ಕನ್ನಡಪ್ರಭ ವಾರ್ತೆ ಮೈಸೂರು
ನಾಲ್ಕು ದಶಕಗಳ ಕಾಲ ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆಗೆ ಇಳಿದಿರುವ ಬಿಜೆಪಿ- ಜೆಡಿಎಸ್ ಪಕ್ಷಗಳ ಕಾರ್ಯಚಟುವಟಿಕೆ ಖಂಡಿಸಿ ನವೆಂಬರ್ ತಿಂಗಳಿನಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾದದಲ್ಲಿ `ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ ನಡೆಸಲು ವಿವಿಧ ಪ್ರಗತಿಪರ ಸಂಘಟನೆಗಳು ನಿರ್ಧರಿಸಿವೆ.ನಗರದ ಯಾದವ(ಗೊಲ್ಲ) ಸಮುದಾಯ ಭವನದಲ್ಲಿ ಭಾನುವಾರ ನಡೆದ ಮೈಸೂರು, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಅಹಿಂದ ಮತ್ತು ಶೋಷಿತ ವರ್ಗಗಳ ನಾಯಕರು ಭಾಗವಹಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮೇಲಿನಂತೆ ಒಂದಂಶದ ನಿರ್ಣಯ ಕೈಗೊಳ್ಳಲಾಯಿತು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಮಾಣಿಕತೆಗೆ ಹೆಸರಾದ ಸಿದ್ದರಾಮಯ್ಯ ಅವರ ವಿರುದ್ಧ ವಿಪಕ್ಷಗಳು ಷಡ್ಯಂತ್ರ ನಡೆಸಿ, ಮುಡಾ ಹಗರಣದ ನೆಪದಲ್ಲಿ ಮಸಿ ಬಳಿಯಲು ಯತ್ನಿಸುತ್ತಿವೆ. ಈ ನಾಡಿನ ಶೋಷಿತರು, ಅಲ್ಪಸಂಖ್ಯಾತ, ಹಿಂದುಳಿದ, ದಲಿತರು ಹಾಗೂ ಎಲ್ಲಾ ವರ್ಗಗಳ ಬಡವರ ಪರ ನಿಲುವು ತಳೆಯುತ್ತಿರುವುದನ್ನು ಸಹಿಸದ ವಿಪಕ್ಷಗಳ ಪಿತೂರಿಗೆ ನಾಡಿನ ಜನತೆ ಮನ್ನಣೆ ನೀಡಬಾರದು ಎಂದು ಮನವಿ ಮಾಡಿದರು.ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ ನಡೆಸಲು ನಿರ್ಧರಿಸಿದ್ದೇವೆ. ನಾಡಿನ ಪ್ರಜ್ಞಾವಂತ ಜನತೆ ಭಾಗವಹಿಸಿ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಬೇಕು ಎಂದು ಅವರು ಕೋರಿದರು.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, ಕೇರಳದ ವಯನಾಡಿನಲ್ಲಿ ಪ್ರಿಯಾಂಕ ಗಾಂಧಿಯವರು ನಾಮಪತ್ರ ಸಲ್ಲಿಸುವ ವೇಳೆ ಸಿದ್ದರಾಮಯ್ಯ ಅವರಿಗೆ ಸಿಕ್ಕ ಬಹುಪರಾಕ್ ನಾಡಿನ ಆತ್ಮಸಾಕ್ಷಿಯಂತೆ ಕಂಡಿತು. ಇಂತಹ ನಾಯಕನನ್ನು ಅರಿಯುವಲ್ಲಿ ನಾಡಿನ ಜನತೆ ಎಡವಿದ್ದಾರೆ. ಆದರೂ ಶೋಷಿತರು, ಅಹಿಂದ ವರ್ಗ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳಲು ಹಿಂದೆ ಬಿದ್ದಿರುವುದು ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲದ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚಿಸಿ, ಲಕ್ಷ ಲಕ್ಷ ಜನರು ಸಮಾವೇಶದಲ್ಲಿ ಭಾಗಿಯಾಗಿಸಲು ಚರ್ಚಿಸುತ್ತೇವೆ. ಎರಡನೇ ಸಿದ್ದರಾಮೋತ್ಸವದಂತೆ ಈ ಸಮಾವೇಶ ನಡೆಸಬೇಕಿದೆ ಎಂದು ಕರೆ ನೀಡಿದರು.
ಇದೇ ವೇಳೆ ಕರ್ನಾಟಕ ವಕೀಲರ ಜಾಗೃತ ವೇದಿಕೆ ಪ್ರಕಟಿಸಿರುವ ಮುಡಾ ಪ್ರಕರಣ: ಸತ್ಯಾಸತ್ಯತೆ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.ಜಿಪಂ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಸುಧಾ ಮಹದೇವಯ್ಯ, ಮಾದೇಗೌಡ, ನಾಯಕ ಮುಖಂಡ ದ್ಯಾವಪ್ಪನಾಯಕ, ರಾಜೇಶ್ವರಿ, ಭೋವಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮ್, ದಲಿತ ಮುಖಂಡ ವಿ. ರಾಮಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಡಿ. ನಾಗಭೂಷಣ್, ಮಂಡ್ಯ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಮೈಸೂರು ಜಿಲ್ಲಾಧ್ಯಕ್ಷ ಶಿವಪ್ಪ ಕೋಟೆ, ಕೋಟೆ ತಾಲೂಕು ಕುರುಬ ಸಂಘದ ಅಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಪಿರಿಯಾಪಟ್ಟಣ ಸುನಿಲ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಜಟ್ಟಿಹುಂಡಿ ಬಸವರಾಜ್, ಮುಖಂಡರಾದ ಕುರಿಹುಂಡಿ ರಾಜು, ರಾಜೇಶ್, ಮಾದೇವ್, ಪುನೀತ್, ಶಿವಕುಮಾರ್, ಲೋಕೇಶ್, ಸಿ.ಆರ್. ರಾಮೇಗೌಡ, ಪುಟ್ಟನಾಯಕ, ಅಶೋಕ್, ಬಸಪ್ಪ, ಪುಟ್ಟಸಿದ್ದೇಗೌಡ, ವಿಜಯಕುಮಾರ್, ಪುಟ್ಟಮಲ್ಲಯ್ಯ, ಉದಯ್ ಕುಮಾರ್, ಬಸವಣ್ಣ, ಮಧು, ಮಹದೇವ, ಕಮಲಾ, ಶಾಂತಾ, ರಾಜೀವ್, ಪುಟ್ನಂಜ, ರವಿ, ಹೇಮಲತಾ, ಭಾಗ್ಯಮ್ಮ, ಕುಮಾರ್, ಮಾದೇಗೌಡ, ಮಂಜು, ಪುಟ್ಟಯ್ಯ ಮೊದಲಾದವರು ಇದ್ದರು.
-----ಬಾಕ್ಸ್...
ನಾವು ಈ ಮೊದಲು ಸಿದ್ದರಾಮಯ್ಯ ಅವರ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದೇವು. ಈಗ ಅವರ ವ್ಯಕ್ತಿತ್ವ ನೋಡಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇವೆ. ಅವರ ವಿರುದ್ಧ ನಡೆಯುತ್ತಿರುವ ಪಿತೂರಿಯನ್ನು ಹಣಿಯಬೇಕಿದೆ. ಯಾವುದೇ ಒಂದು ಜಾತಿಯಿಂದ ರಾಜಕಾರಣ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸರ್ವಜನಾಂಗದ ನಾಯಕ.- ಎಸ್. ಮಾದೇಗೌಡ, ಜಿಪಂ ಮಾಜಿ ಸದಸ್ಯ