-ಬಾಂಧವ್ಯ ವೃದ್ಧಿಸುವ ನಾಗರ ಪಂಚಮಿ; ಶಂಭುಲಿಂಗಪ್ಪ ಅರುಣಿ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ಮರಗಮ್ಮ ದೇವಿ ದೇವಸ್ಥಾನದ ಹತ್ತಿರ ನೂತನ ನಾಗರ ಕಟ್ಟೆಯ ಮೇಲೆ ನಾಗದೇವರುಗಳ ಪ್ರತಿಷ್ಠಾಪನೆ ಕಾರ್ಯಕ್ರಮವು ವೇದಮೂರ್ತಿ ಶಾಂತವೀರಯ್ಯ ಸ್ವಾಮಿ, ಶರಣಯ್ಯಸ್ವಾಮಿ ಪತ್ರಿಮಠ ಇವರುಗಳ ವೈದಿಕತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು.ಈ ವೇಳೆ ಮಾತನಾಡಿದ ಅರಿವು-ಆಚಾರ ಸದ್ಭಾವನಾ ಸಂಸ್ಥೆಯ ಮುಖ್ಯಸ್ಥ ಶಂಭುಲಿಂಗಪ್ಪ ಅರುಣಿ, ನಾಗಾರಾಧನೆ ಪುರಾತನ ಕಾಲದಿಂದ ನಡೆದು ಬಂದ ನಮ್ಮ ಭಾರತೀಯ ಸನಾತನ ಸಂಸ್ಕೃತಿಯಾಗಿದೆ. ನಾಗಪಂಚಮಿಯ ಔಚಿತ್ಯ ಸಕಲ ಜೀವರಾಶಿಗಳಲ್ಲಿ ದೈವತ್ವವನ್ನು ಕಾಣುವುದು ಎಂಬುದಾಗಿದೆ. ವಿಶೇಷವಾಗಿ ಇದು ತವರಿನ ಬಾಂಧವ್ಯ ಸಾರುವ ಹೆಣ್ಣು ಮಕ್ಕಳಿಗಾಗಿಯೇ ಇರುವ ನಾಗ ಪಂಚಮಿ ಹಬ್ಬವಾಗಿದೆ. ಕುಟುಂಬದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿ, ಬಾಂಧವ್ಯ ವೃದ್ಧಿಸುವ ದಿಸೆಯಲ್ಲಿ ಹಬ್ಬಗಳು ಮಹತ್ವ ಪಡೆದಿವೆ ಎಂದರು.
ನಾಗರಪಂಚಮಿಯ ದಿನವಾದ ಸೋಮವಾರ ಗ್ರಾಮದ ಮಹಿಳೆಯರು ನೂತನ ನಾಗರ ಕಟ್ಟೆಯ ನಾಗ ದೇವರಿಗೆ ಪೂಜಿಸಿ, ಹಾಲೆರೆದು ನೈವೈದ್ಯ ಅರ್ಪಿಸಿ ಸಂಭ್ರಮಿಸಿದರು. ಇದೇ ವೇಳೆಯಲ್ಲಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನವೀಕೃತಗೊಂಡ ನವಗ್ರಹ ಕಟ್ಟೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಗಣ್ಯರು, ಯುವಕರು ಹಾಗೂ ಮಹಿಳೆಯರು ಮಕ್ಕಳು ಇದ್ದರು.
17ವೈಡಿಆರ್10