ರಂಗಚಾವಡಿ ವರ್ಷದ ಹಬ್ಬ ಉದ್ಘಾಟನೆ: ಕಿಶೋರ್‌ ಶೆಟ್ಟಿಗೆ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Nov 11, 2024 11:50 PM

ಸಾರಾಂಶ

ರಂಗ ಚಾವಡಿ ಮಂಗಳೂರು ಆಶ್ರಯದಲ್ಲಿ ಸುರತ್ಕಲ್‌ ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ ನ ಸಹಯೋಗದಲ್ಲಿ ಸುರತ್ಕಲ್ ಬಂಟರ ಭವನದಲ್ಲಿ ರಂಗಚಾವಡಿ ವರ್ಷದ ಹಬ್ಬ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಹಿರಿಯ ರಂಗಕರ್ಮಿ ಕಿಶೋರ್ ಡಿ. ಶೆಟ್ಟಿ ಅವರು ಸಾವಿರಾರು ಕಲಾವಿದರಿಗೆ ಸ್ಫೂರ್ತಿ ತುಂಬಿದ್ದು ಅವರನ್ನು ಪಡೆದಿರುವುದು ನಮ್ಮ ತುಳುನಾಡಿನ ಸಮಸ್ತ ಕಲಾವಿದರ ಪುಣ್ಯ. ಬಡ ಹೆಣ್ಣು ಮಕ್ಕಳ ಮದುವೆ, ಬಡಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಕಿಶೋರ್ ಶೆಟ್ಟಿ ಅವರು ಸದಾ ನೆರವು ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಚಲನಚಿತ್ರ ನಿರ್ಮಾಪಕ ಡಾ.ಸಂಜೀವ ದಂಡೆಕೇರಿ ಹೇಳಿದರು.

ರಂಗ ಚಾವಡಿ ಮಂಗಳೂರು ಆಶ್ರಯದಲ್ಲಿ ಸುರತ್ಕಲ್‌ ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ ನ ಸಹಯೋಗದಲ್ಲಿ ಸುರತ್ಕಲ್ ಬಂಟರ ಭವನದಲ್ಲಿ ಜರುಗಿದ ರಂಗಚಾವಡಿ ವರ್ಷದ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಲಯನ್ ಕಿಶೋರ್ ಡಿ.ಶೆಟ್ಟಿ ಅವರಿಗೆ ರಂಗಚಾವಡಿ ಪ್ರಶಸ್ತಿ-2024 ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನನ್ನ ತಂಡದ ಕಲಾವಿದರಿಂದ ನಾನಿದ್ದೇನೆ, ಅವರಿಲ್ಲದೆ ನಾನೇನೂ ಇಲ್ಲ. ನಾನು ಮಾಡಿರುವ ದಾನ ಧರ್ಮ ಏನೂ ಇಲ್ಲ. ನೊಂದವರಿಗೆ ನೆರವಾಗುವುದು ದೇವರ ಸೇವೆ. ಇದು ನನಗೆ ಅಪ್ಪ ಅಮ್ಮ ಕಲಿಸಿದ್ದು. ಈ ಪ್ರಶಸ್ತಿಯನ್ನು ಬಹಳ ಖುಷಿಯಿಂದ ಸ್ವೀಕರಿಸುತ್ತಿದ್ದೇನೆ. ಇಂತಹ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆಯೆಂದು ಹೇಳಿದರು.

ಉದ್ಯಮಿ ಶ್ರೀ ಡೆವಲಪರ್ಸ್ ಸಂಸ್ಥೆಯ ಮಾಲೀಕ ಗಿರೀಶ್‌ ಎಂ ಶೆಟ್ಟಿ ಕಟೀಲು ಮಾತನಾಡಿ ಬಾಳ ಜಗನ್ನಾಥ ಶೆಟ್ಟಿ ಅವರು ರಂಗಭೂಮಿ ಕಲಾವಿದರನ್ನು ಗುರುತಿಸಲು ಹುಟ್ಟುಹಾಕಿದ ರಂಗಚಾವಡಿ ಸಂಘಟನೆ ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕಲಾವಿದರನ್ನು ಗುರುತಿಸುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಉದ್ಯಮಿ, ಸಮಾಜಸೇವಕ ಅನಿಲ್ ಶೆಟ್ಟಿ ತೇವು-ಸೂರಿಂಜೆ, ಬಂಟರ ಸಂಘ ಸುರತ್ಕಲ್ ನ ನಿರ್ದೇಶಕ ಜಗದೀಶ್ ಶೆಟ್ಟಿ ಪೆರ್ಮುದೆ, ಜಯಕಿರಣ ಪತ್ರಿಕೆ ಮಾಲೀಕ ಪ್ರಕಾಶ್ ಪಾಂಡೇಶ್ವರ್, ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ರಮೇಶ್‌ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್. ಪೂಂಜ, ಉದ್ಯಮಿ ಜಯರಾಮ ಶೇಖ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ರಂಗಚಾವಡಿ ಸಂಸ್ಥೆಯ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ, ಚಿತ್ರಾ ಜೆ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಗಿರೀಶ್ ಸಾಗರ ಪ್ರಾರ್ಥಿಸಿದರು. ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ ಅಭಿನಂದನಾ ಭಾಷಣಗೈದರು.‌ ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಗಾನಲಹರಿ, ಲಯನ್ ಕಿಶೋರ್ ಶೆಟ್ಟಿಯವರ ಸಾರಥ್ಯದ ಶ್ರೀ ಲಲಿತೆ ಕಲಾವಿದರಿಂದ ನವನೀತ ಶೆಟ್ಟಿ ರಚಿಸಿರುವ ‘ಶನಿ ಮಹಾತ್ಮೆ’ ತುಳು ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

Share this article