ಕನ್ನಡಪ್ರಭ ವಾರ್ತೆ ಮಂಡ್ಯ
ಪಾಂಡವಪುರ ತಾಲೂಕು ಚಿನಕುರಳಿ ಮತ್ತು ಹೊನಗಾನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳ ಸಹಾಯದಿಂದ ೨೦೦೩-೦೪ನೇ ಸಾಲಿನಿಂದ ೨೦೧೭-೧೮ನೇ ಸಾಲಿನವರೆಗೆ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಸಾವಿರಾರು ಕೋಟಿ ರು. ಆರ್ಥಿಕ ನಷ್ಟ ಉಂಟುಮಾಡಿರುವುದಾಗಿ ಲೋಕಾಯುಕ್ತ ಡಿವೈಎಸ್ಪಿ ಅವರು ಅಧೀಕ್ಷಕರಿಗೆ ಸಲ್ಲಿಸಿರುವ ವರದಿಯಿಂದ ಬಹಿರಂಗಗೊಂಡಿದೆ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ತಿಳಿಸಿದರು.ಬೇಬಿ ಬೆಟ್ಟ ಸರ್ವೆ ನಂ.೧, ಚಿನಕುರಳಿ ಸರ್ವೆ ನಂ೮೦ ಮತ್ತು ಹೊನಗಾನಹಳ್ಳಿ ಸರ್ವೆ ನಂ.೨೧೭ರಲ್ಲಿ ಒಟ್ಟಾರೆ ೨೦೧೬ ಎಕರೆ ಸರ್ಕಾರಿ ಗೋಮಾಳ, ಅರಣ್ಯಪ್ರದೇಶವಿರುತ್ತದೆ. ಸರ್ವೆ ನಂ.೧ ಮತ್ತು ೧೨೭ರಲ್ಲಿನ ಜಮೀನನ್ನು ಅರಣ್ಯ ಪ್ರದೇಶಕ್ಕೆ ವರ್ಗಾಯಿಸಿರುವುದು ದಾಖಲೆಗಳ ಪರಿಶೀಲನೆಯಿಂದ ಕಂಡುಬಂದಿದೆ. ಆದರೂ ಕೆಲವು ಆಧಿಕಾರಿಗಳು ನಕಲು ದಾಖಲಾತಿಗಳನ್ನು ಸೃಷ್ಟಿಸಿ ಖಾತೆ ಮಾಡಿಸಿಕೊಂಡು ಅರಣ್ಯ ಪ್ರದೇಶ ಮತ್ತು ಅಮೃತ್ ಮಹಲ್ ಕಾವಲ್ನಲ್ಲಿ ಯಾವುದೇ ಪರವಾನಗಿ ಪಡೆಯದೆ, ಸರ್ಕಾರಕ್ಕೆ ರಾಜಧನ ಪಾವತಿಸದೆ ಕಲ್ಲುಗಣಿಗಾರಿಕೆ ನಡೆಸಿ ಸಾವಿರಾರು ಕೋಟಿ ರು. ಆರ್ಥಿಕ ನಷ್ಟ ಉಂಟು ಮಾಡಿರುವುದಾಗಿ ಜೂ.೧೪ರಂದು ಸಲ್ಲಿಸಿರುವ ವರದಿಯಲ್ಲಿ ದಾಖಲಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಧಿಕಾರ ದುರ್ಬಳಕೆ:ಮಂಡ್ಯ ಜಿಲ್ಲಾಧಿಕಾರಿಯಾಗಿದ್ದ ಪ್ರಸ್ತುತ ಮುಖ್ಯಮಂತ್ರಿ ಅಪರ ಕಾರ್ಯದರ್ಶಿಯಾಗಿರುವ ಎಸ್.ಜಿಯಾವುಲ್ಲಾ, ಅಪರ ಜಿಲ್ಲಾಧಿಕಾರಿಯಾಗಿದ್ದು ಈಗ ಹಾಸನ ಜಿಪಂ ಸಿಇಓ ಆಗಿರುವ ಬಿ.ಆರ್.ಪೂರ್ಣಿಮಾ, ಪಾಂಡವಪುರ ಉಪವಿಭಾಗಾಧಿಕಾರಿಯಾಗಿದ್ದು ಪ್ರಸ್ತುತ ರಾಮನಗರ ಅಪರ ಜಿಲ್ಲಾಧಿಕಾರಿಯಾಗಿರುವ ಬಿ.ಸಿ.ಶಿವಾನಂದಮೂರ್ತಿ, ಪಾಂಡವಪುರ ನಿವೃತ್ತ ತಹಸೀಲ್ದಾರ್ ಹನುಮಂತರಾಯಪ್ಪ, ಬೇಬಿ ವೃತ್ತದ ರಾಜಸ್ವ ನಿರೀಕ್ಷಕರಾಗಿದ್ದು ಈಗ ಬಸರಾಳು ನಾಡಕಚೇರಿ ಉಪ ತಹಸೀಲ್ದಾರ್ ಆಗಿರುವ ಬಿ.ಆರ್.ಗಣೇಶ್, ಬೇಬಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಎಂ.ಆರ್.ಕುಮಾರ, ತಾಲೂಕು ಮೋಜಿಣಿದಾರರಾಗಿದ್ದು ಮರಣಹೊಂದಿರುವ ರವಿಕುಮಾರ್, ಹಿರಿಯ ಭೂ ವಿಜ್ಞಾನಿಯಾಗಿದ್ದು ಈಗ ಮಂಗಳೂರಿನಲ್ಲಿ ಹಿರಿಯ ಭೂ ವಿಜ್ಞಾನಿಯಾಗಿರುವ ಕೆ.ಎಂ.ನಾಗಭೂಷಣ್, ಪಾಂಡವಪುರ ಭೂ ವಿಜ್ಞಾನಿ ನಾಗೇಶ್, ಹೊನಗಾನಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿದ್ದ ಪ್ರಭಾಮಣಿ, ಹೊನಗಾನಹಳ್ಳಿ ಗ್ರಾಪಂ ಪಿಡಿಒ ಆಗಿ ನಿವೃತ್ತರಾಗಿರುವ ಎಂ.ಪಿ.ರಾಜು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದ ಸೈಯದ್ ಜಾಫರ್ ಸೇರಿ ೧೩ ಅಧಿಕಾರಿಗಳು ಎಸಗಿರುವ ಅಧಿಕಾರ ದುರುಪಯೋಗ, ಕರ್ತವ್ಯ ಲೋಪವೆಸಗಿರುವುದನ್ನು ಬಿಡಿ ಬಿಡಿಯಾಗಿ ಉಲ್ಲೇಖಿಸಿದ್ದಾರೆ ಎಂದರು.
ಸುಳ್ಳು ದಾಖಲೆಗಳ ಸೃಷ್ಟಿ:ಈ ಅಧಿಕಾರಿಗಳು ೨೦೧೭-೧೮ನೇ ಸಾಲಿನಲ್ಲಿ ಚಿನಕುರಳಿ ಮತ್ತು ಹೊನಗಾನಹಳ್ಳಿ ವ್ಯಾಪ್ತಿಯ ಸರ್ಕಾರಿ ಖರಾಬು ಜಮೀನು ಮತ್ತು ಅರಣ್ಯ ಪ್ರದೇಶದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಭೂ ಪರಿವರ್ತನೆ ಮಾಡಿ ಕಲ್ಲು ಗಣಿಗಾರಿಕೆ ಮಾಡಲು ಅನುಮತಿ ನೀಡಿ ಸರ್ಕಾರಕ್ಕೆ ೨೫ ರಿಂದ ೩೦ ಕೋಟಿ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ದೂರಿರುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಎಸ್.ಜಿಯಾವುಲ್ಲಾ ಅವರು ಬೇಬಿಬೆಟ್ಟ ಕಾವಲು ಸರ್ವೆ ನಂ.೧ರಲ್ಲಿನ ೧೦೯೪ ಎಕರೆ ಜಮೀನು ಸರ್ಕಾರಿ ಬಿ-ಕರಾಬು ಎಂದು ಕಂದಾಯ ಇಲಾಖೆ ದಾಖಲೆಗಳಲ್ಲಿ ಅಧಿಕೃತವಾಗಿದ್ದರೂ ದಾಖಲೆಗಳನ್ನು ಪರಿಶೀಲಿಸದೆ ಸರ್ವೆ ನಂ.೧/೧೦೭ರ ೨-೧೦ ಎಕರೆ ಜಮೀನನ್ನು ಭೂ ಪರಿವರ್ತನೆ ಮಾಡಿದ್ದಾರೆ. ಭೂ ಪರಿವರ್ತನೆಗೆ ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ವರದಿ, ಶಿಫಾರಸನ್ನು ಪರಿಶೀಲಿಸದೆ ಅನುಮೋದನೆ ನೀಡಿರುವುದು ಕಂಡುಬಂದಿರುತ್ತದೆ ಎಂದು ದಾಖಲಿಸಿರುವುದಾಗಿ ಹೇಳಿದರು.ನಾಲ್ಕು ವರ್ಷಗಳ ಬಳಿಕ ಭೂಪರಿವರ್ತನೆ:
ಭೂ ಪರಿವರ್ತನೆಗೆ ಕೋರಿರುವ ಅರ್ಜಿ ೨೦೧೩ರಲ್ಲಿ ನೀಡಿದ್ದು, ೪ ವರ್ಷಗಳ ಬಳಿಕ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಇಲ್ಲದೆ ನೇರವಾಗಿ ಭೂ ಪರಿವರ್ತನೆ ಮಾಡಲಾಗಿದೆ. ಅರಣ್ಯ ಇಲಾಖೆ ಹಲವಾರು ಬಾರಿ ಅಕ್ರಮ ಗಣಿ, ಕ್ರಷರ್ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಹಲವು ಬಾರಿ ಪತ್ರ ಬರೆದಿದ್ದರೂ ಯಾವುದೇ ಸೂಕ್ರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದನ್ನು ವರದಿಯಲ್ಲಿ ಉಲ್ಲೇಖಿಸಿರುವುದನ್ನು ವಿವರಿಸಿದರು.೧೨೦ ಕ್ರಷರ್ಗಳಿಂದ ಗಣಿಗಾರಿಕೆ:
ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆಗಳಿಗೆ ಅನುಮತಿ ನೀಡಬಾರದೆಂಬ ನಿಯಮವನ್ನು ಉಲ್ಲಂಘಿಸಿ ಕ್ರಷರ್ ನಡೆಸಲು ಸಿ-ಫಾರಂ ನೀಡಿರುವುದು ಕಂಡುಬಂದಿದೆ. ೨೦೧೭ರಲ್ಲಿ ಬೇಬಿ ಬೆಟ್ಟದಲ್ಲಿ ೧೨೦ ಕ್ರಷರ್ಗಳು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರೂ ಕ್ರಮ ವಹಿಸದೆ ಸರ್ಕಾರಕ್ಕೆ ಸಾವಿರಾರು ಕೋಟಿ ರು. ನಷ್ಟ ಉಂಟಾಗಲು ಕಾರಣರಾಗಿದ್ದಾರೆ ಎಂದು ತಿಳಿಸಿರುವುದಾಗಿ ದಾಖಲೆ ಸಹಿತ ಹೇಳಿದರು.ಅರಣ್ಯ ಸಂರಕ್ಷಣಾ ಕಾಯಿದೆ, ಗಣಿ ಕಾಯಿದೆ, ಸ್ಫೋಟಕ ಕಾಯ್ದೆ, ಪೊಲೀಸ್ ಕಾಯ್ದೆ, ಪರಿಸರ ಸಂರಕ್ಷಣಾ ಕಾಯಿದೆ ವ್ಯಾಪ್ತಿಗೆ ಈ ಅಕ್ರಮ ಗಣಿಗಾರಿಕೆ ಪ್ರಕರಣ ಒಳಪಡುವುದರಿಂದ ಈ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೆ ಒಪ್ಪಿಸುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪ್ರೊ.ಹುಲ್ಕೆರೆ ಮಹದೇವು, ಗ್ರಾಪಂ ಸದಸ್ಯ ಕೆ.ಸುರೇಂದ್ರ, ಕೃಷ್ಣ, ಮಧು ಇತರರಿದ್ದರು.ಟ್ರಯಲ್ ಬ್ಲಾಸ್ಟ್ ಅನುಮತಿ ಬೇಡ: ಅಣೆಕಟ್ಟು ಸುರಕ್ಷತಾ ಸಮಿತಿಗೆ ಪತ್ರಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್ಎಸ್ ಅಣೆಕಟ್ಟು ಸುತ್ತ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ಅನುಮತಿ ನೀಡಬಾರದು ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅಣೆಕಟ್ಟು ಸುರಕ್ಷತಾ ಸಮಿತಿಗೆ ಪತ್ರ ಬರೆದಿದ್ದಾರೆ.ಶಿಲೆಯ ಮೇಲೆ ನಿಂತಿರುವ ಅಣೆಕಟ್ಟೆಗೆ ಗಣಿಗಾರಿಕೆಯಿಂದ ಅಪಾಯವಿದೆ. ಅಣೆಕಟ್ಟೆಗೆ ೯೨ ವರ್ಷ ವಯಸ್ಸಾಗಿದೆ. ಅದನ್ನು ಜೋಪಾನವಾಗಿ ಕಾಪಾಡುವುದು ಎಲ್ಲರ ಕರ್ತವ್ಯ. ಟ್ರಯಲ್ ಬ್ಲಾಸ್ಟ್ ನಡೆಸಿ ಗಣಿಗಾರಿಕೆ ಅವಕಾಶ ನೀಡಿದಲ್ಲಿ ಅಣೆಕಟ್ಟೆಗೆ ಅಪಾಯ ಕಟ್ಟಿಟ್ಟಬುತ್ತಿಯಾಗಲಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಟ್ರಯಲ್ ಬ್ಲಾಸ್ಟ್ಗೆ ಅನುಮತಿ ನೀಡದಿರುವಂತೆ ಮನವಿ ಮಾಡಿದ್ದಾರೆ.
ಟ್ರಯಲ್ ಬ್ಲಾಸ್ಟ್ಗೆ ಅನುಮತಿ ನೀಡುವುದರಿಂದ ಅಣೆಕಟ್ಟೆಗೆ ಉಂಟಾಗುವ ಅಪಾಯಗಳ ಕುರಿತಂತೆ ಈಗಾಗಲೇ ಹೈಕೋರ್ಟ್ಗೆ ಮನವರಿಕೆ ಮಾಡಿಕೊಡಲಾಗಿದೆ. ಹೈಕೋರ್ಟ್ ಅಣೆಕಟ್ಟು ಸುರಕ್ಷತಾ ಸಮಿತಿಯ ಮುಂದೆ ಅಹವಾಲು ಸಲ್ಲಿಸುವಂತೆ ಸೂಚಿಸಿದ್ದರಿಂದ ಸಮಿತಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.