ಸಂಘ-ಸಂಸ್ಥೆಗಳ ಸಹಕಾರದಿಂದ ಸರ್ಕಾರಿ ಶಾಲೆಗಳ ಸುಧಾರಣೆ: ಕುಮಾರಗೌಡ್ರ ಪಾಟೀಲ

KannadaprabhaNewsNetwork | Published : Jun 29, 2025 1:32 AM

ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2025- 26ನೇ ಸಾಲಿನ ಸಹಪಠ್ಯ ಚಟುವಟಿಕೆ ಉದ್ಘಾಟನೆ ಹಾಗೂ ಖಾಸಗಿ ಕಂಪನಿಯವರ ನೀಡಿದ ಆಧುನಿಕ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.

ಬ್ಯಾಡಗಿ: ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ಜತೆ ಪೈಪೋಟಿ ನೀಡಬೇಕಿದ್ದು, ಆಧುನಿಕ ಸೌಲಭ್ಯಗಳ ಜತೆ ತಾಂತ್ರಿಕ ಸಲಕರಣೆಗಳ ಅಗತ್ಯವಿದೆ. ಉದ್ಯಮಿಗಳು ಸಂಘ, ಸಂಸ್ಥೆಗಳು ಸಹಕಾರ ನೀಡಿದಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆ ಸಾಧ್ಯವಾಗಲಿದೆ ಎಂದು ಮೆಣಸಿನಕಾಯಿ ವರ್ತಕ ಹಾಗೂ ಸೇವಾರತ್ನ ಪುರಸ್ಕೃತ ಕುಮಾರಗೌಡ್ರ ಪಾಟೀಲ ಅಭಿಪ್ರಾಯಪಟ್ಟರು. ತಾಲೂಕಿನ ಬಿಸಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2025- 26ನೇ ಸಾಲಿನ ಸಹಪಠ್ಯ ಚಟುವಟಿಕೆ ಉದ್ಘಾಟನೆ ಹಾಗೂ ಖಾಸಗಿ ಕಂಪನಿಯವರ ನೀಡಿದ ಆಧುನಿಕ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಸಾಮಗ್ರಿ ಸೇರಿದಂತೆ ಹಲವು ಸೌಲಭ್ಯಗಳಿದ್ದು, ಖಾಸಗಿ ಶಾಲಾ ವಿದ್ಯಾರ್ಥಿಗಳ ಜತೆ ತೀವ್ರ ಪೈಪೋಟಿ ಮಾಡಬೇಕಿದೆ. ಪೀಠೋಪಕರಣಗಳು, ಹೊಸ ತಂತ್ರಜ್ಞಾನದ ಅಗತ್ಯವಿದೆ. ದೊಡ್ಡ ಉದ್ದಿಮೆದಾರರು, ವರ್ತಕರು, ಆರ್ಥಿಕ ಸ್ಥಿತಿವಂತರು, ಗಣ್ಯರು ಸರ್ಕಾರಿ ಶಾಲೆಗಳಿಗೆ ಆರ್ಥಿಕ ಸಹಕಾರ ನೀಡಬೇಕಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಖಾಸಗಿ ಫೈನಾನ್ಸ್ ಕಂಪನಿಯವರು ಮಕ್ಕಳಿಗೆ ಪ್ರೊಜೆಕ್ಟ್‌ ಸೇರಿದಂತೆ ₹1.70 ಲಕ್ಷ ಮೌಲ್ಯದ ಅಧ್ಯಯನ ಸಾಮಗ್ರಿ ವಿತರಿಸಿ, ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿದ್ದಾರೆ. ದೇಶದ ಪ್ರತಿಯೊಬ್ಬರೂ ಶಿಕ್ಷಣ ಕಲಿಯಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೈಕ್ಷಣಿಕ ಯೋಜನೆ ಜಾರಿಗೆ ತಂದಿವೆ ಎಂದರು.

ರೋಟರಿ ಜಿಲ್ಲಾ ಅಸ್ಟಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಮಾತನಾಡಿ, ತಾಲೂಕಿನಲ್ಲಿ ಅತ್ಯುತ್ತಮ ಪಲಿತಾಂಶ ಹಾಗೂ ಗುಣಮಟ್ಟದ ಶಿಕ್ಷಣ ಪೂರೈಸುವ ಶಾಲೆಗಳಲ್ಲಿ ಬಿಸಲಹಳ್ಳಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಶೇಷ ಸ್ಥಾನ ಪಡೆದಿವೆ. ಈ ಹಿಂದಿನ ನಾಲ್ಕಾರು ವರ್ಷಗಳ ಫಲಿತಾಂಶಗಳ ದಾಖಲೆ ಪರಿಶೀಲಿಸಿದಾಗ ಶಾಲೆಯ ಸಾಧನೆ ತಿಳಿಯಲಿದೆ ಎಂದರು.ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಸೇವಾರತ್ನ ಪುರಸ್ಕೃತ ಕುಮಾರಗೌಡ್ರ ಪಾಟೀಲ, ಶಿಕ್ಷಣ ಪ್ರೇಮಿ ಬಸವರಾಜ ಸುಂಕಾಪುರ, ಸಮಾಜ ಸೇವಕ ಮಂಜುನಾಥ ಉಪ್ಪಾರ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.ಈ ವೇಳೆ ಖಾಸಗಿ ಕಂಪನಿ ಮುಖ್ಯಸ್ಥ ಮುರಳೀಕೃಷ್ಣನ್, ಬಾಲರಾಜ ಅಶ್ವಿಕ್, ಮುಖ್ಯ ಶಿಕ್ಷಕ ಜೀವರಾಜ ಛತ್ರದ, ಸೌಭಾಗ್ಯ ಕುಣತಿ, ಶ್ರೀಧರ ಹಣಗಿ, ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ ಮಾಗೆ, ಶಂಭಣ್ಣ ಎಲಿಗಾರ, ಕರಿಯಣ್ಣ ಕೊಲ್ಲಾಪುರ ಇತರರಿದ್ದರು.