- ವಿವಿಧ ಮಠಾಧೀಶರು, ಧರ್ಮಗುರುಗಳು, ಗಣ್ಯರು ಭಾಗಿ: ಅಧ್ಯಕ್ಷ ಹುಲಿಗೇಶ್
ಕನ್ನಡಪ್ರಭ ವಾರ್ತೆ ಹರಿಹರ
ನಗರದ ಮೋಚಿ ಕಾಲೋನಿಯಲ್ಲಿರುವ ದಿ ಇಂಡಿಯನ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ನೂತನವಾಗಿ ನಿರ್ಮಿಸಿರುವ ಇಂಡಿಯನ್ ಸೌಹಾರ್ದ ಸೌಧ ಉದ್ಘಾಟನೆ ಏ.20ರಂದು ನಾಡಿನ ವಿವಿಧ ಮಠಾಧೀಶರು ಹಾಗೂ ಧರ್ಮ ಗುರುಗಳ ಸಮ್ಮುಖದಲ್ಲಿ ಜರುಗಲಿದೆ ಎಂದು ಸಂಸ್ಥೆ ಅಧ್ಯಕ್ಷ ಸಿ.ಎನ್ ಹುಲಿಗೇಶ್ ತಿಳಿಸಿದರು.ನಗರದಲ್ಲಿ ನೂತನವಾಗಿ ನಿರ್ಮಿಸಿದ ಇಂಡಿಯನ್ ಸೌಹಾರ್ದ ಸೌಧದಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಸೊಸೈಟಿ ಎಲ್ಲ ಸದಸ್ಯರ ಸಹಕಾರದಿಂದ ಸುಮಾರು ₹2 ಕೋಟಿ ವೆಚ್ಚದಲ್ಲಿ ಈ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಈ ಸುಂದರ ಕಟ್ಟಡದ ಲೋಕಾರ್ಪಣೆ ಸಮಾರಂಭವನ್ನು ಏ.20ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ರಸ್ತೆಯ ಶ್ರೀ ಸಿದ್ದೇಶ್ವರ ಪ್ಯಾಲೆಸ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ, ಎರೆಹೊಸಳ್ಳಿ ರೆಡ್ಡಿ ಗುರು ಪೀಠದ ವೇಮನಾನಂದ ಶ್ರೀ, ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀ ಹರಿಹರ ಆರೋಗ್ಯ ಮಾತೆ ಬಸಲಿಕ ಚರ್ಚಿನ ಫಾದರ್ ಜಾರ್ಜ್ ಪ್ರಧಾನ ಧರ್ಮಗುರುಗಳು ಸಮಾರಂಭದ ಸಾನ್ನಿಧ್ಯ ವಹಿಸುವರು.
ಸಿಇಒ ರವೀಂದ್ರನಾಥ್ ಮಾತನಾಡಿ ಸಮಾರಂಭಕ್ಕೆ ವಿಶೇಷ ಆಹ್ವಾನಿತರನ್ನಾಗಿ ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಎಸ್.ರಾಮಪ್ಪ, ನಮ್ಮ ಸಂಸ್ಥೆಯ ಲೀಗಲ್ ಅಡ್ವೈಸರ್ ಹಾಗೂ ವಕೀಲ ಎಂ.ನಾಗೇಂದ್ರಪ್ಪ, ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ನಂದಿಗಾವಿ, ಎಂಜಿನಿಯರ್ ಕಿರಣ್ ಕುಮಾರ್ ಲದ್ವಾ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ದಾವಣಗೆರೆ ಸಹಕಾರ ಸಂಘಗಳ ನಿಬಂಧಕ ಮಧು ಶ್ರೀನಿವಾಸ್ ಟಿ., ಸಹಾಯಕ ನಿಬಂಧಕ ಗೋಪಾಲ್ ಸಿ., ಲೆಕ್ಕ ಪರಿಶೋಧಕ ಡಾ. ಕೆ.ಮಹೇಶ್ವರಪ್ಪ ಜೊತೆಗೆ ಎಲ್ಲ ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಸೊಸೈಟಿ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಸೈಯದ್ ಆಸೀಫ್ ಅಹಮದ್, ರಿಯಾಜ್ ಅಹಮದ್, ಮಾರುತಿ ಶೆಟ್ಟಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
- 16HRR.01: