ಶಿರಹಟ್ಟಿ: ಇಲ್ಲಿಯ ತಾಪಂ ಸಾಮರ್ಥ್ಯ ಸೌಧದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಅವರು ಅಸಮರ್ಪಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಶಾಂತ ಕುಲಕರ್ಣಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಸಭೆಯಲ್ಲಿಯೇ ಈ ಕುರಿತು ಪ್ರಶ್ನೆ ಕೇಳಿದರೂ ಇವತ್ತಿನ ವರೆಗೂ ನಿಮ್ಮ ಬಳಿ ಸಮರ್ಪಕ ಮಾಹಿತಿ ಇಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ಸದ್ಯ ನಿಮ್ಮ ಬಳಿ ಮಾಹಿತಿ ಇಲ್ಲ ಎಂದಾದರೆ ನಾನೇ ನಿಮ್ಮ ಇಲಾಖೆಗೆ ಬರುತ್ತೇನೆ, ಅಲ್ಲಿಯೇ ಸಮರ್ಪಕ ಮಾಹಿತಿ ಕೊಡಿ ಎಂದರು.
ಒಟ್ಟು ೨೬೦ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಹಾಗೂ ೨೯೯ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯುವ ಗುರಿ ಬಗ್ಗೆ ಇಲ್ಲಿ ಮಾಹಿತಿ ಕೊಟ್ಟಿದ್ದೀರಿ. ನೀವೇ ನಿಮ್ಮ ಜಿಲ್ಲಾ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಿಗೆ ೧೨೬ ಹೆಕ್ಟೇರ್ ಈರುಳ್ಳಿ, ೩೪೪ ಹೆಕ್ಟೇರ್ ಮೆಣಸಿನಕಾಯಿ ಬಿತ್ತನೆ ಗುರಿ ಇದೆ ಎಂದು ಮಾಹಿತಿ ನೀಡಿದ್ದು, ಇದರಲ್ಲಿ ಯಾವುದು ಸರಿ ಎಂದು ಪ್ರಶ್ನಿಸಿದರು.ಬಿತ್ತನೆ ಪ್ರದೇಶದ ಬಗ್ಗೆ ಶೂನ್ಯ ಕ್ಷೇತ್ರ ಎಂದು ಸಭೆಗೆ ಮಾಹಿತಿ ನೀಡಿದ್ದು, ಜಿಲ್ಲಾ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಮೆಣಸಿನಕಾಯಿ ೩೦ ಹೆಕ್ಟೇರ್ ಹಾಗೂ ಈರುಳ್ಳಿ ೨೫ ಹೆಕ್ಟೇರ್ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಎಲ್ಲ ಮಾಹಿತಿ ಅವರಿಗೆ ನಿಮ್ಮಿಂದಲೇ ಹೋಗುತ್ತಿದ್ದರೂ ಅಲ್ಲೊಂದು ಮಾಹಿತಿ, ಇಲ್ಲೊಂದು ಮಾಹಿತಿ ಕೊಟ್ಟರೆ ಹೇಗೆ ಎಂದರು.
ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಹಿರಿಯ ಅಧಿಕಾರಿಗಳು, ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಸಭೆಗೆ ಬರುವಾಗ ಎಲ್ಲ ದಾಖಲೆಗಳು ಮತ್ತು ಅಂಕಿ-ಅಂಶಗಳನ್ನು ಸಿದ್ಧಪಡಿಸಿಕೊಂಡು ಬರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಲೆ ಕೊಠಡಿಗಳ ದುರಸ್ತಿ, ಸ್ವಚ್ಛತೆ, ಬಣ್ಣಕ್ಕೆಂದು ಸಾಕಷ್ಟು ಅನುದಾನ ಲಭ್ಯವಿದ್ದರೂ ತಾಲೂಕಿನಲ್ಲಿ ೩೦ ಶಾಲಾ ಕೊಠಡಿಗಳು ನಿರ್ಮಾಣವಾಗಬೇಕು ಎಂದು ಹೇಳುತ್ತಿದ್ದು, ಶಾಲೆ ಪ್ರಾರಂಭಕ್ಕೂ ಪೂರ್ವದಲ್ಲಿಯೇ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಈ ಹಿಂದಿನ ಸಭೆಯಲ್ಲಿ ತಿಳಿಸಿದ್ದರೂ ವಿಳಂಬ ಮಾಡಿದ್ದೀರಿ ಎಂದು ದೂರಿದರು.