ಬೀದರ್: ಪರಿಶಿಷ್ಟರ ಮೀಸಲು ನಿಯಮಾವಳಿಗಳಂತೆ ಕಲಂ 371 (ಜೆ) ಅಡಿಯಲ್ಲಿ ನೇಮಕಾತಿ, ಮುಂಬಡ್ತಿಯ ಮೀಸಲಿಗೆ ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದ್ದರೂ ಸರ್ಕಾರದ ಅಡ್ವೋಕೇಟ್ ಜನರಲ್ ನಿರಾಸಕ್ತಿ ನಮ್ಮನ್ನು ಮತ್ತೇ ಹಿಂದಿಕ್ಕಿದೆ, ಸರ್ಕಾರ ಹೀಗೇ ನಿರ್ಲಕ್ಷಿಸುತ್ತ ಸಾಗಿದರೆ ಪ್ರತ್ಯೇಕ ರಾಜ್ಯದ ಕೂಗು ಮತ್ತೊಮ್ಮೆ ಭುಗಿಲೇಳುವುದರಲ್ಲಿ ಅನುಮಾನವಿಲ್ಲ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಎಚ್ಚರಿಸಿದರು.
ಪ್ರತ್ಯೇಕ ರಾಜ್ಯ ಬೇಡ, ನಾವೆಲ್ಲ ಒಂದಾಗಲು ಹಿರಿಯರು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದೆನ್ನುವ ಸಿಎಂ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನು ಮಾಡಿದ್ದಾರೆ. ನೇಮಕಾತಿ, ಮುಂಬಡ್ತಿಗೆ ಪದೇ ಪದೇ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗುತ್ತಿದೆ, ಈ ಕುರಿತು ಅಡ್ವೋಕೇಟ್ ಜನರಲ್ಗೆ ಏಕೆ ಪ್ರಶ್ನಿಸುತ್ತಿಲ್ಲ. ಕೆಪಿಎಸ್ಸಿಗೆ ಸೂಕ್ತ ನೇಮಕಾತಿ ನಿಯಮಾವಳಿ ರಚಿಸಲು ಸೂಚಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ಅಡ್ವೋಕೇಟ್ ಜನರಲ್ ಬೆಂಗಳೂರಿಗರು ಅವರಿಗೆ ಹೊಟ್ಟೆಕಿಚ್ಚು:ರಾಜ್ಯದ ಅಡ್ವೋಕೇಟ್ ಜನರಲ್ ಬೆಂಗಳೂರಿಗರು ಅವರಿಗೆ ಕಲ್ಯಾಣ ಕರ್ನಾಟಕ ಭಾಗದ ಜನರೆಂದರೆ ಹೊಟ್ಟೆ ಕಿಚ್ಚು, ಕಲಂ 371ಜೆ ಅಡಿಯಲ್ಲಿ ನೇಮಕಾತಿಗಳ ಕುರಿತಾಗಿ ನ್ಯಾಯಾಲಯಗಳಲ್ಲಿ ವಾದ ಮಂಡಿಸುವಲ್ಲಿ ಸಂಪೂರ್ಣ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸಂವಿಧಾನಕ್ಕೆ ತಿದ್ದುಪಡಿ ತಂದು ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿರುವ ಕಲಂ 371 (ಜೆ) ಜಾರಿಯಲ್ಲಿ ಸರ್ಕಾರದಿಂದಾಗುವ ಲೋಪಗಳು ಬೆಂಗಳೂರಿಗರು ನ್ಯಾಯಾಲಯಕ್ಕೆ ಮೊರೆ ಹೋಗಿ ನೇಮಕಾತಿಗಳಿಗೆ ತಡೆ ತರುವದಕ್ಕೆ ಅನುಕೂಲ ಮಾಡಿಕೊಟ್ಟಂತಿವೆ. ಕಳೆದ 10 ವರ್ಷಗಳಲ್ಲಿ ಅನೇಕ ನೇಮಕಾತಿಗಳ ವಿಷಯವಾಗಿ ನ್ಯಾಯಾಲಯದ ತಡೆಯಾಜ್ಞೆ ತರಲಾಗಿದ್ದು ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಹೀಗೆಯೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಕ್ಕಿರುವ ಸಂವಿಧಾನಾತ್ಮಕ ಹಕ್ಕನ್ನೂ ನೀಡುವಲ್ಲಿ ಸರ್ಕಾರ ನಿರ್ಲಕ್ಷವಹಿಸಿದರೆ ಈ ಭಾಗದ ಜನ ಸುಮ್ಮನೇ ಕೂರಲ್ಲ. ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದಂತೆ ನೇಮಕಾತಿ, ಮುಂಬಡ್ತಿಗಳ ಅಧಿಸೂಚನೆ ಹೊರಡಿಸುವತ್ತ ನಿಜ ಕಾಳಜಿಯನ್ನು ಮೆರೆಯಬೇಕು ಇಲ್ಲವಾದಲ್ಲಿ ನಾವು ಪ್ರತ್ಯೇಕ ರಾಜ್ಯದ ಕೂಗೆತ್ತುವಲ್ಲಿ ಸಂದೇಹವಿಲ್ಲ ಎಂದು ಲಕ್ಷ್ಮಣ ದಸ್ತಿ ಎಚ್ಚರಿಸಿದ್ದಾರೆ.