ಕಾರವಾರ; ತಾಲೂಕಿನ ಐತಿಹಾಸಿಕ ಸದಾಶಿವಗಡ ಕೋಟೆಯ ಮೇಲೆ ಪುರಾತನ ಸ್ಮಾರಕಗಳನ್ನು ಕೆಡವಿ ಜಂಗಲ್ ಲಾಡ್ಜ್ ನವರು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಕೆ. ಆರ್. ದೇಸಾಯಿ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಸದಾಶಿವಗಡ ಕೋಟೆ ಐತಿಹಾಸಿಕ ಪ್ರಸಿದ್ಧಿ ಪಡೆದ ಕೋಟೆಯಾಗಿದೆ. ಸೋಂದಾ ಸದಾಶಿವರಾಯರು ತಮ್ಮ ಅವಧಿಯಲ್ಲಿ ನಿರ್ಮಾಣ ಮಾಡಿದ್ದ ಕೋಟೆ ಇದಾಗಿದೆ. ಇಲ್ಲಿ ನಿರ್ಮಿಸಲಾಗಿದ್ದ ಕಲ್ಲಿನ ಕುದುರೆ, ಹಿತ್ತಾಳೆ ಲೇಪಿತ ಗೇಟ್ ತೆರವು ಮಾಡಲಾಗಿದೆ. ಅಲ್ಲದೆ, ಈ ಪ್ರದೇಶದಲ್ಲಿದ್ದ ಸುಮಾರು 70ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ ಎಂದು ಆರೋಪಿಸಿದರು.ಪುರಾತತ್ವ ಇಲಾಖೆ ಪ್ರದೇಶದ ಐತಿಹಾಸಿಕ ಕುರುಹುಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸೂಚಿಸಿದೆ. ಈ ಪ್ರದೇಶದ ರಕ್ಷಣೆ ಮಾಡುವುದು ಸರ್ಕಾರ, ಜಿಲ್ಲಾಡಳಿತದ ಜವಾಬ್ದಾರಿ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಒಂದು ಕಲ್ಲು ಸಹ ತೆಗೆಯುವುದು ಕಾನೂನು ಬಾಹಿರವಾಗಿದೆ . ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ ಜಿಲ್ಲಾಡಳಿತ ಈ ಬಗ್ಗೆ ಮಾಹಿತಿಯೇ ಇಲ್ಲ ಎನ್ನುತ್ತಿದ್ದಾರೆ.ಜಂಗಲ್ ಲಾಡ್ಜ್ ಅಧಿಕಾರಿಗಳು ಇಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ₹60 ಲಕ್ಷ ಯೋಜನೆ ರೂಪಿಸಿದ್ದಾರೆ. ಕಾಮಗಾರಿ ನಿರ್ಮಿತಿ ಕೇಂದ್ರಕ್ಕೆ ನೀಡಿದ್ದಾರೆ. ನಿರ್ಮಿತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅವರೇ ಅಧ್ಯಕ್ಷರಾಗಿದ್ದರಿಂದ ಎಡಿಸಿ ಅವರು ಈ ವಿಷಯ ಗಮನಕ್ಕೆ ಇಲ್ಲ ಎಂದು ಹೇಳುತ್ತಿರುವುದು ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದರು.
ಈಗಾಗಲೇ ಪಿಡಿಒ ನಿರ್ಮಿತಿ ಕೇಂದ್ರಕ್ಕೆ ನೋಟಿಸ್ ನೀಡಿದ್ದಾರೆ. ಸದ್ಯ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಆದರೆ ಸರಕಾರಿ ನೌಕರರೇ ಈ ರೀತಿ ಮಾಡಿರುವ ಕಾರಣ ತಕ್ಕ ಕ್ರಮ ಆಗಲೇಬೇಕು. ಘಟನೆ ಬಗ್ಗೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದರೆ, ದೂರು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಈ ಬಗ್ಗೆ ಕ್ರಮ ಆಗದೆ ಇದ್ದರೇ ಪ್ರತಿಭಟನೆ ಮಾಡಿ, ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.ಸನಾತನ ಸ್ವರಾಜ್ ಸಂಘ ಅಧ್ಯಕ್ಷ ವಿನಾಯಕ ಸಾವಂತ, ಉಷಾ ರಾಣಿ, ಅಶೋಕ ಕುಮಾರ, ಅಜಯ ದೇಸಾಯಿ, ಅನಂತ ನಾಯ್ಕ, ಪ್ರಕಾಶ ಗಾಂವ್ಕರ, ಗುರು ಸಾವಂತ, ಧೀರಜ ರಾಣೆ, ಸುನೀಲ ಐಗಳ್ ಇದ್ದರು.