ಕುಕನೂರು: ಧರ್ಮದ ಹಾದಿಯಲ್ಲಿ ಸಾಗಿದರೆ ಮನುಷ್ಯನಿಗೆ ಪುಣ್ಯದ ಫಲ ಲಭಿಸುತ್ತದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು. ತಾಲೂಕಿನ ಕುದರಿಮೋತಿ ಗ್ರಾಮದ ವಿಜಯಮಹಾಮತೇಶ್ವರ ಮೈಸೂರು ಸಂಸ್ಥಾನ ಮಠ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ಹಾಗೂ 21 ಜೋಡಿ ಸಾಮೂಹಿಕ ವಿವಾಹ, ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯನಿಗೆ ಜೀವನದಲ್ಲಿ ಒಳಿತು ಮತ್ತು ಕೆಟ್ಟದ್ದು ಎಂಬ ಫಲಗಳು ಸದಾ ಬೆನ್ನ ಹಿಂದೆ ಇರುತ್ತವೆ. ಕೆಟ್ಟತನದಿಂದ ಕೆಡಕಿನ ಫಲ ಹಾಗೂ ಒಳ್ಳೆಯ ಹಾದಿಯಿಂದ ಪುಣ್ಯದ ಫಲ ಸಿಗುತ್ತವೆ. ಮನುಷ್ಯ ಸದಾ ಸನ್ಮಾರ್ಗದ ಹಾದಿಯಲ್ಲಿ ಸಾಗಬೇಕು. ನವ ದಂಪತಿಗಳು ಬದುಕಿನುದ್ದಕ್ಕೂ ಹೊಂದಾಣಿಕೆಯಿಂದ ಬಾಳಬೇಕು. ಪ್ರತಿ ದಿನ ಖುಷಿಯಿಂದ ಬಾಳಬೇಕು. ಬಾಳಿನಲ್ಲಿ ನಲಿವಿನ ಕ್ಷಣಗಳೇ ನಿಜ ಸಂಪತ್ತು ಎಂದರು.
ಜಿಪಂ ಮಾಜಿ ಸದಸ್ಯ ಅಶೋಕ ತೋಟದ ಮಾತನಾಡಿ, ಕುದರಿಮೋತಿ ಗ್ರಾಮ ಭಾವೈಕ್ಯತೆಗೆ ಹೆಸರುವಾಸಿ. ಇಲ್ಲಿ ಜರುಗುವ ಜಾತ್ರೆ ಹಾಗೂ ಅಲಾಯಿ ಹಬ್ಬಗಳು ನಾಡಿಗೆ ಹೆಸರುವಾಸಿಯಾಗಿವೆ. ಮನುಷ್ಯ ಸದಾ ದಾನ ಹಾಗೂ ಧರ್ಮದ ಕಾರ್ಯದಲ್ಲಿ ನಿರತರಾಗಿರಬೇಕು ಎಂದರು.
ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ಸಾಮೂಹಿಕ ವಿವಾಹದಿಂದ ದಂಪತಿಗೆ ಇಡೀ ಸಮಾಜದ ಆಶೀರ್ವಾದ ಸಿಗುತ್ತದೆ. ಆರ್ಥಿಕ ಹೊರೆಯಾಗದಂತೆ ಬದುಕು ಸಾಗಿಸಬೇಕು. ದಂಪತಿ ತಾಳ್ಮೆಯಿಂದ ಕುಟುಂಬ ವರ್ಗದವರನ್ನು ನಮ್ಮವರೆಂದು ಅಪ್ಪಿಕೊಂಡು ಬಾಳಬೇಕು ಎಂದರು.ಕುದರಿಮೋತಿಯ ಶ್ರೀ ವಿಜಯ ಮಹಾಂತ ಸ್ವಾಮೀಜಿ ಮಾತನಾಡಿ, ಕುದರಿಮೋತಿ ಗ್ರಾಮಸ್ಥರ ಸತತ ಶ್ರಮ ಹಾಗೂ ಭಕ್ತಿಯ ಶಕ್ತಿಯಿಂದ ಜಾತ್ರೆ ವೈಭವವಾಗಿ ಜರುಗುತ್ತಿದೆ. ನವ ಜೋಡಿಗಳು ನಲಿ ನಲಿಯುತ್ತಾ ಇರಬೇಕು. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತು ಮರೆಯಬಾರದು. ಜಾತ್ರೆಯಿಂದ ಕುಟುಂಬ ವರ್ಗದವರು ಸೇರಿಕೊಂಡು ಕೂಡಿ ನಲಿವ ಕ್ಷಣ ಸಿಗುತ್ತದೆ ಎಂದರು.
ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯರು, ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ, ರಾಜೂರಿನ ಶ್ರೀ ಅಭಿನವ ಪಂಚಾಕ್ಷರ ಸ್ವಾಮೀಜಿ, ಮುಸ್ಲಿಂ ಧರ್ಮ ಗುರು, ಗ್ರಾಪಂ ಅಧ್ಯಕ್ಷೆ ಫರೀದಾ ಬೇಗಂ, ಅಭಿವೃದ್ಧಿ ಅಧಿಕಾರಿ ಪರಶುರಾಮ ನಾಯಕ, ಕುದರಿಮೋತಿ ದಳಪತಿ ಹನುಮಗೌಡ ಪೊಲೀಸ್ಪಾಟೀಲ್, ಪ್ರಮುಖರಾದ ಮಲ್ಲನಗೌಡ್ರು ಕೋನನಗೌಡ್ರು, ಮಂಜುನಾಥ ಗಟ್ಟೆಪ್ಪನವರ್, ಅಮರೇಶ ತಲ್ಲೂರು, ಆಶೋಕ ಗಟ್ಟೆಪ್ಪನವರ್, ಬಸಪ್ಪ ದೊಡ್ಮನಿ, ಶಿವಶಂಕರ್ ದೇಸಾಯಿ, ಬಸಪ್ಪ ದೊಡ್ಮನಿ, ಈರಪ್ಪ ರಾವಣಕಿ, ಬಸವರಾಜ ಹನುಮನಹಟ್ಟಿ, ಸುಭಾಸಪ್ಪ ಈಳಿಗೇರ್, ಮರಿಯಪ್ಪ ಕುರಿಗಾರ, ದುರ್ಗಪ್ಪ ಕಾಳೆ, ಡಾ. ಹುಸೇನ್ ಬಾಷಾ ಮಕಾಂದಾರ, ಮಾಬು ಸಾಬ್ ಮಕಾಂದಾರ್, ರಾಮರಾವ್ ಕುಲಕರ್ಣಿ, ಮದಕಯ್ಯ ಜಂಗಮರ್, ವಿಜಯಕುಮಾರ್ ದಾಸರ, ಬಾಳಪ್ಪ ಭಜಂತ್ರಿ, ಬಸಯ್ಯ ಒಣಗೇರಿ, ಶರಣಪ್ಪ ಉಚ್ಚಲಕುಂಟಾ, ದುರ್ಗಪ್ಪ ದೂಪಂ, ಸುರೇಶ ಚೌಡ್ಕಿ ಇತರರು ಇದ್ದರು.ಮಹಾ ರಥೋತ್ಸವ...
ಕುದರಿಮೋತಿ ಗ್ರಾಮದಲ್ಲಿ ಸೋಮವಾರ ಸಂಜೆ ಅಪಾರ ಭಕ್ತ ಸಮೂಹ ಮಧ್ಯೆ ಮಹಾ ರಥೋತ್ಸವ ಜರುಗಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಉತ್ತತ್ತಿ, ಬಾಳೆ ಹಣ್ಣು ಸಮರ್ಪಿಸಿ ಭಕ್ತಿ ಮೆರೆದರು. ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿದವು. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು.