ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ವಡಗೇರಾ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಯೊಬ್ಬರು ಕೈಗೊಂಡ 1 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ನೀಡಿದರೆ 1 ಕೆ.ಜಿ. ಸಕ್ಕರೆ ನೀಡುವ ಅಭಿಯಾನ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.
ವಡಗೇರಾ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ವಡಗೇರಾ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಯೊಬ್ಬರು ಕೈಗೊಂಡ 1 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ನೀಡಿದರೆ 1 ಕೆ.ಜಿ. ಸಕ್ಕರೆ ನೀಡುವ ಅಭಿಯಾನ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.
ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ತಡಿಬಿಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೋವಿಂದ ರಾಠೋಡ್ ಈ ಅಭಿಯಾನ ನಡೆಸುತ್ತಿದ್ದು, ಪ್ಲಾಸ್ಟಿಕ್ ಮುಕ್ತ ಗ್ರಾಮ ನಿರ್ಮಾಣದ ಗುರಿ ಹೊಂದಿದ್ದಾರೆ. ಈ ಕಾರ್ಯಕ್ಕಾಗಿ ಗ್ರಾಪಂ ಕಚೇರಿಯಲ್ಲಿ ₹3,900 ನೀಡಿ 1 ಕ್ವಿಂಟಲ್ ಸಕ್ಕರೆ ದಾಸ್ತಾನು ಮಾಡಿದ್ದಾರೆ. ಅಲ್ಲದೆ, ಪ್ಲಾಸ್ಟಿಕ್ ವಸ್ತುಗಳನ್ನು ನೀಡಿ ಪ್ರತಿಯಾಗಿ ಸಕ್ಕರೆ ತೆಗೆದುಕೊಂಡು ಹೋಗುವಂತೆ ಪ್ರಚಾರವನ್ನೂ ಮಾಡಿಸಿದ್ದಾರೆ.
ಕಳೆದೊಂದು ವಾರದಲ್ಲಿ 30 ಕೆ.ಜಿ.ಗೂ ಅಧಿಕ ತ್ಯಾಜ್ಯ ಸಂಗ್ರಹವಾಗಿದ್ದು, ಪ್ಲಾಸ್ಟಿಕ್ ಅನ್ನು ತ್ಯಾಜ್ಯ ಸಂಗ್ರಹಕಾರರಿಗೆ ಪ್ರತಿ ಕೆ.ಜಿ.ಗೆ ₹15-25 ರಂತೆ ಮರು ಮಾರಾಟ ಮಾಡಲಾಗುತ್ತದೆ. ಬಂದ ಹಣದಲ್ಲಿ ಮತ್ತೆ ಸಕ್ಕರೆ ಖರೀದಿಸಲಾಗುತ್ತದೆ. ಹಣ ಕಡಮೆ ಬಿದ್ದರೆ ಪಂಚಾಯಿತಿಯಿಂದ ಹಣ ಹೊಂದಿಸಲಾಗುವುದು. ಮುಂದಿನ ದಿನಗಳಲ್ಲಿ 17 ಗ್ರಾಪಂಗಳಲ್ಲಿ ಈ ಪ್ರಯೋಗ ನಡೆಸುವ ಉದ್ದೇಶವಿದೆ ಎಂದು ಗೋವಿಂದ್ ರಾಠೋಡ್ "ಕನ್ನಡಪ್ರಭ "ಕ್ಕೆ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.