ ಮಹಿಳೆಯರಿಂದ ಆನಂದಭಾಷ್ಪ ಸುರಿದವು. ಶಿಬಿರದ ಮೂಲಕ ಬೀದಿಗೆ ಬಿದ್ದ ಕುಟುಂಬದಲ್ಲಿ ನೆಮ್ಮದಿಯನ್ನು ಮೂಡಿಸುವಂಥ ಮಹತ್ಕಾರ್ಯ ಮಾಡಿದ ಧರ್ಮಸ್ಥಳ ಸಂಸ್ಥೆಗೆ ಸಭಿಕರೂ ಕೃತಜ್ಞತೆ ಸಲ್ಲಿಸಿದರು.ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಮಂಗಲಾ ಭಾಗವತ್, ಶಿವು ಲೋಖಂಡೆ, ಶ್ರೀನಿವಾಸ ರೆಡ್ಡಿ, ಯೋಗೇಂದ್ರ ಯದಲಾಪುರೆ, ಗುರುನಾಥ ರಾಜಗೀರಾ, ಭಾಸ್ಕರ್, ರಾಜೇಶ್ ಇತರರಿದ್ದರು.----