- ದತ್ತಪೀಠದ ಅಭಿವೃದ್ಧಿ ಹಾಗೂ ದಾಸೋಹಕ್ಕೆ 6602 ಎಕರೆ ಭೂಮಿಯನ್ನು ರಾಜ ಮಹಾರಾಜರು ದಾನ
ಗುರು ದತ್ತಾತ್ರೇಯ ಪೀಠಕ್ಕೆ ರಾಜ ಮಹಾರಾಜರು, ರಾಣಿ ಚೆನ್ನಮ್ಮಾಜಿಯವರು ನೀಡಿದ ಇನಾಂ ಭೂಮಿಗಳನ್ನು ಶಾಖಾದ್ರಿ ಗೌಸ್ ಮೊಹಿದ್ದೀನ್ ಅಕ್ರಮವಾಗಿ ಪರಭಾರೆ ಮಾಡುತ್ತಿದ್ದು, ಇದು ಕಾನೂನು ಬಾಹಿರ ಎಂದು ದತ್ತಪೀಠ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಎಸ್.ಎಂ.ಬಾಷಾ ಆರೋಪಿಸಿದರು.ದತ್ತಪೀಠದ ಅಭಿವೃದ್ಧಿ ಹಾಗೂ ದಾಸೋಹಕ್ಕೆ 6602 ಎಕರೆ ಭೂಮಿಯನ್ನು ರಾಜ ಮಹಾರಾಜರು ದಾನ ನೀಡಿದ್ದು, ಎರಡು ಕಾಫಿ ತೋಟಗಳೂ ಇವೆ. ಚಿಕ್ಕಮಗಳೂರು ನಗರ, ಅತ್ತಿಗುಂಡಿ ಬಂಗಲೆಗಳು ಸಹ ದತ್ತಪೀಠದ ಹೆಸರಿನಲ್ಲಿವೆ. ಇವುಗಳನ್ನು ನೋಡಿಕೊಳ್ಳುತ್ತಿದ್ದ ಪೀಠದ ಹಿಂದಿನ ವ್ಯವಸ್ಥಾಪಕ ಸೈಯ್ಯದ್ ಗೌಸ್ ಮೊಹಿದ್ದೀನ್ ಹಾಗೂ ಅವರ ಮಗ ಸೈಯದ್ ಪೀರ್ ಮೊಹಮ್ಮದ್ ಶಾಖಾದ್ರಿ ಹಲವು ಆಸ್ತಿ ಮಾರಾಟ ಮಾಡಿದ್ದಾರೆ. ಪ್ರಸ್ತುತ ದತ್ತಪೀಠದ ವ್ಯಾಜ್ಯ ಕೋರ್ಟಿನಲ್ಲಿದ್ದರೂ ಆಸ್ತಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ದೂರಿದರು.
ಇನ್ನೂ ಹಲವು ಆಸ್ತಿಗಳ ಮಾರಾಟಕ್ಕೆ ಸಂಚು ನಡೆಸುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಹೊರ ಬರುವವರೆಗೂ ಯಾವುದೇ ಆಸ್ತಿ ಪರಭಾರೆ ಮಾಡುವ ಹಾಗಿಲ್ಲ. ದತ್ತಪೀಠದ ಆಸ್ತಿಗಳನ್ನು ಯಾರೂ ಖರೀದಿಸಬಾರದು. ಖರೀದಿಸಿದರೆ ಕಾನೂನು ಉಲ್ಲಂಘನೆ ಯಾಗಲಿದೆ. ಆರ್ಆರ್, ಎಂಆರ್, ಪಹಣಿ ಆಗುವುದಿಲ್ಲ. ಎಲ್ಲವೂ ಮೂಲತಃ ದತ್ತಪೀಠದ ಹೆಸರಿನಲ್ಲಿದೆ ಎಂದರು.ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ ದತ್ತಪೀಠದಲ್ಲಿ 1400 ವರ್ಷಗಳ ಇತಿಹಾಸದ ಔದುಂಬರ ವೃಕ್ಷಕ್ಕೆ ಹಿಂದಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಶಾಖಾದ್ರಿ ಯ ಸುಳ್ಳು ಮನವಿ ಪುರಸ್ಕರಿಸಿ ಬೇಲಿ ಹಾಕಿ ಪೂಜೆ ಮಾಡದಂತೆ ನಿರ್ಬಂಧಿಸಿದ್ದಾರೆ. ಇತ್ತೀಚೆಗೆ ಕಾನೂನು ಉಲ್ಲಂಘನೆ ಮಾಡಿ ದತ್ತಪೀಠದೊಳಗೆ ಕಲಮ ತಯ್ಯಾಬ ಎಂಬ ಹೊಸ ಆಚರಣೆ ಮಾಡಿದ್ದಾರೆ. ಆದರೆ ಹಿಂದೂಗಳಿಗೆ ಪೀಠದ ಆವರಣದಲ್ಲಿ ಹೋಮ ಹವನ ನಡೆಸಲು ಅವಕಾಶ ನೀಡದೆ ಹೊರಗಡೆ ಶೆಡ್ನಲ್ಲಿ ಪೂಜೆಗೆ ಅವಕಾಶ ಮಾಡಿದ್ದಾರೆ. ಮುಂದಿನ ಹುಣ್ಣಿಮೆ ಒಳಗೆ ದತ್ತಪೀಠದ ಆವರಣದ ಔದುಂಬರ ವೃಕ್ಷದ ಬೇಲಿ ತೆರವು ಮಾಡಿ ಪೀಠದೊಳಗೆ ಹಿಂದೂಗಳಿಗೆ ಹೋಮ ಹವನಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
--ಬಾಕ್ಸ್--
ಬಾಳೆಹೊನ್ನೂರಿನಲ್ಲಿ ದತ್ತಪೀಠದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ದತ್ತಪೀಠ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಎಸ್.ಎಂ.ಬಾಷಾ ಮಾತನಾಡಿದರು. ಆರ್.ಡಿ.ಮಹೇಂದ್ರ, ಉಮೇಶ್, ಮಂಜು ಹಲಸೂರು, ರವಿಚಂದ್ರ, ಜಗದೀಶ್ಚಂದ್ರ, ಸುಮೇಶ್, ಸುರೇಶ್, ಸಂದೀಪ್ ಇದ್ದರು.೦೫ಬಿಹೆಚ್ಆರ್ ೨: ಬಾಷಾ, ಮಾಜಿ ಸದಸ್ಯ ವ್ಯವಸ್ಥಾಪನ ಸಮಿತಿ
೦೫ಬಿಹೆಚ್ಆರ್ ೩: ಆರ್.ಡಿ.ಮಹೇಂದ್ರ, ವಿಹಿಂಪ ಸಹ ಕಾರ್ಯದರ್ಶಿ