ಒಳಮೀಸಲು ಜಾರಿ ಸಾಮಾಜಿಕ ನ್ಯಾಯದ ಪ್ರತೀಕ

KannadaprabhaNewsNetwork |  
Published : Mar 31, 2026, 01:15 AM IST
ಚಿತ್ರದುರ್ಗ ಮೂರನೇ ಪುಟ ಬಾಟಂ  | Kannada Prabha

ಸಾರಾಂಶ

ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಒಳ ಮೀಸಲು ಕುರಿತ ಸಂವಾದವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯದ ಡಾ.ರವಿಕುಮಾರ್ ನಿಹ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಒಳ ಮೀಸಲಾತಿ ಜಾರಿ ಮಾಡುವುದು ಸಾಮಾಜಿಕ ನ್ಯಾಯದ ಪ್ರತೀಕವೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯದ ಡಾ.ರವಿಕುಮಾರ್ ನಿಹ ಅಭಿಪ್ರಾಯಪಟ್ಟರು.

ಅಂಬೇಡ್ಕರ್ ವಿಚಾರ ವೇದಿಕೆ, ಲುಂಬಿನಿ ಪ್ರಕಾಶನ, ಅನನ್ಯ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಒಳಮೀಸಲಾತಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತೆಲಂಗಾಣ, ಹರಿಯಾಣ, ಆಂಧ್ರಪ್ರದೇಶಗಳಲ್ಲಿ ಈಗಾಗಲೇ ಒಳ ಮೀಸಲಾತಿ ಜಾರಿಗೊಳಿಸಿದ್ದು, ಸುಪ್ರಿಂಕೋರ್ಟ್ ಆದೇಶದ ನಂತರ ಈ ಒಳ ಮೀಸಲಾತಿ ವಿಚಾರವೂ ಎರಡು ಜಾತಿಗಳ ಮಧ್ಯೆ ಸಂಘರ್ಷವಾಗಿ ಏರ್ಪಟ್ಟಿದೆ. ಸದಾಶಿವ ಆಯೋಗ ರಚನೆಯಾದ ನಂತರ ಇಡೀ‌ ಮಾದಿಗ ಸಮುದಾಯ ಸಂಭ್ರಮದಲ್ಲಿರುವಾಗಲೇ ವರದಿಯನ್ನು ಜಾರಿಗೊಳಿಸುವಲ್ಲಿ ಎಲ್ಲ ಸರ್ಕಾರಗಳು ವಿಫಲವಾದವು. ಕೋರ್ಟ್ ಆದೇಶ ನಂತರ ಎಂಪಿರಿಕಲ್ ಡಾಟಾ ನೆಪವೊಡ್ಡಿದ್ದರು. ನಾಗಮೋಹನ್ ದಾಸ ಆಯೋಗ ಸಮರ್ಪಕ ವರದಿ ನೀಡಿದ್ದರೂ ಅನುಷ್ಠಾನ ಮಾಡಿಲ್ಲವೆಂದರು.

ಬಲಗೈ ಜಾತಿ ಮೀಸಲಾತಿಯನ್ನು ತುಸು ಹೆಚ್ಚಾಗಿ ಉಂಡಿದ್ದು ಈಗ ತಾನು ವೈಶಾಲ್ಯತೆ ಮೆರೆದು ಎಡಗೈ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೆ ಅವಕಾಶ ಕೊಡಬೇಕಿದೆ. 56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಹಳೆಯ ಪದ್ದತಿ ಜಾರಿ ಮಾಡುತ್ತಿರುವುದು ವಂಚಿತ ಸಮುದಾಯಗಳಿಗೆ ಮಾಡುವ ವಂಚನೆಯಾಗಿದೆ. ವಿಶ್ವವಿದ್ಯಾಲಯಗಳಲ್ಲಿ‌ ಈಗಾಗಲೇ ಬಹುಪಾಲು ಬಲಗೈ ಸಮುದಾಯವೇ ಹುದ್ದೆ ಪಡೆದದ್ದು ಅದರಲ್ಲಿಯೂ ಮಾದಿಗ ಸಂಬಂಧಿತ ಜಾತಿಗಳ ಹೆಚ್ಚಿರುವ ಜಿಲ್ಲೆಗಳಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಮಾದಿಗ ಸಂಬಂಧಿತ ಜಾತಿಗಳು ಅಭ್ಯರ್ಥಿಗಳಿಲ್ಲ. ರೋಸ್ಟರ್ ಬಿಂದುಗಳ ಅವಕಾಶ ತಪ್ಪುವ ಬಗ್ಗೆ ಪ್ರಸ್ತಾಪಿಸಿ ಉಳಿದ ಹುದ್ದೆಗಳನ್ನು ವಂಚಿಸುತ್ತಿದ್ದಾರೆ. ವಿವಿಗಳಲ್ಲಿ ಒಟ್ಟಾರೆ ಯೂನಿಟ್‌ಗಳಲ್ಲಿ ಮಾಡಿದರೆ ಎಲ್ಲರಿಗೂ ನ್ಯಾಯ ಒದಗುತ್ತದೆ ಎಂದರು.

ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ ಮಾತನಾಡಿ, ಈ ಒಳಮೀಸಲಾತಿ ವಿಚಾರ ಎರಡು ಸಮುದಾಯಗಳ ವಿಚಾರವಾಗಿ ಮಾರ್ಪಟ್ಟಿದ್ದು ಇನ್ನಿತರ ಸೂಕ್ಷ್ಮ ಜಾತಿಗಳು ಗಣನೆಗೆ ಇಲ್ಲದಂತಾಗಿದೆ. ಒಳಮೀಸಲಾತಿ ಹೋರಾಟಕ್ಕೆ ಕೈಜೋಡಿಸುವ ಮಾದಿಗ ಸಂಬಂಧಿತ ಜಾತಿಗಳಿಗೆ ನ್ಯಾಯ ಒದಿಸಿಕೊಡಲು ಮುಂದಾಗಬೇಕಿದೆ ಎಂದರು.

ವೇದಾಂತ ಏಳಂಜಿ ಮಾತನಾಡಿ, ಈಗಾಗಲೇ ಜಾರಿಯಾದ ಹಿಂದಿನ ಆಯೋಗಗಳಾಗಲಿ, ಎಂಪಿರಿಕಲ್ ಡಾಟಾದ ಕಮಿಟಿ, ಇಲಾಖೆ, ಆಯೋಗಗಳಲ್ಲಿ ಮಾದಿಗರೇ ಇಲ್ಲದಿದ್ದರೂ ಈ ಸಮುದಾಯದ ಮೇಲೆ ನಿರಂತರ ದಾಳಿಗೆ ಒಳಗಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಮೀಸಲಾತಿ ಹೆಸರಲ್ಲಿ ಮತ್ತದೇ ಆಲಕ್ಷಿತ ಜನಾಂಗಗಳಿಗೆ ವಂಚಿಸುತ್ತಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಒಳಮೀಸಲಾತಿ ಹೋರಾಟ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕಿದರು. ಕವಿಗೋಷ್ಠಿಯಲ್ಲಿ ಜಾತಿ ಹಿನ್ನೆಲೆ ಚರಿತ್ರೆ, ಸಂಘರ್ಷ, ಹಸಿವು, ಹಂಚಿ ತಿನ್ನುವ ಗುಣದ ತಾಯ್ತನದ ವಿಷಯಗಳನ್ನು ಒಳಗೊಂಡ ವಿಷಯಗಳು ಮೇಳೈಸಿದವು. ಕವಿಗೋಷ್ಠಿಯಲ್ಲಿ ಮೋದೂರು ತೇಜ, ಶಿವಶಂಕರ ಸಿಗೇಹಟ್ಟಿ, ಡಾ.ಆರನಕಟ್ಟೆ ರಂಗನಾಥ, ಬಿದರೋಟಿ ರಂಗನಾಥ, ಡಾ.ಮಮತ ಏಳಂಜಿ, ಶಿಕ್ಷಕ ರಂಗಸ್ವಾಮಿ, ಪ್ರಾಂಶುಪಾಲ ಶಿವರಾಜ್, ಪ್ರಾಧ್ಯಾಪಕ ಡಾ.ಆರ್.ಮಂಜುನಾಥ್, ತರುಣ್ ಎಂ.ಸಂತೋಷ್, ಶ್ರೀನಿವಾಸಮೂರ್ತಿ ಕವನ ವಾಚಿಸಿದರು.

ಅಂಬೇಡ್ಕರ್ ವಿಚಾರ ವೇದಿಕೆಯ ಶ್ರೀನಿವಾಸರಾಜು ದೊಡ್ಡೇರಿ, ವಿಶ್ವಾನಂದ, ಪ್ರಕಾಶ ಯಾದಲಗಟ್ಟೆ, ಶಿಕ್ಷಕ ಸಿದ್ದೇಶ್, ಹನುಮಂತಪ್ಪ ದೊಡಗೂರು, ಡಾ‌ ಪ್ರದೀಪ್, ಡಾ.ಕುಮಾರ್.ಎಚ್ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೪೩೪೦೦ ಕೋಟಿ ರು. ಮೀಸಲು: ಟಿ.ಬಿ.ಜಯಚಂದ್ರ
ಮಹಾವೀರರ ತತ್ವಗಳಿಂದ ಉದ್ವಿಗ್ನತೆ ಶಮನ